ರಾಮನಗರ: ಎ.ಆರ್.ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್.ಐ.ವಿ ಸೋಂಕಿತರು, ಬಾದಿತರು ಹಾಗೂ ಮಕ್ಕಳು ಸೇರಿದಂತೆ ಒಟ್ಟು ೨೬೬ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ಮಾಹೆ ೧೦೦೦/- ರೂ ಸಹಾಯಧನ ನೀಡಲಾಗುತ್ತಿದ್ದು, ಸದರಿ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಮಕ್ಕಳಿಗೆ ಉನ್ನತ ಮಟ್ಟದ ಚಿಕಿತ್ಸೆ ಬೇಕಿದ್ದಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ನಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ ೫ ಮಕ್ಕಳಿಗೆ ೧೦ ಲಕ್ಷ ರೂ ಪರಿಹಾರ ನೀಡಲಾಗಿದೆ. ಒಂದು ಅರ್ಜಿ ಪ್ರಗತಿಯಲ್ಲಿರುತ್ತದೆ. ೧೦ ಲಕ್ಷ ರೂ ಪರಿಹಾರದೊಂದಿಗೆ ಕೋವಿಡ್ ನಿಂದ ಮೃತರಾದವರಿಗೆ ನೀಡಲಾಗುವ ೧.೫ ಲಕ್ಷ ರೂ ಪರಿಹಾರದ ಮೊತ್ತವನ್ನು ಸಹ ಮಕ್ಕಳ ಖಾತೆಗೆ ಜಮೆ ಮಾಡಬೇಕು. ಈ ಬಗ್ಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಅವರೊಂದಿಗೆ ಚರ್ಚಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಜನವರಿ ೨೦೨೧ ರಿಂದ ಡಿಸೆಂಬರ್ ೨೦೨೧ ರವರೆಗೆ ೯೧ ಪ್ರಕರಣಗಳು ದಾಖಲಾಗಿದ್ದು, ೩೨ ಪ್ರಕರಣಗಳು ತನಿಖಾ ಹಂತದಲ್ಲಿದೆ. ಪ್ರಕರಣಗಳು ವರದಿಯಾದ ತಕ್ಷಣ ಪೊಲೀಸ್ ಇಲಾಖೆ ಅವರು ಚಾರ್ಜ್ ಶೀಟ್ ಫೈಲ್ ಮಾಡಿ ಇಲ್ಲವಾದಲ್ಲಿ ಆರೋಪಿಯು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
೨೦೨೧-೨೨ ನೇ ಸಾಲಿನಲ್ಲಿ ೫ ಮಕ್ಕಳನ್ನು ದತ್ತು ನೀಡಲಾಗಿದೆ. ಈ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ವರದಿ ನೀಡಿ. ಮಕ್ಕಳ ಸಹಾಯವಾಣಿಗೆ ೨೦೨೧ ಏಪ್ರಿಲ್ ಮಾಹೆಯಿಂದ ದಿನಾಂಕ ೧೫-೦೨-೨೦೨೨ ರವರೆಗೆ ವಿವಿಧ ಸಮಸ್ಯಗಳುಳ್ಳ ೧೫೩೪ ಕರೆಗಳು ಬಂದಿರುತ್ತದೆ. ಮಕ್ಕಳ ರಕ್ಷಣಾ ಘಟಕದಿಂದಲೂ ಬಾಲ್ಯ ವಿವಾಹ , ಬಾಲ ಕಾರ್ಮಿಕರು, ಲೈಂಗಿಕ ದೌರ್ಜನ್ಯ ತಡೆಗಟ್ಟಿರುವ ಪ್ರಕರಣಗಳು ವರದಿಯಾಗುತ್ತದೆ. ಮಕ್ಕಳ ಸಹಾಯವಾಣಿಗೆ ಕರೆ ಬಂದು ಮಕ್ಕಳು ಸಹಾಯದಿಂದ ವಂಚಿತರಾಗಬಾರದು. ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕದವರು ಒಟ್ಟಿಗೆ ಪ್ರಕರಣವಾರು ಮಾಹಿತಿ ಕ್ರೋಡೀಕರಿಸಿ ಪ್ರಕರಣಗಳ ಅಂಕಿ ತಾಳೆಯಾಗಬೇಕು ಎಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ರಚಿಸಲು ಬಾಸ್ಕೋ ಸಂಸ್ಥೆಯವರು ಮನವಿ ಸಲ್ಲಿಸಿದಾಗ, ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿರುವ ೨೩೮ ಪ್ರೌಢಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ರಚಿಸಲು ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಕ್ಕಳ ರಕ್ಷಣಾ ನಿರ್ದೇಶನಾಲಯದ ವತಿಯಿಂದ ಹೊರತಂದಿರುವ ಘನತೆಯ ಬದುಕು ‘ಮಾಧ್ಯಮ ಮತ್ತು ಮಕ್ಕಳು’ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಷಣ್ಮುಗಂ ಸುಂದರA, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್, ಜಿಲ್ಲಾ ಮಕ್ಕಳ ರಕ್ಷಣಾಧಿಖಾರಿ ನಾಗವೇಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಲಿಂಗಯ್ಯ, ದಿನೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.