ಪಾಲಾರ್ ಪತ್ರಿಕೆ | Palar Pathrike
ಕನಕಪುರ: ನಮ್ಮ ತಾಲ್ಲೂಕಿಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಹಿಂದಕ್ಕೆ ಪಡೆದ ರಾಜ್ಯ ಬಿಜೆಪಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಮನಗರ ಜಿಲ್ಲೆ ನಮ್ಮಿಂದಲೇ ಅಭಿವೃದ್ಧಿಯಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯ ವಕ್ತಾರೆ ಹಣಕಡಬೂರು ರತ್ನಮ್ಮ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಹರಿಹಾಯ್ದರು.
ನಗರದ ಬೂದಿಕೆರೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಇತ್ತೀಚಿಗಷ್ಟೇ ಹಾರೋಹಳ್ಳಿ ತಾಲ್ಲೂಕು ಉದ್ಘಾಟನೆ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವಥ್ ನಾರಾಯಣ್ ಅವರು ಹಾರೋಹಳ್ಳಿ ತಾಲ್ಲೂಕು ರಚನೆ ಮಾಡಿದ್ದು ನಮ್ಮ ಸಾಧನೆ, ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ನಮ್ಮಿಂದಲೇ ಆಗಿದ್ದು ಜಿಲ್ಲೆಯೂ ಅಭಿವೃದ್ಧಿ ಕಂಡಿದೆ ಎಂದು ಹೇಳಿಕೊಂಡಿ ರುವುದು ನಾಚಿಕೆಗೇಡಿನ ವಿಷಯಾಗಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ರಾಮನಗರಕ್ಕೂ ಎಂತಹ ನಂಟಿದೆ ಎಂಬುದು ರಾಜ್ಯದ ಜನರಿಗೆ ತಿಳಿದಿದ್ದು. ಜಿಲ್ಲೆ ಯಾರಿಂದ ಅಭಿವೃದ್ಧಿ ಕಂಡಿದೆ ಎಂಬುದು ಈ ಕ್ಷೇತ್ರದ ಮತದಾರರು
ಅರಿತುಕೊಂಡಿದ್ದಾರೆ. ಯಾರೋ ಮಾಡಿದ್ದ ಅಭಿವೃದ್ಧಿಗೆ ಮತ್ಯಾರೋ ಬಂದು ಲೇಬಲ್ ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮನಗರ ಕ್ಷೇತ್ರಕ್ಕೆ ಅಶ್ವಥ್ ನಾರಾಯಣ್ ಅವರ ಕೊಡುಗೆ ಏನು ಹಾರೋಹಳ್ಳಿ ತಾಲೂಕು ಕೇಂದ್ರವನ್ನು ಶಾಸಕರು ಬರುವ ಮುನ್ನವೇ ತರಾತುರಿಯಲ್ಲಿ ಸಚಿವರು ಉದ್ಘಾಟನೆ ಮಾಡಿದ ಉದೇಶವೇನು? ರಾಮನಗರವನ್ನು ಜಿಲ್ಲೆ ಮಾಡಿದ್ದು ಯಾರು? ಹಾರೋಹಳ್ಳಿಯನ್ನು ತಾಲ್ಲೂಕಾಗಿ ಘೋಷಣೆ ಮಾಡಿ ಅನುದಾನ ಮೀಸಲಿಟ್ಟವರು ಯಾರು? ಉಸ್ತುವಾರಿ ಸಚಿವರಿಗೆ ಮಾಹಿತಿ ಕೊರತೆ ಇರಬಹುದು ಸಚಿವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಓಟಿಗಾಗಿ ಹಾರೋಹಳ್ಳಿ ತಾಲೂಕು ರಚನೆ ಕ್ರೆಡಿಟ್ ತೆಗೆದು ಕೊಳ್ಳಲು ಹಾರೋಹಳ್ಳಿಯನ್ನು ತಾಲ್ಲೂಕು ಮಾಡಿದ್ದೆ ನಾವು ಎಂದು ಹೇಳಿಕೊಳ್ಳುತ್ತಿದ್ದಾರೆ. ತಾವು ಮಾಡಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳ ಬೇಕಾದ ಸಚಿವರು ಯಾರೋ ಮಾಡಿದ ಅಭಿವೃದ್ಧಿಯ ಹೆಸರು ಹೇಳಿಕೊಂಡು ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಪ್ರಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಹಟಕ್ಕೆ ಬಿದ್ದವರಂತೆ ಬಿಜೆಪಿಯ ರಾಷ್ಟ್ರ ನಾಯಕರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ತಾಲ್ಲೂಕಿಗೆ ಘೋಷಣೆಯಾಗಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಜೆಡಿಎಸ್ಗೆ ಮತ ನೀಡಿದರೆ ಕಾಂಗ್ರೆಸ್ಗೆ ಮತ ನೀಡಿದಂತೆ ಎಂದು ಹೇಳಿಕೊಂಡು ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಈ ರಾಜ್ಯದ ಜನರು ದಡ್ಡರೆಲ್ಲ ಎಲ್ಲರಿಗೂ ಪ್ರಬುದ್ಧತೆ ಇದೆ .ಜೆಡಿಎಸ್ ಮೇಲೆ ಜನರಿಗೆ ವಿಶ್ವಾಸವಿದೆ . ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ಕುಮಾರಣ್ಣನ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ ಚಾರ್ ಮಾತನಾಡಿ ರಾಮನಗರ ಜಿಲ್ಲೆಗೆ ಜೆಡಿಎಸ್ ಕೊಡಗೆಯನ್ನು ತಮ್ಮದೆಂದು ಹೇಳಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ತಾಲ್ಲೂಕುಗಳಿವೆ ಎಂಬ ಅರಿವೇ ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಸಚಿವರು ತಾಲೂಕಿನ ಕಡೆಗೆ ತಲೆಯನ್ನು ಹಾಕಿ ಮಲಗಿಲ್ಲ ಕನಕಪುರ ತಾಲ್ಲೂಕಿಗೆ ಬರಲು ಸಚಿವರಿಗೆ ಯಾರ ಭಯ ಇದೆ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಧಿಕಾರವಿದ್ದಿದ್ದರೆ ಸಾತನೂರು ತಾಲೂಕನ್ನಾಗಿ ರಚನೆ ಮಾಡುತ್ತಿದ್ದರು . ಉಸ್ತುವಾರಿ ಸಚಿವರಿಗೆ ಅಧಿಕಾರವಿದೆ ಸುಮ್ನೆ ಬಾಯಿ ಮಾತಿಗೆ ಅಭಿವೃದ್ಧಿ ಬಗ್ಗೆ ಮಾತನಾಡದೆ ಸಾತನೂರು ತಾಲೂಕು ರಚನೆ ಮಾಡಿ ತೋರಿಸಲಿ ಅದನ್ನು ಬಿಟ್ಟು ಏನನ್ನು ಮಾಡದೆ ನಮ್ಮಿಂದಲೇ ಅಭಿವೃದ್ಧಿಯಾಗಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಕಾಡಹಳ್ಳಿ ಅನುಕುಮಾರ್ ಮಾತನಾಡಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ರಾಮನಗರ ಜಿಲ್ಲೆಯಿಂದ ಚುನಾಯಿತರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ . ಕುಮಾರಸ್ವಾಮಿ ದೇವೇಗೌಡರಿಗೂ ರಾಮನಗರಕ್ಕೂ ನಂಟಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ರಾಮನಗರಕ್ಕೆ ಏನು ಸಂಬಂಧ ಇದೆ. ಕುಮಾರಸ್ವಾಮಿಯವರು ಸಾತನೂರು ಟೌನ್ಶಿಪ್ ಮಾಡಬೇಕೆಂದು ಘೋಷಣೆ ಮಾಡಿದ್ದರು. ಅನಂತರ ಬಂದ ಸರ್ಕಾರಗಳು ಕಾರ್ಯಗತ ಮಾಡ್ಲಿಲ್ಲ. ನಿಮಗೆ ಅದರ ಸಂಪೂರ್ಣ ಮಾಹಿತಿ ಸಮೇತ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಲಿಲ್ಲ. ರಾಮನಗರ ಎಂದರೆ ದೇವೇಗೌಡರು ಕುಮಾರಸ್ವಾಮಿ. ಆದರೆ ಜಿಲ್ಲೆಗೆ ಬಿಜೆಪಿ ಕೊಡುಗೆ ಏನು ಇಲ್ಲ. ಸಚಿವರು ಸಾತನೂರಿನಲ್ಲಿ ಬಂದು ತೊಡೆ ತಟ್ಟಲಿ ಸಾತನೂರು ತಾಲ್ಲೂಕನ್ನಾಗಿ ಘೋಷಣೆ ಮಾಡಲಿ ನಾವು ಸಹ ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದು ಸವಾಲು ಹಾಕಿದರು.
ಜೆಡಿಎಸ್ ಮುಖಂಡ ಕುರುಪೇಟೆ ಮಿಲ್ ನಾಗ, ಸ್ವಾಮಿ, ಮಂಜು, ಶೇಖರ್, ನಾಗರಾಜು, ಸೈಯದ್ ಸಾಮೀರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಮ್ಮ ಸೇರಿದಂತೆ ಇನ್ನೂ ಅನೇಕ ಜೆಡಿಎಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.