Thursday, April 25, 2024
spot_img
HomeBangaloreಆಂಧ್ರಪ್ರದೇಶ ಪೊಲೀಸರು ತಮ್ಮನ್ನು ಬಂಧಿಸಿಲ್ಲ; ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಹೇಳಿಕೆ ನೀಡಿದ್ದೇನೆ

ಆಂಧ್ರಪ್ರದೇಶ ಪೊಲೀಸರು ತಮ್ಮನ್ನು ಬಂಧಿಸಿಲ್ಲ; ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಹೇಳಿಕೆ ನೀಡಿದ್ದೇನೆ

ಪಾಲಾರ್ ಪತ್ರಿಕೆ | Palar Pathrike

ಬೆಂಗಳೂರು: ನನ್ನ ಅಣ್ಣನ ಮಗನ ಕುಟುಂಬಕ್ಕೆ ಸಂಬಂಧಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಏಲೂರು ಪೊಲೀಸರು ತಮ್ಮನ್ನು ವಿಚಾರಣೆಗೆ ಕರೆದಿದ್ದರು. ಆದರೆ ತಮ್ಮನ್ನು ಪೊಲೀಸರು ಬಂಧಿಸಿಲ್ಲ. ಅಂತಹ ಅಪರಾಧವನ್ನು ತಾವು ಮಾಡಿಲ್ಲ. ತಮ್ಮನ್ನು ಬಂಧಿಸಿರುವುದಾಗಿ ವರ್ಣರಂಜಿತ ವರದಿ ಮಾಡಿರುವುದು ಸರಿಯಲ್ಲ ಎಂದು ಅಟ್ಟಿಕಾ ಗೋಲ್ಡ್ ಬೊಮ್ಮನಹಳ್ಳಿ ಬಾಬು ಸ್ಪಷ್ಟಪಡಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮಗೆ ಎರಡು ಮೂರು ಮದುವೆಯಾಗಿಲ್ಲ. ನನಗಿರುವುದು ಒಬ್ಬಳೇ ಹೆಂಡತಿ, ಮಗ. ಮಗಳು ಇದ್ದಾಳೆ.  ಆದರೆ ಮಾಧ್ಯಮಗಳು ತಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ತಪ್ಪು ವರದಿ ಮಾಡಿದ ಕಾರಣ ತಮಗೆ ಮಾನಸಿಕ ಹಿಂಸೆಯಾಗಿದ್ದು,  ತಮ್ಮ ವೈಕ್ತಿತ್ವಕ್ಕೆ ಧಕ್ಕೆಯಾಗಿದೆ. ತಮ್ಮ ಮೇಲೆ ಅನಗತ್ಯವಾಗಿ ತೇಜೋವಧೆ ನಡೆಯುತ್ತಿದ್ದು, ಇದು ತಕ್ಷಣವೇ ನಿಲ್ಲಬೇಕು ಎಂದು ಮನವಿ ಮಾಡಿದರು.  ನಾನು ನನ್ನ ಅಣ್ಣನ ಮಗನನ್ನು ಸಾಕಿಕೊಂಡಿದ್ದೆ. ಆತನನ್ನು ಎಂ.ಬಿ.ಬಿ.ಎಸ್ ಓದಿಸಿದ್ದೆ. 9 ತಿಂಗಳ ಹಿಂದೆ ಆಂಧ್ರಪ್ರದೇಶದ ಮೇಯರ್ ಒಬ್ಬರ ಮಗಳಿಗೂ, ಅಣ್ಣನ ಮಗನಿಗೂ ಅದ್ದೂರಿಯಾಗಿ ಮದುವೆ ಮಾಡಿಸಿದೆ. ಇದಾದ ನಂತರ ಆ ಹೆಣ್ಣಿನ ಮನೆಯ ಕುಟುಂಬದವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಪಿತೂರಿ ಮಾಡಲು ಶುರುಮಾಡಿದರು. ನಾನು ಸಾಕಿದ ಅಣ್ಣನ ಮಗ ನನ್ನ ವಿರುದ್ಧ ತಿರುಗಿಬಿದ್ದ. ಆಗ ನಾನು ಫ್ರೇಜರ್ ಟೌನ್ ಬಳಿ ಇರುವ ಮನೆ ಮತ್ತು ಕಾರು ನೀಡಿ ಆತನನ್ನು ಮನೆಯಿಂದ ಹೊರ ಹಾಕಿದೆ. ಮೇಯರ್ ಆಗಿದ್ದ ಅವರ ಮಾವ ಕೂಡ ಸಾಕು ಮಗನಿಗೆ ಒಂದು ಕೋಟಿ ರೂ ನೀಡಿರುವುದಾಗಿ ಮಾಹಿತಿ ಇದೆ. ಆತ ಈಗ ಆತ ಯಾವುದೋ ಕಂಪೆನಿ ಸ್ಥಾಪಿಸಿ ವ್ಯವಹಾರ ನಡೆಸುತ್ತಿರಬಹುದು ಎಂದರು. 

ಮದುವೆಯಾದ ಬಳಿಕ ಕೌಟುಂಬಿಕ ಕಲಹದ ಕಾರಣ ಮೇಯರ್ ಕುಟುಂಬದವರು ನನ್ನ ಮೇಲೆ ಮತ್ತು ನನ್ನ ಹೆಂಡತಿ ಮತ್ತು ಮಗನ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ದೂರು ನೀಡಿದ್ದಾರೆ. ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ನಮ್ಮನ್ನು ಏಲೂರು ಪೊಲೀಸರು ಕರೆದುಕೊಂಡು ಹೋಗಿದ್ದರು. ಮೂಲಭೂತವಾಗಿ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ 41 ದಿನಗಳ ನೋಟೀಸ್ ನೀಡಬೇಕು. ಈ ಅವಧಿಯಲ್ಲಿ ಯಾವುದಾದರೂ ಒಂದು ದಿನ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಬೇಕು. ಈ ಪ್ರಕರಣದಲ್ಲಿ ಹೆಸರಿಸಲಾದ ಯಾರನ್ನೂ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ ಎಂದರು.  ಇಷ್ಟಾದರೂ ಮೇಯರ್ ಅವರ ಒತ್ತಡಕ್ಕೆ ಕಟ್ಟುಬಿದ್ದು ಅಲ್ಲಿನ ಪೊಲೀಸರು ತಮ್ಮನ್ನು ವಿಚಾರಣೆಗೆ ಬರಲೇಬೇಕು ಎಂದು ಹೇಳಿ ಬಲವಂತವಾಗಿ ಕರೆದುಕೊಂಡು ಹೋದರು. ವಿಚಾರಣೆ ಸಂದರ್ಭದಲ್ಲಿ ಪೊಲೀಸರ ವರ್ತನೆಗೆ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಕುಟುಂಬದ ಮೂವರು ಸದಸ್ಯರ ಹೇಳಿಕೆಗಳನ್ನು ಪ್ರತ್ಯೇಕವಾಗಿ ದಾಖಲಿಸಿದ್ದೇವೆ. ಆದರೆ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಎದುರಾಳಿಗಳು ಹೆಸರಿಸಿರುವ ನನ್ನ ಅಣ್ಣನ ಮಗ ಈಗ ಎಲ್ಲಿದ್ದಾನೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು.  ಆದರೆ ಮಾಧ್ಯಮಗಳು ತಮ್ಮ ವಿರುದ್ಧ ಇಲ್ಲ ಸಲ್ಲದ ವರದಿಗಳನ್ನು ಮಾಡಿವೆ. ನನಗೆ ಎರಡನೇ ಹೆಂಡತಿ ಇದ್ದು, ಆಕೆ ದೂರು ನೀಡಿರುವುದಾಗಿ ವರದಿ ಪ್ರಸಾರವಾಗಿದೆ. ಬಂಗಾರ ಕಳವು ಪ್ರಕರಣದಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ್ದಾಗಿ ಬಂದಿರುವ ವರದಿಗಳು ಸಹ  ಸುಳ್ಳು. ಇವೆಲ್ಲವೂ ವಾಸ್ತವಕ್ಕೆ ದೂರವಾದ ಸಂಗತಿಗಳು ಎಂದು ಅಟ್ಟಿಕಾ ಗೋಲ್ಡ್ ಬೊಮ್ಮನಹಳ್ಳಿ ಬಾಬು ಹೇಳಿದರು.  ಇದಕ್ಕೂ ಮುನ್ನ ನನ್ನ ಮೇಲೆ ಬೆಂಗಳೂರು ಪೊಲೀಸರು 3 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ತುಮಕೂರು ಮತ್ತು ಧಾರವಾಡದಲ್ಲೂ ಪ್ರಕರಣ ದಾಖಲಾಗಿತ್ತು. ಸಮಗ್ರವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ 31 ಪ್ರಕರಣಗಳನ್ನು ರದ್ದು ಮಾಡಿದೆ. ಅಟ್ಟಿಕಾ ಬಾಬು ಮೇಲೆ ಪೊಲೀಸರು ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸುವಂತಿಲ್ಲ ಎಂದು ಎರಡು ವರ್ಷಗಳ ಹಿಂದೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಂದಿನಿಂದ ಪೊಲೀಸರು ತಮ್ಮ ತಂಟೆಗೆ ಬರುತ್ತಿಲ್ಲ. ಆದರೆ ಮಾಧ್ಯಮಗಳು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ತಪ್ಪು ವರದಿಗಳನ್ನು ಪ್ರಕಟಿಸುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.   ಅಟ್ಟಿಕಾ ಗೋಲ್ಡ್ ರಾಜ್ಯದಲ್ಲಿ 200 ಶಾಖೆಗಳನ್ನು ಹೊಂದಿದ್ದು, ಪ್ರತಿಯೊಂದು ಶಾಖೆಯಲ್ಲೂ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದೇವೆ. ಕಳವು ಮಾಲು ತಡೆಯುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಕದ್ದ ಮಾಲು ಸೇರಿಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ಕಂಪೆನಿಯ ಷೇರು ಹೊಂದಿರುವ ತಮ್ಮ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸುವುದು ಸರಿಯಲ್ಲ. ನಮ್ಮ ಕಂಪೆನಿಯ ವ್ಯವಹಾರ ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಅಟ್ಟಿಕಾ ಗೋಲ್ಡ್ ಬೊಮ್ಮನಹಳ್ಳಿ ಬಾಬು ಹೇಳಿದರು.  ಅಟ್ಟಿಕಾ ಗೋಲ್ಡ್ ಕಂಪೆನಿಯನ್ನು 2013 ರಲ್ಲಿ ಸ್ಥಾಪಿಸಿದ್ದು, 2015 ರಲ್ಲಿ ಇದನ್ನು ಪಬ್ಲಿಕ್ ಲಿಮಿಟೆಡ್ ಕಂಪೆನಿಯಾಗಿ ಪರಿವರ್ತಿಸಿದೆ. 2016 ರಲ್ಲಿ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದೆ. ಈ ಕಂಪೆನಿ ವಾರ್ಷಿಕ ಸಹಸ್ರಾರು ಕೋಟಿ ರೂ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. 2021 – 22 ನೇ ಸಾಲಿನಲ್ಲಿ 1729 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಈ ವರ್ಷ ಇನ್ನೂ ಮೂರುವರೆ ತಿಂಗಳು ಬಾಕಿ ಇರುವಾಗಲೇ 1200 ಕೋಟಿ ರೂ ದಾಟಿದೆ. 100 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಪಾವತಿಸಿದ್ದೇನೆ ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments