ರಾಮನಗರ:ಶಾಲೆಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸಬೇಕಾದರೆ ಮಕ್ಕಳು ಆಟವಾಡುವ ಸಂದರ್ಭಗಳಲ್ಲಿ ಗುಂಪು- ಗುಂಪಾಗಿ ಸೇರದಂತೆ ಅಂತರವನ್ನು ಕಾಪಾಡಿಕೊಳ್ಳಬೇಕು, ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸಲು ಸೋಪು ಮತ್ತು ಸ್ಯಾನಿಟೈಸರ್, ಆಯ್ದ ಪ್ರದೇಶಗಳಲ್ಲಿ ಇಡಬೇಕು ಎಂದು ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಸಲಹೆ ನೀಡಿದರು.
ಜಿಲ್ಲಾ ಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲಾ ಎಸ್.ಬಿ.ಸಿ.ಸಿ. ಘಟಕ ರಾಮನಗರ, ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಮುದವಾಡಿ ಇವರ ಸಹಕಾರದೊಂದಿಗೆ ಚಿಕ್ಕಮುದವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಅನುಸರಿಸ ಬೇಕಾದ ಸೂಕ್ತ ಕ್ರಮಗಳು ಮತ್ತು ಲಸಿಕೆ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿದ್ದಲ್ಲಿ ಸ್ವಯಂ ನಿರ್ಧಾರ ಮಾಡಿ ತರಗತಿಗಳಿಂದ ದೂರ ಉಳಿಯುವಂತೆ ತಿಳಿಸಿದರು. ವಾರಕೊಮ್ಮೆ ಶೌಚಾಲಯ, ತರಗತಿಗಳು, ಆಟದ ಮೈದಾನದ ಸ್ವಚ್ಛತೆ ಬಗ್ಗೆ ಮೇಲ್ವಿಚಾರಣೆ ಮಾಡುವುದು. ಬಿಸಿ ಊಟದ ಅಡುಗೆ ಸಿಬ್ಬಂದಿ ಅಡುಗೆ ತಯಾರಿಸುವ ವೇಳೆ, ಊಟ ಬಡಿಸುವ ವೇಳೆ ರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಮಕ್ಕಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು ತರಗತಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಎಸ್.ಬಿ.ಸಿ.ಸಿ. ಸಂಯೋಜಕ ಸುರೇಶ್ ಬಾಬು ಮಾತನಾಡುತ್ತಾ, ಶಿಕ್ಷಕರು, ಅಡುಗೆ ಸಿಬ್ಬಂದಿ, ಹಾಗೂ ೧೫ ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ೨ ಡೋಸ್ ಲಸಿಕೆ ಪಡೆಯುವಂತೆ ಸಲಹೆ ನೀಡಿದರು. ಕೋವಿಡ್ ಸೂಕ್ತ ಚಟುವಟಿಕೆ ಅನುಸಾರ ಶಾಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅಲ್ಲದೇ ಮನೆಯಲ್ಲಿ ಕೋವಿಡ್ -೧೯ ಸೋಂಕನ್ನು ನಿಯಂತ್ರಿಸ ಬೇಕಾದರೆ ಕೆಮ್ಮು ಶೀತ, ಜ್ವರ ಇತರೆ ಲಕ್ಷಣಗಳಿದ್ದಲ್ಲಿ, ಕೋವಿಡ್ ಉಸಿರಾಟದ ತೊಂದರೆ ಇದ್ದರೇ, ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದಲ್ಲಿ, ಅನಾರೋಗ್ಯ ಪೀಡಿತ ಮಕ್ಕಳಿದ್ದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯರಾದ ಪ್ರಭುಲಿಂಗರಾಜು, ಶಿಕ್ಷಕರಾದ ಮಧುಸುಧನ್, ಸುರೇಶ್, ಪ್ರಕಾಶ್, ಮುನಿಚೂಡಯ್ಯ, ಮಲ್ಲಿಕಾ, ತಿಮ್ಮರಾಯಪ್ಪ, ಲಕ್ಷ್ಮೀ, ಶುಭಾಷ್ಕಮ್ಮಾರ್, ವೆಂಕಟಲಕ್ಷ್ಮೀ, ಹಾಗೂ ಆರೋಗ್ಯ ಸಿಬ್ಬಂದಿ, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.