ಪಾಲಾರ್ ಪತ್ರಿಕೆ | Palar Pathrike
ಶಿಡ್ಲಘಟ್ಟ : ಕೃಷಿ ಕುರಿತಾಗಿ ಶಿಬಿರಾರ್ಥಿಗಳಿಗೆ ಅಧಿಕಾರಿಗಳಿಂದ ಪಾಠ
ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಯಂತ್ರಗಳ ಬಳಕೆಯಿಂದ ಬಹಳಷ್ಟು ವೆಚ್ಚಕ್ಕೆ ಕಡಿವಾಣ ಬಿದ್ದಿದೆಯಲ್ಲದೆ ಫಸಲಿನ ಉತ್ಪಾದನೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಶಿಡ್ಲಘಟ್ಟ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಎಚ್.ಕೆ.ವೀಣಾ ತಿಳಿಸಿದರು.
ತಾಲೂಕಿನ ವೀರಾಪುರದಲ್ಲಿ ಶಿಡ್ಲಘಟ್ಟದ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಶಿಬಿರದಲ್ಲಿ ಕೃಷಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಿಡ್ಲಘಟ್ಟ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೃಷಿಯಲ್ಲಿ ತಂತ್ರಜ್ಞಾನ ಹಾಗೂ ಯಂತ್ರಗಳ ಬಳಕೆಯಿಂದ ವೆಚ್ಚ ಬಹಳಷ್ಟು ಕಡಿಮೆಯಾಗಿದೆ ಜತೆಗೆ ಫಸಲಿನ ಇಳುವರಿಯೂ ಹೆಚ್ಚಿದೆ ಎಂದರು.ನಾವು ಸಂಪ್ರದಾಯ ಕೃಷಿ ಪದ್ದತಿಯನ್ನು ಬಿಟ್ಟು ನೂತನ ಪದ್ದತಿಗಳನ್ನು ಅಳವಡಿಸಿಕೊಂಡು, ಯಾಂತ್ರಿಕತೆಯೊಂದಿಗೆ ಕೃಷಿ ನಡೆಸುವುದರಿಂದ ಲಾಭದಾಯಕ ಕೃಷಿ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.ವಿದ್ಯಾರ್ಥಿಗಳು ಓದಿನ ಜತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕೃಷಿ ಅನುಭವ ತಮ್ಮದಾಗಲಿದೆಯಲ್ಲದೆ ಮುಂದಿನ ಭವಿಷ್ಯದಲ್ಲಿ ಅದು ನೆರವಿಗೆ ಬರಲಿದೆ ಎಂದು ಹೇಳಿದರು.
ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಎನ್ಸೆಸ್ಸೆಸ್ ಶಿಬಿರಾಧಿಕಾರಿ ಎಚ್.ಸಿ.ಮುನಿರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಮುನಿರೆಡ್ಡಿ, ಪುಷ್ಪಮುನಿಶಾಮಿರೆಡ್ಡಿ, ಅಮರಾವತಿಲಕ್ಷ್ಮೀನಾರಾಯಣ್ ಹಾಜರಿದ್ದರು.
ವರದಿ ನಂದಿ ರಾಜೇಶ್ ಶಿಡ್ಲಘಟ್ಟ