ಮಂಡ್ಯ: ಶಾಲಾ ಮಕ್ಕಳ ಪೋಷಕರು ಎರಡು ಡೋಸ್ ಕರೋನಾ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಕುಟುಂಬದ ಎಲ್ಲಾ ಸದಸ್ಯರಿಗೆ ಲಸಿಕೆಯನ್ನು ನೀಡಿ ಲಸಿಕಾಕರಣವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಸಿಕೆ ನೀಡುವ ಸಂಬಂಧ ಜಿಲ್ಲೆಯ ವಿವಿಧ ತಾಲ್ಲೂಕಿನ ಅಧಿಕಾರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಶಾಲಾ-ಕಾಲೇಜು ಮಕ್ಕಳ ಪೋಷಕರನ್ನು ಕೇಂದ್ರಿಕರಿಸಿ ಲಸಿಕೆ ನೀಡಿ ಈ ನಿಟ್ಟಿನಲ್ಲಿ ಅಂಗನವಾಡಿ, ಶಾಲಾಮಕ್ಕಳ ಕುಟುಂಬದಲ್ಲಿರುವ ಎಲ್ಲಾ ಸದಸ್ಯರಿಗೂ ಲಸಿಕೆ ನೀಡಲು ಕ್ರಮವಹಿಸಿ ಎಂದರು.
ನಾಳೆ ಜಿಲ್ಲೆಯದ್ಯಾಂತ ಮೆಗಾ ಲಸಿಕಾ ಮೇಳ ನಡೆಯುತ್ತಿದ್ದು, ಈ ಸಂಬಂಧ ಕ್ರಿಯಾಯೋಜನೆಯನ್ನು ತಯಾರಿಸಿ, ಅಂಗನವಾಡಿ, ಶಾಲಾ-ಕಾಲೇಜು ಮಕ್ಕಳ ಕುಟುಂಬದ ಎಲ್ಲಾ ಸದಸ್ಯರಿಗೆ ಲಸಿಕೆ ನೀಡಿ ಶೇ.100 ರಷ್ಟು ಲಸಿಕಾಕರಣದ ಗುರಿಯನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಂದು ಲಸಿಕೆ ಪಡೆಯದೇ ಬಾಕಿ ಉಳಿದಿರುವವರಿಗೆ, 15 ರಿಂದ 18 ವರ್ಷದ ಮಕ್ಕಳಿಗೆ , ಎರಡನೇ ಡೋಸ್ನ ಅರ್ಹ ಫಲಾನುಭವಿಗಳು ಲಸಿಕೆಯನ್ನು ಪಡೆಯಲು ತಹಶೀಲ್ದಾರ್, ಆರೋಗ್ಯಾಧಿಕಾರಿಗಳು ಕ್ರಮವಹಿಸಿ ಎಂದು ಹೇಳಿದರು.
ಅಂಗನವಾಡಿ, ಶಾಲಾ- ಕಾಲೇಜು ಮಕ್ಕಳ ಪೋಷಕರ ಲಸಿಕಾಕರಣ ಸಂಬಂಧ ಶಾಲಾ ಮುಖ್ಯ ಶಿಕ್ಷಕರು, ಬಿಇಒ, ಸಿಡಿಪಿಒ, ಡಿಡಿಪಿಯು ಗಳು ಕ್ರಮವಹಿಸಿ ಎಂದರು.
ಅರ್ಹ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಲಸಿಕೆ ನೀಡಲು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಮಕ್ಕಳ ಬಳಸಿಕೊಂಡು ಪೋಷಕರಿಗೆ ಜಾಗೃತಿ ಮೂಡಿಸಿ ಲಸಿಕೆಯನ್ನು ಕಡ್ಡಾಯವಾಗಿ ನೀಡಿ ಎಂದರು.
ನಿಮ್ಮ ತಾಲ್ಲೂಕಿನಲ್ಲಿ ಲಸಿಕಾಕರಣವನ್ನು ಹೆಚ್ಚು ಮಾಡಲು ತಹಶೀಲ್ದಾರ್, ಆರೋಗ್ಯಾಧಿಕಾರಿ ನಗರದಲ್ಲಿ ನಗರಸಭೆ, ಪುರಸಭೆ ಅಧಿಕಾರಿಗಳು ಸಭೆ ನಡೆಸಿ, ಈ ಸಂಬಂಧ ಹೆಚ್ಚು ಗಮನಹರಿಸಿ ನಾಳೆ ನಡೆಯುವ ಲಸಿಕಾ ಮೆಗಾಮೇಳವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಉಪವಿಭಾಗಾಧಿಕಾರಿ ಐಶ್ವರ್ಯ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಸೋಮಶೇಖರ್, ಮಿಮ್ಸ್ ನಿರ್ದೇಶಕ ಎಂ.ಆರ್ ಹರೀಶ್, ಡಿ.ಡಿ.ಪಿ.ಐ ಜವರೇಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.