ರಾಮನಗರ: ಹಳ್ಳಿಗಳಲ್ಲಿ ಹಿಂದುಳಿದ ವರ್ಗಗಳ ಜನಾಂಗವೇ ಹೆಚ್ಚಾಗಿದೆ. ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿ ಮಕ್ಕಳ ವಿದ್ಯಾಭ್ಯಸಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ರಾಮನಗರ ನಗರಭೆ ಮಾಜಿ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮುಕುಂದರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ “ಸವಿತಾ ಮಹರ್ಷಿ ಜಯಂತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಜಿ.ಬಿ. ಶ್ರೀನಿವಾಸ್ ಅವರು ಮಾತನಾಡಿ ಕ್ಷೌರಿಕ ಮತ್ತು ವಾದ್ಯಗಳನ್ನು ನುಡಿಸುವ ಈ ಎರಡು ವೃತ್ತಿಗಳು ಸವಿತಾ ಸಮಾಜದಲ್ಲಿ ಹೆಚ್ಚಿನ ಜನರಿರುತ್ತಾರೆ. ಸವಿತಾ ಸಮುದಾಯದವರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನೀಡಬೇಕು ಹಾಗೂ ಇಲಾಖೆಯ ವತಿಯಿಂದ ಸಹಾಯಧನವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಹಾಗೆಯೇ ನಾಡ ಹಬ್ಬದ ರೀತಿ ನಮ್ಮ ಸವಿತಾ ಮಹರ್ಷಿ ಜಯಂತೋತ್ಸವವನ್ನು ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್.ಹರೀಶ್ ಅವರು ಮಾತನಾಡಿ ಸವಿತಾ ಸಮುದಾಯ ಸಮಾಜದ ಆಸ್ತಿ. ಮಂಗಳವಾದ್ಯ ಇಲ್ಲದೇ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ವೃತ್ತಿಯಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲಾ ವೃತ್ತಿಗಳನ್ನು ಗೌರವಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜನಪದ ಗಾಯಕ ರಾಜು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟಸ್ವಾಮಿ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸತೀಶ್ ಹಾಗೂ ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.