ಚಿಕ್ಕಬಳ್ಳಾಪುರ: ತ್ರಿಪದಿಗಳ ಬ್ರಹ್ಮ ಎಂದೇ ಕರೆಯಲ್ಪಡುವ ಸಂತ ಕವಿ ಸರ್ವಜ್ಞ ಅವರು ಕನ್ನಡ ಸಾಹಿತ್ಯಕ್ಕೆ ತ್ರಿಪದಿಗಳನ್ನು ಮತ್ತು ವಚನಗಳನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ನವರ ಜಯಂತಿಯ ಅಂಗವಾಗಿ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂತ ಕವಿ ಸರ್ವಜ್ಞನವರು ರಾಷ್ಟ್ರಕಂಡ ಶ್ರೇಷ್ಠ ತತ್ವಜ್ಞಾನಿ.ಸಮಾಜಕ್ಕೆ ತಮ್ಮ ತ್ರಿಪದಿಗಳು ಮತ್ತು ವಚನಗಳ ಮೂಲಕ ಮಾರ್ಗದರ್ಶನ ನೀಡಿದ ಮಹಾನ್ ಸುಧಾರಕರು. ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ವಚನಕಾರ.ತ್ರಿಪದಿಗಳ ಮೂಲಕವೇ ವಚನಗಳನ್ನು ರಚಿಸಿದ ಮಹನೀಯರಾದ ಸರ್ವಜ್ಞ “ಅನ್ನಕ್ಕೆ ಮಿಗಿಲಾದುದ್ದು ಯಾವುದು ಇಲ್ಲಾ,ಅನ್ನವೇ ಲೋಕಕ್ಕೆ ಪ್ರಾಣ ಸರ್ವಜ್ಞ” ಎಂದು ಅನ್ನದ ಮಹತ್ವ ಸಾರಿದ ಮೊದಲಿಗರು. ಪ್ರತಿಯೊಬ್ಬರು ಅವರ ವಚನಗಳು ಹಾಗೂ ತತ್ವ ಆದರ್ಶಗಳೇ ನಮಗೆ ಇಂದು ಮಾರ್ಗದರ್ಶನವಾಗಿದ್ದು, ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಮಾತನಾಡಿದರು.
ಉಪನ್ಯಾಸಕರಾದ ಪ್ರಕಾಶ್ ಅವರು ಸಂತ ಕವಿ ಸರ್ವಜ್ಞ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಂಬಾರ ಸಮುದಾಯದ ಅಧ್ಯಕ್ಷರಾದ ನಾರಾಯಣಸ್ವಾಮಿ, ಉಪಧ್ಯಕ್ಷರಾದ ಚಂದ್ರಣ್ಣ ಹಾಗೂ ಸಮುದಾಯದ ಮಹಿಳಾ ಮುಖಂಡರಾದ ಪ್ರೇಮಲೀಲಾ , ಪಧಾದಿಕಾರಿಗಳಾದ ವಿ.ಶುಶೀಲಾ, ನಾಗಮಣಿ , ಸುಬ್ಬಲಕ್ಷೀ , ಮಂಜುನಾಥ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.