ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ : ನಗರಸಭಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ -4 ರ ಯೋಜನೆಯಡಿ18.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ವಸತಿ,ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಚಾಲನೆ ನೀಡಿದರು.
ಚಾಮರಾಜನಗರದ ವಾರ್ಡ್ ಸಂಖ್ಯೆ 7 ರ ವ್ಯಾಪ್ತಿಯ ಮೂಡ್ಲುಪುರ ಹಾಗೂ ವಾರ್ಡ್ ಸಂಖ್ಯೆ 20 ರ ವ್ಯಾಪ್ತಿಯ ಮಾರುಕಟ್ಟೆ ಬಳಿ ಇಂದು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ನಗರೋತ್ಥಾನ ಹಂತ 4 ರ ಯೋಜನೆಯಡಿ ಚಾಮರಾಜನಗರ ನಗರಸಭೆಗೆ ಒಟ್ಟಾರೆ40 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.ಇದರಲ್ಲಿ ಶೇ.85 ರಷ್ಟು ಅಂದರೆ 34 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದರು.
ನಗರೋತ್ಥಾನ ಹಂತ 4 ರ ಯೋಜನೆಯಡಿಯಲ್ಲಿ ರಸ್ತೆ, ಒಳ ಚರಂಡಿ ಕಾಮಗಾರಿಯನ್ನು ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.ಇಂದು ಸಾಂಕೇತಿಕವಾಗಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ.ಎಲ್ಲೆಡೆ ಕಾಮಗಾರಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ಇತರೆ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಕೆಲಸಗಳು ಸಹ ಕೈಗೊಳ್ಳಲಾಗುತ್ತಿದ್ದು ಬಾಕಿ ಉಳಿದ ಎಲ್ಲ ಕೆಲಸಗಳು ಹಂತ ಹಂತವಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ವಿವರಿಸಿದರು.
ಯೋಜನೆ ಕುರಿತು ಮಾಹಿತಿ ನೀಡಿದ ನಗರಸಭೆ ಆಯುಕ್ತರಾದ ಎಸ್.ವಿ.ರಾಮದಾಸ್ ಅವರು ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿ,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳು,ವಿಕಲಚೇತನರ ವೈಯಕ್ತಿಕ ಹಾಗೂ ಸಮುದಾಯ ಕಾರ್ಯಕ್ರಮಗಳಿಗೆ 40 ಕೋಟಿ ರೂ ಪೈಕಿ ಶೇ 85 ರಷ್ಠಾದ 34 ಕೋಟಿ ರೂ ಗಳಿಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.
ಬಿಡುಗಡೆಯಾದ ಅನುದಾನ ದಲ್ಲಿ ಶೇ 15 ರಷ್ಟು ಅಂದರೆ 6 ಕೋಟಿ ರೂ ರಿಸರ್ವ್ ಫಂಡ್ ನಲ್ಲಿ ಇರುತ್ತದೆ.ನಗರದ ಎಲ್ಲ ವಾರ್ಡುಗಳಲ್ಲಿ ರಸ್ತೆ, ಒಳ ಚರಂಡಿ ಕಾಮಗಾರಿಗೆ ಅನುದಾನ ನಿಗದಿಯಾಗಿದೆ ಎಂದು ನಗರ ಸಭೆ ಆಯುಕ್ತ ರಾಮದಾಸ್ ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ,ನಗರಸಭಾ ಅಧ್ಯಕ್ಷರಾದ ಸಿ.ಎಂ.ಆಶಾ , ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕರಾದ ಅಧ್ಯಕ್ಷರಾದ ಜಿ.ನಿಜಗುಣ ರಾಜು,ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ,ನಗರಸಭಾ ಸದಸ್ಯರು, ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.