ಶಿಡ್ಲಘಟ್ಟ: ತಾಲ್ಲೂಕಿನ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಂಪನಿ ದೇವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ವಿ. ಮುನಿಯಪ್ಪನವರು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯು ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪರ್ಯಾಯ ಸರ್ಕಾರದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ನನಸು ಮಾಡುತ್ತಿದೆ. ಇಂತಹ ಕಾರ್ಯ ಗಳು ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ ರಾಮಸ್ವಾಮಿಯವರು ಮಾತನಾಡುತ್ತಾ ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯಗಳಿಲ್ಲ. ಮನುಷ್ಯನ ಅರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆಯು ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೇ ಅವನು ದುಶ್ಚಟದ ದಾಸನಾದಾಗ ಅವನ ಮನಪರಿವರ್ತನೆ ಮಾಡಿ ಕುಟುಂಬದ ಕಣ್ಣೀರನ್ನು ಒರೆಸುವಂತಹ ನವಜೀವನಕ್ಕೆ ತರುವಂತಹ ಶ್ರೇಷ್ಠವಾದಂತಹ ಪುಣ್ಯದ ಕಾರ್ಯವನ್ನು ಮಾಡುತ್ತಿದ್ದು ಅದು ಧರ್ಮಸ್ಥಳದಿಂದ ಮಾತ್ರ ಸಾಧ್ಯ ಎಂದರು.
ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ ರವರು ಮಾತನಾಡುತ್ತಾ ಈ ಸಮಾಜದಲ್ಲಿ ಮದ್ಯವನ್ನು ಕುಡಿಸುವವರು ಬಹಳಷ್ಟು ಜನರಿದ್ದಾರೆ. ಮದ್ಯವನ್ನು ಬಿಡಿಸುವವರಿದ್ದರೆ ಅದು ಧರ್ಮಸ್ಥಳ ಸಂಸ್ಥೆ ಮಾತ್ರ. ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಜನೋಪಯೋಗಿ ಕಾರ್ಯಕ್ರಮಗಳಾಗಿದ್ದು ಪೂಜ್ಯರು ಗ್ರಾಮಾಭಿವೃದ್ಧಿಯ ಕಲ್ಪನೆಯನ್ನಿಟ್ಟುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕೆನ್ನುವ ದೃಷ್ಟಿಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.
ಮದ್ಯ ವರ್ಜನ ಶಿಬಿರದಲ್ಲಿ ಒಟ್ಟು 47 ಮಂದಿ ಮದ್ಯವ್ಯಸನಿಗಳು ಭಾಗವಹಿಸಿದ್ದು ಇದರಲ್ಲಿ ಸರ್ಕಾರಿ ಉದ್ಯೋಗ ಮಾಡುತ್ತಿರುವ ಐದು ಜನರು, ಸ್ವ ಉದ್ಯೋಗ ಮಾಡುತ್ತಿರುವ 16 ಜನರು, ಕೃಷಿಕರು 20 ಜನ, 6 ಕೂಲಿ ಕಾರ್ಮಿಕರ ನ್ನೊಳಗೊಂಡ ಶಿಬಿರಾರ್ಥಿಗಳು ಪರಿವರ್ತನೆಗೊಂಡು ನವಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಸಾಯಿನಾಥ ಜ್ಞಾನಮಂದಿರದ ಸಂಚಾಲಕರಾದ ನಾರಾಯಣಸ್ವಾಮಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಯಳುವಹಳ್ಳಿ ರಮೇಶ್ ಬೆಳ್ಳುಟ್ಟಿ ಸಂತೋಷ್ ಮೇಲೂರು ಉಮೇಶ್ ಬೈರಾ ರೆಡ್ಡಿ ವೆಂಕಟಸ್ವಾಮಿ ರೆಡ್ಡಿ ಹಿತ್ತಲಹಳ್ಳಿ ಸುರೇಶ್ ತ್ಯಾಗರಾಜ್ ಹೇಮಂತ್ ಕುಮಾರ್ ದೇವರಾಜ್ ನಾರಾಯಣಪ್ಪ ಚಂದ್ರಶೇಖರ್ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಗಣೇಶ್ ಆಚಾರ್ಯ ಮೇಲ್ವಿಚಾರಕರಾದ ಅನಿತಾ ರಾಜೇಶ್ ಒಕ್ಕೂಟದ ಅಧ್ಯಕ್ಷರಾದ ಮಂಜುಳಾ ವನಿತಾ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.