ದೇವನಹಳ್ಳಿ: ಬಡವರಿಗೆ, ದೀನ-ದಲಿತರಿಗೆ, ನೊಂದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರಿ ಸೇವೆ ಸಿಗುವಂತಾಗಬೇಕು. ಅಧಿಕಾರಿಗಳು ಉಳ್ಳವರ ಪರವಾಗಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮತ್ತು ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರದ ಕಂದಾಯ ಸಚಿವ ಆರ್.ಅಶೋಕ್ ಬಡವರ ಪರವಾಗಿ ಯಾವುದೇ ಒಂದು ಕಾಯ್ದೆಯನ್ನು ಇದುವರೆಗೂ ತಂದಿಲ್ಲ. 94ಸಿಸಿ ಅಡಿಯಲ್ಲಿ ಬಡವರಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ. ಬಡ ಕುಟುಂಬಗಳ ರೈತರಿಗೆ ನಮೂನೆ 57 ಅರ್ಜಿ ಹಾಕಿದ್ದರೂ ಸಾಗುವಳಿ ಚೀಟಿ ನೀಡಿಲ್ಲ. ಇಂತಹವುಗಳನ್ನು ಮುಂದಿನ ದಿನಗಳಲ್ಲಿ ಈಗಿನ ಸರಕಾರ ಗಮನಹರಿಸಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಸರಕಾರಿ ಕೆಲಸ ದೇವರ ಕೆಲಸವೆಂದು ಜನರ ಸೇವೆ ಮಾಡುವಂತಾಗಬೇಕು. ಉಳ್ಳವರ ಪರವಾಗಿ ಸರಕಾರಿ ಅಧಿಕಾರಿಗಳು ಮಾರಿ ಹೋಗಬಾರದು ಎಂದು ಹೇಳಿದರು.
ನೂತನ ಪದಾಧಿಕಾರಿಗಳು: ಬೆಂಗಳೂರು ನಗರ ಗೌರವಾಧ್ಯಕ್ಷ ಮಾವಳಿಪುರ ಜಯಣ್ಣ, ಬೆಂಗಳೂರು ವಿಭಾಗೀಯ ಅಧ್ಯಕ್ಷ ಆದೂರು ದೇವರಾಜ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಲಘುಮಯ್ಯ, ಬೆಂಗಳೂರು ವಿಭಾಗೀಯ ಕಾರ್ಯದರ್ಶಿ ಆಲೂರು ಮುನಿರಾಜ್ ನೂತನವಾಗಿ ಸಂಘಟನೆಗೆ ನೇಮಕಗೊಂಡರು.
ಈ ವೇಳೆಯಲ್ಲಿ ಪಿವಿಸಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಕೋಳು ಚನ್ನಮರಿಯಪ್ಪ, ಮಹಿಳಾ ಘಟಕ ಅಧ್ಯಕ್ಷೆ ವಸಂತಮ್ಮ, ಯಲಹಂಕ ತಾಲೂಕು ಅಧ್ಯಕ್ಷ ಕಾಂತರಾಜು ಬೆಳ್ಳುಳ್ಳಿ, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ನೆಲಮಂಗಲ ತಾಲೂಕು ಅಧ್ಯಕ್ಷ ಟಿ.ಕೆ.ವಾಸುಮೂರ್ತಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪುನೀತ್ಕುಮಾರ್, ದೇವನಹಳ್ಳಿ ಮಹಿಳಾ ಘಟಕ ಅಧ್ಯಕ್ಷೆ ಅರುಣಾಕುಮಾರಿ, ಟೌನ್ ಅಧ್ಯಕ್ಷ ವಿಶ್ವನಾಥ್, ಟೌನ್ ಗೌರವಾಧ್ಯಕ್ಷ ವಿಶ್ವನಾಥ್, ಟೌನ್ ಉಪಾಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳು ಇದ್ದರು.