ಗುಡಿಬಂಡೆ: ಇತ್ತೀಚೆಗಷ್ಟೆ ಚಿಕ್ಕಬಳ್ಳಾಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು, ಹಾಗೆಯೇ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಸಂದ್ರ ಹಾಗೂ ಕಂಬಾಲಹಳ್ಳಿ ಗ್ರಾಮದಲ್ಲೂ ಸಹ ಭೂಮಿ ಕಂಪಿಸಿದ ಅನುಭವವಾಗಿದೆ.
ಬುಧವಾರ ಸಂಜೆ 7 ಗಂಟೆಯ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬುಳ್ಳಸಂದ್ರ ಮತ್ತು ಕಂಬಾಲಹಳ್ಳಿ ಸುತ್ತ ಭಾರಿ ಸದ್ದು ಕೇಳಿಸಿದ್ದು, ಭೂಮಿ ಕಂಪಿಸಿದ ಅನುಭವವಾದ ಕೂಡಲೇ ಗ್ರಾಮಸ್ಥರು ಮನೆಗಳಿಂದ ಆಚೆಗೆ ಓಡಿ ಬಂದಿದ್ದಾರೆ. ಕೆಲ ಮನೆಗಳ ಗೋಡೆಗಳು ಬಿರುಕುಬಿಟ್ಟಿದ್ದು, ಕಂಬಾಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸೀಳಿದಂತಾಗಿದೆ. ಕಂಬಾಲಹಳ್ಳಿ ಗ್ರಾಮದ ಪಕ್ಕದಲ್ಲಿ ಆಂಧ್ರಗಡಿಯಲ್ಲಿ ಗಣಿಗಾರಿಕೆಯೊಂದು ನಡೆಯುತ್ತಿದ್ದು ಅಲ್ಲಿ ದೊಡ್ಡ ಮಟ್ಟದ ಸ್ಫೋಟಕಗಳನ್ನು ಸಿಡಿಸಲಾಗುತ್ತದೆ. ಇದರಿಂದಲೇ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿನ್ನೆ ಸಂಜೆಯ ವೇಳೆ ಈ ಹಿಂದೆ ಎಂದೂ ಅನುಭವಿಸದಂತಹ ಅನುಭವವನ್ನು ನಾವು ಕಂಡೆವು. ದಿಢೀರನೇ ದೊಡ್ಡ ಮಟ್ಟದಲ್ಲಿ ಸದ್ದು ಹಾಗೂ ಭೂಮಿ ಅಲುಗಾಡಿದ ಅನುಭವವಾಯಿತು. ಕೂಡಲೇ ನಾವು ಮನೆಯಿಂದ ಹೊರಬಂದೆವು, ನಮ್ಮ ಮನೆಯ ಗೋಡೆಗಳು ಸಹ ಬಿರುಕು ಬಿಟ್ಟಿದೆ, ಆದರೆ ಯಾವುದೇ ಅಪಾಯ ಸಂಭAವಿಸಿಲ್ಲ ಎಂದು ಬುಳ್ಳಸಂದ್ರ ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ಸಿಗತ್ತುಲ್ಲಾ, ರಾಜಸ್ವ ನಿರೀಕ್ಷಕ ಅಮರನಾರಾಯಣ, ಗ್ರಾಮ ಲೆಕ್ಕಿಗ ಮುನಿರಾಜು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವೆಂಬರ್ನಲ್ಲಿ ಬಿದ್ದ ಮಳೆಯಿಂದ ಮತ್ತು ಏರ್ ಬ್ಲಾಸ್ಟ್ನಿಂದಾಗಿ ಈ ಭೂಮಿ ಕಂಪನ ಆಗಿರುವುದಾಗಿ ತಜ್ಞರು ತಿಳಿಸಿದ್ದಾರೆ. ಆದಾಗ್ಯೂ ಮತ್ತೊಮ್ಮೆ ರಾಜ್ಯ ಮಟ್ಟದ ತಜ್ಞರು ಕಂಬಾಲಹಳ್ಳಿ ಹಾಗೂ ಬುಳ್ಳಸಂದ್ರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಬಳಿಕ ನಿಜವಾದ ಕಾರಣ ತಿಳಿಯಬಹುದಾಗಿದೆ. ಜನರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಾಗಾಗುವ ಅಗತ್ಯವಿಲ್ಲ ಎಂದಿದ್ದಾರೆ ಜಿಲ್ಲಾ ಉಪವಿಭಾಗಧಿಕಾರಿ ಸಂತೋಷ್ ಕುಮಾರ್
ನಂತರ ಇದರ ಸಂಬAದ ಮಾತನಾಡಿದ ಜಿಲ್ಲಾಧಿಕಾರಿ ಅರ್.ಲತಾ ರವರು ಬುಳಸಂದ್ರ ಹಾಗೂ ಕಂಬಾಲಹಳ್ಳಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವ ಕುರಿತು ಬಂದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಭೂಮಿ ಕಂಪಿಸಲು ಕಾರಣಗಳ ಬಗ್ಗೆ ತಜ್ಞರ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೂಮಿಯಲ್ಲಿ ನೀರಿನ ಘರ್ಷಣೆಯಿಂದಾಗಿ ಕಂಪನ ನಡೆದಿರಬಹುದು ಎನ್ನಲಾಗಿದೆ. ಸಂಪೂರ್ಣ ವರದಿ ಬಂದ ಮೇಲೆ ನಿಖರವಾದ ಕಾರಣವನ್ನು ತಿಳಿಸಲಾಗುತ್ತದೆ ಎಂದಿದ್ದಾರೆ