ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ: ಅಬಕಾರಿ ಭದ್ರತಾ ಚೀಟಿಗಳು ಇಲ್ಲದೆ ಇರುವ ಕಾರಣದಿಂದ ಒಟ್ಟಾರೆ 14,65,015 ರೂ. ಮೌಲ್ಯದ 9012 ಲೀ ಬಿಯರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಸಂಬಂಧಪಟ್ಟವರ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ಶನಿವಾರ (ಏ.15) ದಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೊಗೆ ನೆಲಮಂಗಲದ ಯುನೈಟೆಡ್ ಬ್ರಿವರಿಸ್ ಪ್ರೈ.ಲಿ. ನಿಂದ ಸರಬರಾಜಾದ ಬಿಯರ್ ನ 1,150 ರಟ್ಟಿನ ಪೆಟ್ಟಿಗೆಗಳಲ್ಲಿ 7 ರಟ್ಟಿನ ಪೆಟ್ಟಿಗೆಗಳ ಮೇಲೆ ಅಬಕಾರಿ ಭದ್ರತಾ ಚೀಟಿಗಳು ಇಲ್ಲದಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಒಟ್ಟಾರೆ 14,65,015 ರೂ. ಮೌಲ್ಯದ 9012 ಲೀ ಬಿಯರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಬ್ರಿವರಿಸ್ ಸನ್ನದುದಾರರು ಹಾಗೂ ಚಾಲಕರ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ಉಪ ಆಯುಕ್ತರಾದ ಆರ್ ನಾಗಶಯನ, ಅಬಕಾರಿ ಉಪ ಅಧೀಕ್ಷಕರಾದ ಮೋಹನ್ ಕುಮಾರ್, ಚಾಮರಾಜನಗರ ಉಪವಿಭಾಗ ಅಬಕಾರಿ ನಿರೀಕ್ಷಕರಾದ ಸಿ.ಎಂ. ಮಹದೇವ, ಕೆ.ಎಸ್.ಬಿ.ಸಿ.ಎಲ್ ಡಿಪೊ ವ್ಯವಸ್ಥಾಪಕರಾದ ಬಸವರಾಜು, ಅಬಕಾರಿ ನಿರೀಕ್ಷಕರಾದ ಗುರುನಾಥ ಶೆಟ್ಟಿ ಭಾಗವಹಿಸಿದ್ದರು.