ಪಾಲಾರ್ ಪತ್ರಿಕೆ | Palar Pathrike
ಗುಡಿಬಂಡೆ: ಮಾರ್ಚ್-7 ರಂದು ಎಣಿಕೆ ಮಾಡಬೇಕಾಗಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ದೇವರ ಹುಂಡಿ ಕಳವು ಆಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಇದಾಗಿದ್ದು, ಕಳೆದ ಫೆಬ್ರವರಿ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ನಡೆದಿದ್ದು, ಇನ್ನೇನು ಎರಡು ದಿನದ ನಂತರ ಹುಂಡಿ ಎಣಿಕೆ ಮಾಡಬೇಕೆಂಬುವಷ್ಟರಲ್ಲಿ ಹುಂಡಿಗೆ ದುಷ್ಕರ್ಮಿಗಳು ಕಣ್ಣು ಹಾಕಿ ಹುಂಡಿಯಲ್ಲಿದ್ದ ಲಕ್ಷಾಂತರ ಹಣ ದೋಚಿದ್ದಾರೆ.
ಕೆಲವು ಹುಂಡಿಗಳು ಸುರಕ್ಷಿತ : ಜಾತ್ರೆಗೆ ಬರುವ ಭಕ್ತಾದಿಗಳು ದೇವರಿಗೆ ನೀಡಿರುವ ಕಾಣಿಕೆ ಇರುವ 4 ಹುಂಡಿಗಳು ತುಂಬಿದ್ದ ಕಾರಣ, ದೇವಸ್ಥಾನದಲ್ಲೆ ಇರುವ ಕೊಠಡಿಯೊಂದರಲ್ಲಿ ಇಟ್ಟಿದ್ದು ಸದ್ಯ ಅ ಹುಂಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿರುವುದಿಲ್ಲ, ಕೇವಲ ದೇವರ ಮುಂದೆ ಇಟ್ಟಿರುವ ಹುಂಡಿಯನ್ನು ಮಾತ್ರ ಕಳ್ಳರು ದೋಚಿದ್ದು, ಈಗ ಕೊಠಡಿಯಲ್ಲಿದ್ದ ತುಂಬಿದ ಹುಂಡಿಗಳನ್ನು ತಹಶಿಲ್ದಾರ್ ಮನಿಷಾ ಪೊಲೀಸರ ಮತ್ತು ದೇವಸ್ಥಾನದ ಸಮಿತಿಯ ಸಮ್ಮುಖದಲ್ಲಿ ತಾಲೂಕು ಕಚೇರಿಯಲ್ಲಿರುವ ಖಜಾನೆ ಇಲಾಖೆಗೆ ವರ್ಗಾವಣೆ ಮಾಡಿ ಸೂಕ್ತ ಬಂದೋಬಸ್ತ್ ನೀಡಿದ್ದು, ಮಾ-7 ರಂದು ಈ ಹುಂಡಿಗಳನ್ನು ಎಣಿಕೆ ಮಾಡುತ್ತೇವೆಂದು ತಹಶಿಲ್ದಾರರ್ ಮಾಹಿತಿ ನೀಡಿದರು.
ಸೂಕ್ತ ಭದ್ರತೆಗೆ ಸಮಿತಿ ಅಧ್ಯಕ್ಷ ಒತ್ತಾಯ : ಈಗಾಗಲೇ 7 ಭಾರಿಗೂ ಹೆಚ್ಚು ಹುಂಡಿ ಹಳ್ಳತನವಾಗಿದ್ದು, ದೇವಾಲಯ ಆವರಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಸಾಕಷ್ಟು ಬಾರಿ ತಹಶಿಲ್ದಾರರ್ ರವರಿಗೆ ತಿಳಿಸಿದ್ದೇವೆ. ಅದೇ ರೀತಿ ಭದ್ರತಾ ದೃಷ್ಟಿಯಿಂದ ಹೊರ ಪೊಲೀಸ್ ಠಾಣೆ ಬೇಕು ಎಂದು ಆಗ್ರಹಿಸಿದ್ದೇವೆ. ದೇವಾಲಯ ಆವರಣದಲ್ಲಿ ಸಿಸಿ ಕ್ಯಾಮರಾಗಳು ಇಲ್ಲ, ಸೂಕ್ತ ಲೈಟ್ ಗಳು ಇಲ್ಲ, ಭದ್ರತೆ ಇಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರರೆಡ್ಡಿ ಆರೋಪಿಸಿದರು. ಅದೃಷ್ಟವಶಾತ್ ಇನ್ನೊಂದು ಕೋಣೆಯಲ್ಲಿ ಇದ್ದ ಸುಮಾರು 4 ಹುಂಡಿಗಳು ಇದ್ದುವು ಅದನ್ನು ಮುಟ್ಟಿಲ್ಲ ಸುರಕ್ಷಿತವಾಗಿವೆ. ಅವುಗಳನ್ನು ಖಜಾನೆಗೆ ರವಾನಿಸಲಾಯಿತು.
ಗ್ರಾಮಸ್ಥರ ಆರೋಪಗಳು : ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಮುಜರಾಯಿ ಇಲಾಖೆಯವರು ಎಣಿಕೆ ಮಾಡಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೇ, ಹಣ ಎಣಿಕೆ ಮಾಡುವ ದಿನ ಹೋದರೆ ಮತ್ತೆ ಹುಂಡಿ ಎಣಿಕೆ ಸಮಯಕ್ಕೆ ಮಾತ್ರ ಬರುತ್ತಾರೆ, ದೇವಸ್ಥಾನ ಆವರಣದಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳನ್ನು ಮಾತ್ರ ಸರಿಪಡಿಸಲು ಮುಂದಾಗುವುದಿಲ್ಲ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಭಕ್ತಾದಿಗಳಿಗೆ ಮೂಲ ಸೌಲಭ್ಯಗಳು ಮತ್ತು ಸಿ.ಸಿ.ಕ್ಯಾಮರಾ ಅಳವಡಿಸಬೇಕು ಹಾಗೂ ಸೂಕ್ತವಾಗಿ ಪೊಲೀಸ್ ಬಂದೋಬಸ್ತ್ ಮಾಡಬೇಕೆಂದು ಎಲ್ಲೋಡು ಗ್ರಾಮಸ್ಥರು ಒತ್ತಾಯಿಸಿದರು.
ಇನ್ನು ಘಟನಾ ಸ್ಥಳಕ್ಕೆ ಮಾಹಿತಿ ತಿಳಿಯುತ್ತಿದ್ದಂತೆ ತಹಶಿಲ್ದಾರರ್ ಮನಿಷಾ, ಆರಕ್ಷಕ ಉಪ ನಿರೀಕ್ಷಕ ಕೃಷ್ಣಪ್ಪ, ಬೆರಳಚ್ಚು ತಜ್ಞರ ತಂಡ, ರಾಜಸ್ವ ನಿರೀಕ್ಷಕ ವಿ. ಲಕ್ಷ್ಮೀನಾರಾಯಣ, ಪೇಶ್ ಕಾರ್ ಆದರ್ಶ್, ಭೇಟಿ ನೀಡಿ ಪರಿಶೀಲನೆ ನಡೆಸಿಸಿ ಈ ಕುರಿತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.