ಪಾಲಾರ್ ಪತ್ರಿಕೆ | Palar Patrike
ಬಾಗೇಪಲ್ಲಿ, :- ಪ್ರತಿಯೋಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಪೊಲೀಸ್ ಆರಕ್ಷಕ ನಿರೀಕ್ಷಕರಾದ ಡಿ.ಆರ್.ನಾಗರಾಜು ತಿಳಿಸಿದರು.ಪಟ್ಟಣದ ಪೋಲಿಸ್ ಠಾಣೆಯಲ್ಲಿ ಆರಕ್ಷಕ ಜನಸ್ನೇಹಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಲಭಿಸುತ್ತದೆ. ಇತ್ತೀಚೆಗೆ ಮಕ್ಕಳು ಓದುವುದನ್ನು ಬಿಟ್ಟು ಹೆಚ್ಚಾಗಿ ಮೊಬೈಲ್, ಗೇಮ್ ಎಂದು ಕಾಲ ಕಳೆಯುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಓದುವುದರಿಂದ ಮನಸ್ಸಿಗೆ ನೆಮ್ಮದಿಯ ಜೊತಗೆ ಜ್ಞಾನವು ಹೆಚ್ಚಾಗುತ್ತದೆ. ಜನರು ಮತ್ತು ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸಬೇಕಿದೆ. ಸದ್ಯ ಠಾಣೆಗೆ ಬರುವ ಹಲವು ಜನ, ಅನಗತ್ಯವಾಗಿ ಸಮಯ ಕಳೆಯುತ್ತಾರೆ. ಇಂಥವರಲ್ಲಿ ಓದುವ ಹವ್ಯಾಸ ಹೆಚ್ಚಿಸುವುದಕ್ಕಾಗಿ ಠಾಣೆಗಳಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ಕುವೆಂಪು, ದ.ರಾ.ಬೇಂದ್ರೆ, ಚಂದ್ರಶೇಖರ್ ಕಂಬಾರ ಸೇರಿದಂತೆ ವಿವಿಧ ಸಾಹಿತಿಗಳ ಪುಸ್ತಕಗಳು, ಕಾನೂನಿನ ಬಗ್ಗೆ, ಆರೋಗ್ಯದ ಬಗ್ಗೆ ಸೇರಿದಂತೆ ಅನೇಕ ಕಥೆ, ಕಾದಂಬರಿಗಳು ಹಾಗೂ ದಿನಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಠಾಣೆಗೆ ಬರುವ ಪ್ರತಿಯೊಬ್ಬರು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದುಕೊಂಡು ಓದಲು ಅವಕಾಶ ಇರಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಧಾತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೆ.ವಿ. ಪ್ರಶಾಂತ್ ಕುಮಾರ್, ಆರಕ್ಷಕ ಠಾಣೆಯ ಪೋಲಿಸ್ ಸಿಬ್ಬಂದಿ, ಸಾರ್ವಜನಿಕರು, ನಾಗರೀಕರು ಹಾಜರಿದ್ದರು.