ಚಿಕ್ಕಬಳ್ಳಾಪುರ: ಮಾಧ್ಯಮ ಕ್ಷೇತ್ರದಲ್ಲಿನ ವೇಗದ ಬದಲಾವಣೆಯನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕವಾಗಿ ಮುನ್ನುಗ್ಗಿದರೆ ಸ್ಥಳೀಯತೆಯ ವ್ಯಾಪ್ತಿಯನ್ನು ಮೀರಿ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಅಭಿಪ್ರಾಯ ಪಟ್ಟರು. ಪಾಲಾರ್ ಪತ್ರಿಕೆಯ ನೂತನ ವೆಬ್ ಸೈಟ್ ನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ರವರು ಉದ್ಘಾಟಿಸಿ ಮಾತನಾಡಿ ತಾಂತ್ರಿಕತೆ ಮುಂದುವರೆದಂತೆ ಮನುಷ್ಯನ ಸುದ್ದಿದಾಹವನ್ನು ತೀರಿಸುವ ನಿಟ್ಟಿನಲ್ಲಿ ಪತ್ರಿಕೆಗಳು ವೆಬ್ ಸೈಟ್ ಮೂಲಕ ತ್ವರಿತವಾಗಿ ಸುದ್ದಿ ನೀಡುವ ಮೂಲಕ ಮುಂದುವರೆದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಉತ್ತಮ . ಪತ್ರಿಕೆಗಳು ಸುದ್ದಿ, ವಿಮರ್ಶೆ, ವಿಶ್ಲೇಷಣೆ ಸೇರಿದಂತೆ ಶಾಶ್ವತ ದಾಖಲೆಯಾಗಿ ಉಳಿಯುವ ಮೂಲಕ ಹಿಂದಿನಿಂದಲೂ ಸಮಾಜದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಸಂಗತಿಗಳನ್ನೂ ತಕ್ಷಣವೇ ಜನರಿಗೆ ತಲುಪಿಸುವಲ್ಲಿ ವಾಹಿನಿಗಳ ಹೊರತಾಗಿ ಪರ್ಯಾಯವಾಗಿ ವೆಬ್ ನ್ಯೂಸ್ ಗಳು ಓದುಗರ ಅವಶ್ಯಕತೆ ಪೂರೈಸುವ ಜೊತೆಗೆ ಓದುಗರಿಗೆ ಆಯ್ಕೆಯ ಅವಕಾಶ ನೀಡಿವೆ.ಪಾಲಾರ್ ಪತ್ರಿಕೆ ಈ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಓದುಗರನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿಕೊಳ್ಳುವ ಪ್ರಯತ್ನ ನಡೆಸಿರುವುದು ಶ್ಲಾಘನೀಯ ಎಂದರು.ಅವರು ಮುಂದುವರೆದು ಮಾತನಾಡಿ ಪತ್ರಿಕೆಗಳು ಸೇರಿದಂತೆ ಮಾಧ್ಯಮಗಳು ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಿದಾಗ ಜನರಿಗೆ ಮಾಧ್ಯಮಗಳು ಬದುಕಿನ ದಾರಿದೀಪಗಳಾಗುವ ಪ್ರಮುಖ ಸಾಧನವಾಗಿ ಗುರ್ತಿಸಿಕೊಳ್ಳಬಹುದು ಎಂದರು.ಈ ವೇಳೆ ಪತ್ರಿಕೆಯ ಸಂಪಾದಕರಾದ ಸ್ವರೂಪ್ ರವರು, ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರ ಯಲುವಹಳ್ಳಿ ಬಿ.ಸದಾಶಿವ ಮತ್ತು ಸಿಬ್ಬಂದಿ ಬಾಲು ಮುಂತಾದವರಿದ್ದರು.