ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ : ಜಿಲ್ಲಾ ಕೇಂದ್ರದಲ್ಲಿರುವ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಿವೈಡರ್ ಮೇಲೆ ಹಾಕಿರುವ ಅನಧಿಕೃತ ಫ್ಲೇಕ್ಸ್ ಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಪಕ್ಷದ ನಗರ ಸಭಾ ಸದಸ್ಯರು ಪ್ರತಿಭಟನೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ #SDPI ಜಿಲ್ಲಾಧ್ಯಕ್ಷರಾದ ಅಬ್ರಾರ್ ಆಹಮ್ಮದ್ ಈಗಾಗಲೇ ನಗರಸಭಾ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗಿದೆ. ಜೋಡಿ ರಸ್ತೆಯಲ್ಲಿರುವ ಡಿವೈಡರ್ ಮೇಲೆ ಯಾರು ಫ್ಲೇಕ್ಸ್ ಗಳನ್ನು ಹಾಕಬಾರದು ಇದು ನಿಷೇಧಿತ ಸ್ಥಳ ಎಂದು ಘೋಷಿಸಲಾಗಿದೆ. ಅಲ್ಲದೇ ಜಿಲ್ಲಾ ಕಾನೂನು ಪ್ರಾಧಿಕಾರ ಸಹ ಈ ನಿರ್ದಿಷ್ಟ ಸ್ಥಳದಲ್ಲಿ ಫ್ಲೇಕ್ಸ್ ಹಾಕದಿರುವಂತೆ ನಗರಸಭೆ ಪೌರಾಯುಕ್ತರಿಗೆ ಲಿಖಿತ ಪತ್ರ ನೀಡಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ. ಹೀಗಿದ್ದರೂ ಸಹ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೋರಿ ಅನಧಿಕೃತ ಫ್ಲೇಕ್ಸ್ ಗಳನ್ನು ಹಾಕಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿರುವ ಪೌರಾಯುಕ್ತರ ನಡೆ ಅತ್ಯಂತ ಖಂಡನೀಯ. ತಕ್ಷಣ ಪೌರಾಯುಕ್ತರು ಎಚ್ಚೆತ್ತು ಕೊಂಡು ಈ ಸಂಬಂಧ ಕ್ರಮ ಜರುಗಿಸಿ ಎಲ್ಲಾ ಅನಧಿಕೃತ ಫ್ಲೇಕ್ಸ್ ಗಳನ್ನು ತೆರವುಗೊಳಿಸ ಬೇಕು. ಇಲ್ಲ ಎಂದರೆ ನಾಳೇ ಪೌರಾಯುಕ್ತರ ಕಛೇರಿಗೆ ಬೀಗ ಜಡಿಯಲಾಗುವುದು ಎಂದು ಅಬ್ರಾರ್ ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಹೇಶ್ ಎಂ, ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್ ಹಾಗೂ ಮುಖಂಡರಾದ ಇಸ್ರಾರ್ ಪಾಷ ಉಪಸ್ಥಿತರಿದ್ದರು.