ದೇವನಹಳ್ಳಿ: ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕುಂದಾಣ ನಾಡಕಚೇರಿ ಶಂಕುಸ್ಥಾಪನೆಗಾಗಿ ಸರಕಾರದ 18ಲಕ್ಷ 80ಸಾವಿರ ರೂ.ಗಳ ವೆಚ್ಚದಲ್ಲಿ ಉತ್ತಮ ಸುಸ್ಸಜ್ಜಿತ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಭಾಗದಲ್ಲಿ ಸಾರ್ವಜನಿಕರ ಸೇವೆಗೆ ನಾಡಕಚೇರಿ ಅನಿವಾರ್ಯವಾಗಿತ್ತು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ಕುಂದಾಣ ನಾಡಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಭಾಗದ ಅತೀ ಹೆಚ್ಚು ಬೇಡಿಕೆಯಲ್ಲಿ ನಾಡಕಚೇರಿಯ ಕಟ್ಟಡ ನಿರ್ಮಾಣದ ಬೇಡಿಕೆ ಹೆಚ್ಚು ಕೇಳಿಬರುತ್ತಿತ್ತು. ಇದನ್ನು ಮನಗಂಡು ಜಿಲ್ಲಾಧಿಕಾರಿಗಳು ಸರಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆಗೊಳಿಸಿದ್ದಾರೆ. ಇದರ ಜೊತೆಯಲ್ಲಿ 10ಲಕ್ಷರೂ.ಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡುವುದರ ಮೂಲಕ ಉತ್ತಮ ನಾಡಕಚೇರಿ ಕಟ್ಟಡವನ್ನು ಸ್ಥಾಪಿಸಬೇಕಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸೂಚಿಸಿದ್ದಾರೆ. ಸಾರ್ವಜನಿಕರ ಸೇವೆ ಕೇವಲ 2 ತಿಂಗಳಲ್ಲಿ ನೆರವೇರಿಸಿಕೊಡಬೇಕೆಂದು ಹೇಳಿದ್ದಾರೆ. ಕುಂದಾಣ ಜನತೆಯ ನಿರೀಕ್ಷೆಯಂತೆ ಸಕಾಲದಲ್ಲಿ ನೆರವೇರಿಸಿಕೊಟ್ಟಿರುವುದಕ್ಕೆ ಜಿಲ್ಲಾಡಳಿತಕ್ಕೆ ಜನರ ಪರವಾಗಿ ಅಭಾರಿಯಾಗಿರುತ್ತೇನೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕಂದಾಯ ಇಲಾಖೆಯಿಂದ ಜಿಲ್ಲೆಗೆ 10 ನಾಡಕಚೇರಿಗಳು ಮಂಜೂರಾಗಿದ್ದು, ಒಟ್ಟು 1ಕೋಟಿ 84ರೂ.ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗುತ್ತಿದೆ. ಕುಂದಾಣ ನಾಡಕಚೇರಿಗೆ 18ಲಕ್ಷ 80ಸಾವಿರ ರೂ.ಗಳನ್ನು ಬಳಸಿಕೊಳ್ಳಲಾಗಿದೆ. ಮತ್ತಷ್ಟು ಅನುದಾನವನ್ನು ಸಿಎಸ್ಆರ್, ಶಾಸಕರ ನಿಧಿ, ಧಾನಿಗಳ ಸಹಕಾರದಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಿದರೆ, ಈ ಭಾಗದಲ್ಲಿ 2 ತಿಂಗಳಿನಲ್ಲಿ ಉತ್ತಮ ಸರಕಾರಿ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಕೊರೊನಾ ಮಾರ್ಗಸೂಚಿ ಪಾಲನೆಗೆ ಡಿಸಿ ಸೂಚನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ರೂಪಾಂತರಿ ಒಮೈಕ್ರಾನ್ ವೈರಸ್ ಸಾಂಕ್ರಾಮಿಕವಾಗಿ ಅತೀ ವೇಗವಾಗಿ ಹರಡುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಸರಕಾರದ ಮಾರ್ಗ ಸೂಚಿಗಳನ್ನು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅರಿವುಮೂಡಿಸಿದರು.
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ, ತಹಶೀಲ್ದಾರ್ ಅನಿಲ್ಕುಮಾರ್ ಅರೋಲಿಕರ್, ಉಪ ತಹಶೀಲ್ದಾರ್ ಚೈತ್ರಾ, ಆರ್ಐ ಚಿದಾನಂದ್, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರ.ಕಾರ್ಯದರ್ಶಿ ಜಿ.ಎ.ರವೀಂದ್ರ, ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಛಲವಾದಿ ಮಹಾಸಭಾಧ್ಯಕ್ಷ ಕೆ.ವಿ.ಸ್ವಾಮಿ, ಮುಖಂಡರಾದ ರಬ್ಬನಹಳ್ಳಿ ಪ್ರಭಾಕರ್, ಜುಟ್ಟನಹಳ್ಳಿ ಚೇತನ್ಗೌಡ,ಬಿ.ಕೆ.ನಾರಾಯಣಸ್ವಾಮಿ, ನಂಜೇಗೌಡ, ಮನಗೊಂಡನಹಳ್ಳಿ ಜಗದೀಶ್, ಪಟಾಲಪ್ಪ, ಬಾಲಕೃಷ್ಣ, ನೆರಗನಹಳ್ಳಿ ಶ್ರೀನಿವಾಸ್, ರಾಮಣ್ಣ, ಮಾರುತಿ, ಡಿ.ಎಂ.ದೇವರಾಜ್, ಗ್ರಾಪಂ ಸದಸ್ಯರು, ಮುಖಂಡರು, ಗ್ರಾಮಸ್ಥರು ಇದ್ದರು.