ಪಾಲಾರ್ ಪತ್ರಿಕೆ | Palar Pathrike
ಬೆಂಗಳೂರು ನ : ಜಿಲ್ಲೆಯಲ್ಲಿ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆಗೊಳಿಸಲು ಅಗತ್ಯ ಕ್ರಮವಹಿಸಿಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಕೆ. ಎ ದಯಾನಂದ ರವರು ಅರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ದಡಾರ – ರುಬೆಲ್ಲಾ (ಎಂ.ಆರ್) ನಿರ್ಮೂಲನೆ, ಮಿಷನ್ ಇಂದ್ರಧನುಷ್ ಅಭಿಯಾನ 5.0 ಹಾಗೂ ಸಕ್ರಿಯ ಕ್ಷಯ ರೋಗ ಪತ್ತೆ, ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಎಂ ಆರ್ ನ ಎರಡು ಡೋಸ್ನ್ನು ನೀಡಲಾಗಿದ್ದು, ಪ್ರತಿ ಹಳ್ಳಿಗಳಲ್ಲಿ 9 ರಿಂದ 12 ತಿಂಗಳ ಮಕ್ಕಳಿಗೆ ಎಂ.ಆರ್ 1 ಹಾಗೂ ಎಂ.ಆರ್ 2 ಲಸಿಕೆಯನ್ನು 5 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಲಸಿಕೆ ಹಾಕಲಾಗಿದ್ದು, 2023 ನೇ ಸಾಲಿನ ವರದಿಯಂತೆ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 3406 ಮಕ್ಕಳಲ್ಲಿ 3309 ಮಕ್ಕಳಿಗೆ, ಬೆಂಗಳೂರು ಉತ್ತರ ತಾಲೂಕಿನಲ್ಲಿ 8172 ಮಕ್ಕಳಲ್ಲಿ 7167 ಮಕ್ಕಳಿಗೆ, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 4651 ಮಕ್ಕಳಲ್ಲಿ 3633 ಮಕ್ಕಳಿಗೆ ಹಾಗೂ ಆನೇಕಲ್ ತಾಲ್ಲೂಕಿನಲ್ಲಿ 11571 ಮಕ್ಕಳಲ್ಲಿ 8965 ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ.
ಆನೇಕಲ್ ತಾಲ್ಲೂಕಿನಲ್ಲಿ ನಲ್ಲಿ 77%, ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 97%, ಬೆಂಗಳೂರು ಉತ್ತರ ತಾಲೂಕಿನಲ್ಲಿ 88%, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 78% ಲಸಿಕೆ ನೀಡಲಾಗಿದ್ದು, ಆನೇಕಲ್ ತಾಲ್ಲೂಕಿನಲ್ಲಿ ಲಸಿಕೆ ನೀಡಿರುವ ಪ್ರಮಾಣ ಕಡಿಮೆ ಇರುವ ಬಗ್ಗೆ ವರದಿಯಾಗಿದ್ದು ಕೂಡಲೇ ಇದರ ಬಗ್ಗೆ ಗಮನಹರಿಸಬೇಕು ಎಂದು ಅರೋಗ್ಯಧಿಕಾರಿಗಳಿಗೆ ತಿಳಿಸಿದರು.
ಇಂದ್ರಧನುಷ್ 5.0 ಅಡಿಯಲ್ಲಿ 5 ವರ್ಷದ ಒಳಗಿನ ಮಕ್ಕಳಲ್ಲಿ ಲಸಿಕೆ ಬಿಟ್ಟು ಹೋಗಿರುವ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಯು- ವಿನ್ ನ ಅಪ್ ಮೂಲಕ ಲಸಿಕೆಯ ಬಗ್ಗೆ ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು ಲಸಿಕೆ ಹಾಕಿಸಿಕೊಳುವಂತೆ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಹೊಸದಾಗಿ ನೋಂದಣಿಯಾದ ಮಕ್ಕಳಿಗೆ ಎಂ.ಆರ್ 2 ಲಸಿಕೆ ಹಾಕಿಲದ್ದಿದರೆ ಅದರ ಬಗ್ಗೆ ಮಾಹಿತಿಯನ್ನು ನೀಡಿ ಲಸಿಕೆ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು
ನಂತರ ತಂಬಾಕು ನಿಯಂತ್ರಣ ಕಾನೂನು- ಕೋಟ್ಟಾ 2003 ಕುರಿತು ಸಭೆಯಲ್ಲಿ ಚರ್ಚಿಸುತ್ತಾ, ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬಂದರೆ ಸೂಕ್ತ ಕ್ರಮವಹಿಸಬೇಕು, ತಂಬಾಕು ನಿಯಂತ್ರಣ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಅರಿವು ಮೂಡಿಸಬೇಕು. ತನಿಖಾ ತಂಡವನ್ನು ರಚಿಸಿ ಎಲ್ಲಾ ಶಾಲಾ ಕಾಲೇಜುಗಳ 100 ಗಜ ಅಂತರದೊಳಗೆ ತಂಬಾಕು ಮಾರಾಟ ಮಾಡುವುದನ್ನು ಗಮನಿಸಿದಲ್ಲಿ ದಂಡ ವಿಧಿಸಿ ಮಳಿಗೆಗಳಲ್ಲಿನ ಧೂಮಪಾನ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿ ಅದನ್ನು ನಾಶಪಡಿಸಬೇಕು ಎಂದು ತಂಬಾಕು ನಿಯಂತ್ರಣ ಅಧಿಕಾರಿಗಳಿಗೆ ತಿಳಿಸಿದರು.
ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ಕ್ಷಯರೋಗ ಪತ್ತೆಯಾದಲ್ಲಿ ಅಥವಾ ಕ್ಷಯ ರೋಗ ಲಕ್ಷಣ ಉಳ್ಳವರು ಕಂಡು ಬಂದಲ್ಲಿ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ನೀಡಬೇಕು, ರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಊಹಾತ್ಮಕ ಮಕ್ಕಳನ್ನು ಎನ್ ಎ ಸಿ ಮೂಲಕ ತಪಾಸಣೆ ಒಳಪಡಿಸಬೇಕು. ಹಾಗೂ ಕ್ಷಯ ರೋಗ ಪೀಡಿತ ವ್ಯಕ್ತಿ ಡಯಾಬೆಟಿಕ್ ಆಗಿದ್ದಲ್ಲಿ ಅವರಿಗೆ ವಿಶೇಷ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ. ರವೀಂದ್ರನಾಥ್ ಎಂ ಮೇಟಿ ರವರು, ಆರ್. ಸಿ. ಎಚ್ ಅಧಿಕಾರಿ ಡಾ. ಸೈಯದ್ ಸಿರಾಜುದ್ದಿನ್ ಮದನಿ, ಪೋಲಿಯೋ ಕಣ್ಗಾವಲು ಸರ್ವೇಕ್ಷಣಾಧಿಕಾರಿಯಾದ ಡಾ. ನಾಗರಾಜ್ ಮತ್ತು ಡಾ. ಮಿಸ್ಬಾ ಹನಿ ಹಾಗೂ ಇತರರು ಉಪಸ್ಥಿತರಿದ್ದರು.