ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಿಯೋಜಿತರಾಗಿರುವ ಮಾಸ್ಟರ್ ಟ್ರೈನರ್ ಗಳು ಹಾಗೂ ಸೆಕ್ಟರ್ ಅಧಿಕಾರಿಗಳ ಹೊಣೆಗಾರಿಕೆ ಅತ್ಯಂತ ಪ್ರಮುಖವಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಮಾಸ್ಟರ್ ಟ್ರೈನರ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿಯನ್ನುದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು.
ಚುನಾವಣೆ ಕರ್ತವ್ಯ ನಿರ್ವಹಣೆ ಜವಾಬ್ದಾರಿಯುತವಾಗಿದೆ. ಮಾಸ್ಟರ್ ಟ್ರೈನರ್ ಗಳು ಅವರಿಗೆ ನಿಯೋಜಿಸಲಾಗಿರುವ ಕಾರ್ಯ ಕ್ಷೇತ್ರದಲ್ಲಿ ಮತಗಟ್ಟೆಗೆ ನೇಮಕವಾಗಿರುವ ಅಧಿಕಾರಿಗಳಿಗೆ ಸಂಪೂರ್ಣವಾದ ತರಬೇತಿ ನೀಡಬೇಕಿದೆ. ಮತದಾನದಂದು ಕರ್ತವ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳಿಗೆ ನಿರ್ವಹಿಸಬೇಕಿರುವ ಕೆಲಸದ ಬಗ್ಗೆ ಪರಿಪೂರ್ಣವಾಗಿ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆ ಮಾಸ್ಟರ್ ಟ್ರೈನರ್ ಗಳ ಮೇಲಿದೆ ಎಂದರು.
ಮಾಸ್ಟರ್ ಟ್ರೈನರ್ ಗಳು ವಿಧಾನಸಭಾ ಕ್ಷೇತ್ರವಾರು ನೀಡಲಿರುವ ತರಬೇತಿ ಅವಧಿಯಲ್ಲಿ ಸಂಬಂಧಪಟ್ಟ ವಿಷಯಗಳ ಬಗ್ಗೆ ತಿಳಿಸಿಕೊಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳನ್ನು ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸೆಕ್ಟರ್ ಅಧಿಕಾರಿಗಳು ಸಹ ಚುನಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಮತಗಟ್ಟೆಗಳಿಗೆ ಬೇಕಾದ ಸಿದ್ದತೆ, ಉಸ್ತುವಾರಿ ಮಾಡಬೇಕಾಗುತ್ತದೆ. ಮತದಾನದಂದು ಕಾಲಕಾಲಕ್ಕೆ ವರದಿ ನೀಡಬೇಕಾಗುತ್ತದೆ. ದೂರವಾಣಿ ಸಂಪರ್ಕ ಇಲ್ಲದ ಕಡೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ನೆರವು ಪಡೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು. ಇದೇ ವೇಳೆ ಪವರ್ ಪಾಯಿಂಟ್ ಮೂಲಕ ಅಧಿಕಾರಿಗಳಿಗೆ ಸುಧೀರ್ಘವಾಗಿ ತರಬೇತಿ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಚುನಾವಣಾ ತಹಶೀಲ್ದಾರ್ ರವಿಕುಮಾರ್ ವಸ್ತ್ರದ್, ಶಿರಸ್ತೇದಾರ್ ಬಸವರಾಜು, ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ತುಳಸಿರಾಮ್, ಹೇಮಂತ್ ಕುಮಾರ್, ತರಬೇತಿ ನೋಡಲ್ ಅಧಿಕಾರಿ ಯು.ಆರ್. ಲಿಂಗರಾಜೇಅರಸ್, ಇತರರು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.