ಮಂಡ್ಯ: ಲಾರಿ ಮಾಲೀಕರು, ಚಾಲಕರಿಗೆ ಅಗತ್ಯವಾಗಿರುವ ಟ್ರಕ್ ಟರ್ಮಿನಲ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ವೀರಯ್ಯ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಯೋಗ್ಯ ಜಮೀನನ್ನು ವಶಪಡಿಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕೆ.ಐ.ಎ.ಡಿ.ಬಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಜಿಲ್ಲೆಗಳಲ್ಲಿ ಟರ್ಮಿನಲ್ ನಿರ್ಮಾಣವಾಗಬೇಕು ಎಂಬುದು ನನ್ನ ಉದ್ದೇಶ, ಟರ್ಮಿನಲ್ ನಿರ್ಮಾಣದಿಂದ ವಾಯುಮಾಲಿನ್ಯ, ಟ್ರಾಫಿಕ್ ಜಾಂ, ಅಪಘಾತ, ಇನ್ನಿತರ ಕುಂದು ಕೊರತೆಗಳನ್ನು ತಡೆಯಬಹುದು ಎಂದು ಹೇಳಿದರು.
1980 ರಲ್ಲಿ ಈ ಟ್ರಕ್ ಟರ್ಮಿನಲ್ ನಿರ್ಮಿಸುವ ಕಾರ್ಯ ಪ್ರಾರಂಭವಾಗಿದ್ದು, 1991ರಲ್ಲಿ ಡಿ ದೇವರಾಜ ಅರಸರ ಹೆಸರಿನಲ್ಲಿ ಈ ಕಾರ್ಯಕ್ರಮವು ಆರಂಭವಾಯಿತು ಎಂದರು.
ರಾಷ್ಟೀಯ ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಟರ್ಮಿನಲ್ ನ ಅವಶ್ಯಕತೆ ಬಹಳ ಇದೆ, ಜೊತೆಗೆ ಪೆಟ್ರೋಲ್ ಬಂಕ್, ಶೌಚಾಲಯ, ಚೆಕ್ ಪೆÇೀಸ್ಟ್, ಎಟಿಎಂ, ಲಾರಿ ಏಜೆನ್ಸಿಗಳು,ವಸತಿ ಸೌಲಭ್ಯಗಳನ್ನು ಸಹ ಈ ಟ್ರಕ್ ಟರ್ಮಿನಲ್ ನಲ್ಲಿ ಮಾಡಲಾಗುವುದು ಎಂದರು.
ಮಂಡ್ಯದಲ್ಲಿ ವಾಹನಗಳು, ವಸ್ತುಗಳ ಸಾಗಾಣಿಕೆ ಜಾಸ್ತಿ ಇದೆ ಸುಸರ್ಜಿತವಾಗಿ ಟರ್ಮಿನಲ್ ಅವಶ್ಯಕತೆ ಇದೆ. ಇದರಿಂದ ಜಿಲ್ಲೆಯವರಿಗೆ ಉದ್ಯೋಗವೂ ಸಿಗುತ್ತದೆ ಎಂದು ಹೇಳಿದರು.
ಅಧಿಕಾರಿಗಳಿಗೆ ಮಂಡ್ಯ ದಲ್ಲಿ ಸ್ಥಳವನ್ನು ಗುರುತಿಸಲು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಹಾಗೂ ಮುಡಾ ಅಧಿಕಾರಿಗಳಿಗೆ ಸೂಚಿಸಲಾಯಿತು
ಸಭೆಯಲ್ಲಿ ಶಾಸಕರಾದ ಪುಟ್ಟರಾಜು, ಸುರೇಶ್ ಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಉಪವಿಭಾಗಾಧಿಕಾರಿ ಐಶ್ವರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.