ಬೆಂಗಳೂರು: ಬಸವನಗುಡಿ ಪತ್ತಿ ಸಭಾಂಗಣದಲ್ಲಿ ಕ್ಯಾನರೀಸ್ ಆಟೋ ಮೇಷನ್ ಪ್ರೈವೇಟ್ ಲಿಮಿಟಿಡ್ ಐ.ಟಿ.ಸಂಸ್ಥೆಯಿಂದ 14ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಿದ್ದು, ಕಾಸ್ಮೋಪಾಲಿಟಿನ್ ನಗರ ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಬೆಳೆಸಲು ಐಟಿ ಸಿಬ್ಬಂದಿ ಪ್ರತಿಜ್ಞೆ ಕೈಗೊಂಡರು. ಐಟಿ ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ಒತ್ತು ನೀಡುವುದಾಗಿ ಸಿಬ್ಬಂದಿ ನಿರ್ಣಯ ಮಾಡಿದರು. ಕ್ಯಾನರೀಸ್ ಐ.ಟಿ.ಸಂಸ್ಥೆಯ ಸಭಾಂಗಣವನ್ನು ಕಾವೇರಿ ಎಂದು ನಾಮಕರಣ ಮಾಡಲಾಗಿದೆ. ಐ.ಟಿ.ಕೊಠಡಿಗಳಿಗೆ ಹಂಪಿ, ಹೊಯ್ಸಳ, ಶರಾವತಿ, ತುಂಗಾಭದ್ರ ಹೆಸರು ಇಟ್ಟಿರುವುದು ವಿಶೇಷವಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮನ್ ಸುಬ್ಬರಾವ್, ಸಿ.ಇ.ಓ.ಶೇಷಾದ್ರಿ ಶ್ರೀನಿವಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ನಾಡು, ನುಡಿ ಇತಿಹಾಸ ಸಾರುವ ಕಾರ್ಯಕ್ರಮ ಗಮನ ಸೆಳೆಯಿತು. ವಿಶೇಷವಾಗಿ ಯಕ್ಷಗಾನ, ಜಾನಪದ ಗೀತೆ, ಕರ್ನಾಟಕ ಸಂಗೀತ ಹಾಗೂ ಇಳಕಲ್, ಮೈಸೂರು ಸ್ಕಿಲ್ ಸೀರೆ ಹಾಗೂ ನಾಡಿನ ಸಂಪ್ರದಾಯದ ಉಡಿಗೆ ತೊಡುಗೆ ತೊಟ್ಟ ಮಕ್ಕಳು ಹಾಗೂ ಮಹಿಳೆಯರಿಂದ ಫ್ಯಾಶನ್ ಶೋ ಆಯೋಜಿಸಲಾಗಿತ್ತು.
400ಕ್ಕೂ ಐ.ಟಿ.ಕಂಪನಿಯ ಅಧಿಕಾರಿ, ಸಿಬ್ಬಂದಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಯಾನರೀಸ್ ಐ.ಟಿ.ಸಂಸ್ಥೆಯ ಸಿ.ಇ.ಓ.ಶೇಷಾದ್ರಿ ಶ್ರೀನಿವಾಸ್ ಮಾತನಾಡಿ ಕನ್ನಡ ಮಾತೃ ಭಾಷೆ ನಮ್ಮದು, ಹೊರ ರಾಜ್ಯದವರು ಇಲ್ಲಿ ಬಂದು ನೆಲಸಿದ ಮೇಲೆ ಕನ್ನಡ ಭಾಷೆ ಕಲಿಯಬೇಕು. ಐ.ಟಿ.ಸಂಸ್ಥೆಯಲ್ಲಿ ಕನ್ನಡ ಉಳಿಸಿ,ಬೆಳಸಲು ನಮ್ಮ ಐ.ಟಿ.ಸಂಸ್ಥೆಯಲ್ಲಿ ಆಡಳಿತ ವ್ಯವಹಾರ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುತ್ತೇವೆ ಮತ್ತು ನಮ್ಮ ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ನಾಡಿನ ಇತಿಹಾಸ ಸಾರುವ ನದಿ, ಇತಿಹಾಸಕಾರರ ಹೆಸರುಗಳನ್ನು ಇಡಲಾಗಿದೆ. ಕನ್ನಡ ಭಾಷೆಯನ್ನು ಅನ್ಯ ಭಾಷಿಕರಿಗೆ ಕಲಿಸಲು ಕ್ಯಾನರೀಸ್ ಐ.ಟಿ.ಸಂಸ್ಥೆ ಶ್ರಮಿಸುತ್ತಿದೆ. ಕನ್ನಡ ನಾಡು, ನುಡಿ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬ ಕನ್ನಡಿಗ ಕನ್ನಡ ಮಾತನಾಡಬೇಕು ಎಂದರು.