ದೇವನಹಳ್ಳಿ: ನಡೆದಾಡುವ ದೇವರಾಗಿ ಭಕ್ತಾಧಿಗಳ ಪಾಲಿಗೆ ದೇವತಾಪುರುಷನಾದ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮಿಜಿಯವರ ಪುಣ್ಯಸ್ಮರಣೆ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ತಿಳಿಸಿದರು.
ಪಟ್ಟಣದ 14ನೇ ವಾರ್ಡಿನ ನಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಯವರ ಮೂರನೇ ಪುಣ್ಯ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ನಮಗೆಲ್ಲರಿಗೂ ದಾಸೋಹ ದಿನವೆಂದರೆ ಅದೊಂದು ಮಹಾ ಪುಣ್ಯದಿನ, ಶ್ರೀಗಳ ಸ್ಮರಣೆ ದಿನ, ಇಡೀ ಪ್ರಪಂಚಕ್ಕೆ ದಾಸೋಹ ತತ್ವವನ್ನು ಸಾರಿ ತ್ರಿವಿಧ ದಾಸೋಹದಲ್ಲಿ ಯಾರೂ ಏರಲಾರದ ಎತ್ತರಕ್ಕೆ ಸಾಗಿ ಪ್ರಕಾಶಿಸಿ, ಆ ಬೆಳಕನ್ನು ಇಡೀ ನಾಡಿಗೆ ಹಂಚಿದ ದಿವ್ಯ ಬೆಳಕು ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಅವರ ತತ್ವ ಆದರ್ಶ ಇಂದಿನ ಯುವ ಪೀಳಿಗೆಗೆ ಪ್ರಸ್ತುತ ಎಂದರು.
ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ದಿನದಂದು ರಾಜ್ಯ ಸರ್ಕಾರ ದಾಸೋಹ ದಿನ ವೆಂದು ಘೋಷಣೆ ಮಾಡಿದ್ದರ ಹಿನ್ನೆಲೆ ಡಾ. ಶಿವಕುಮಾರ ಸ್ವಾಮಿಯವರ ಲಿಂಗೈಕ್ಯರಾದ ದಿನವನ್ನು ದಾಸೋಹ ದಿನ ಎಂದು ಆಚರಿಸಲು ಭಕ್ತರ ಒತ್ತಾಯ ಮೇರೆಗೆ ಸರ್ಕಾರ ಆಚರಣೆ ಮಾಡಲು ನಿರ್ಧಾರ ಮಾಡಿದ್ದರಿಂದ ಅನ್ನದಾಸೋಹಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ದೇವನಹಳ್ಳಿ ಜೇಸಿಐ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಸಾರ್ವಜನಿಕವಾಗಿ ಆಚರಿಸಲಿಕ್ಕೆ ಸಾಧ್ಯವಾಗದೇ ಇದ್ದರೂ ನಾವು ನಮ್ಮ ಪ್ರತಿ ಮನೆಯಲ್ಲಿ ಶ್ರೀಗಳ ಆದರ್ಶವನ್ನು ಮೆರೆಯಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲೂ ಇರುವ ಒಬ್ಬರಿಗಾದರೂ ಅನ್ನಸಂತರ್ಪಣೆ ಮಾಡುವ ಮೂಲಕ ಪೂಜ್ಯರ ಸ್ಮರಣೆಯನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ದೇವನಹಳ್ಳಿ ಟೌನ್ ನರ್ಗತರ ಸಂಘದ ಅಧ್ಯಕ್ಷ ಬಿದಲೂರು ನಾಗರಾಜಪ್ಪ, ಜನಾಂಗದ ಮುಖಂಡ ವಿಶ್ವನಾಥ್, ಮಲ್ಲಿಕಾರ್ಜುನ್ ಮಯೂರ ಯುವಕ ಸಂಘದ ಸದಸ್ಯರಾದ ವಿನಯ್, ಗಿರೀಶ್, ವೈ.ಆರ್. ಪುನೀತ್, ನಿಖಿಲ್, ಹರ್ಷ, ಮಹೇಶ್, ಪುನೀತ್, ಹಾಗೂ ಮತ್ತಿತರರು ಇದ್ದರು.