ಬುಡಕಟ್ಟು ಕಾಡುಗೊಲ್ಲರು ತಮ್ಮದೇ ಆದ ಸಂಪ್ರದಾಯ, ಜಾನಪದ, ಆಚಾರ, ವಿಚಾರ, ಸಾಂಸ್ಕೃತಿಕ ಧಾರ್ಮಿಕ ನಂಬಿಕೆಗಳಿಂದ ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದಾರೆ.
ಕಾಲ ಬದಲಾದಂತೆ ನಮ್ಮ ಶ್ರೀಮಂತ ಸಂಸ್ಕೃತಿಗಳು ನಶಿಸಿಹೋಗುತ್ತಿವೆ ಇಂತಹ ಸಂದರ್ಭದಲ್ಲಿ ‘ಜಾನಪದ ಸಂತ’ ಮೋಹನ್ ಕುಮಾರ್ ಅವರು ಸಾವಿರಾರು ಮೂಲ ಬುಡಕಟ್ಟು ಕಾಡುಗೊಲ್ಲರ ಜಾನಪದ
ಹಾಡುಗಳನ್ನು ವೇದಿಕೆ ಕಾರ್ಯಕ್ರಮಗಳಲ್ಲಿ, ದೇವರ ಕಾರ್ಯಗಾರದಲ್ಲಿ, ಹಾಗೂ ತನ್ನ ಯುಟ್ಯೂಬ್ ಚಾನೆಲ್ ನ ಮುಖಾಂತರ ಪ್ರಸ್ತುತಪಡಿಸಿ ಜನರಿಗೆ ಉಣಬಡಿಸಿ ಜಾನಪದ ಸೊಗಡನ್ನು ಈಗಲೂ ಜೀವಂತವಾಗಿಸಿದ್ದಾರೆ.
ಈ ಕಲೆ ಇವರಿಗೆ ಇವರ ಅಜ್ಜಿ ಕೆಂಗವ್ವ ” ಹಾಗೂ ತಾಯಿ ‘ದೊಡ್ಡಮ್ಮ’ ಅವರಿಂದ ಬಳುವಳಿಯಾಗಿ ಬಂದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ತನ್ನ ಸಿರಿಕಂಠದಲ್ಲೇ ಜನಪದ ಸಂಪತ್ತನ್ನು ತುಂಬಿಕೊಂಡಿರುವ ಇವರು ಸಸಿ ನಾಟಿ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ, ಹಬ್ಬ-ಹರಿದಿನ ಬಂದಾಗ, ಮದುವೆ- ಮುಂಜಿ ಆದಾಗ, ಹೆಣ್ಣು ಮಕ್ಕಳು ಮೈ ನೆರೆದಾಗ ಸಾವಿನ ಕುರಿತು ಕಾಡುಗೊಲ್ಲರ ವೀರಗಾರ ಕಾವ್ಯಗಳು ಹೀಗೆ ಪ್ರತಿಯೊಂದಕ್ಕೂ ಅರ್ಥಗರ್ಭಿತವಾದ ಜನಪದ ಹಾಡನ್ನು ಹಾಡುವ, ಮೂಲಕವೇ ಜನರಿಗೆ ತಿಳಿವಳಿಕೆ ಜೊತೆಗೆ ಜೀವನದ ಪಾಠ ಹಂಚುತ್ತಿದ್ದು, ಜನಪದರ ಆಸ್ತಿಯಾಗಿದ್ದಾರೆ.
ತನ್ನ mohan kumar ಎಂಬ ಯುಟ್ಯೂಬ್ ಚಾನಲ್ ಗೆ ಲಕ್ಷಾಂತರ ಜನರು ಹಿಂಬಾಲಕರಿದ್ದು . ವಿಕ್ಷಕರು ಇವರ ವಿಡಿಯೋಗಳಿಗೆ ಕಮೆಂಟ್ ಮೂಲಕ ನಿಮ್ಮನ್ನ ನೋಡಬೇಕು ನಮ್ಮ ಹಟ್ಟಿಗೆ ಬನ್ನಿ ಎಂಬಂತಹ ಅವರ ಮನದಾಸೆ ವ್ಯಕ್ತಪಡಿಸುವುದನ್ನು ಕಂಡು ಇವರನ್ನೊಮ್ಮೆ ಬೇಟಿ ಮಾಡಬೇಕು ಪ್ರತಿ ಹಟ್ಟಿಗೆ ತೆರಳಿ ಅಲ್ಲಿನ ಮೂಲ ಸಂಸ್ಕೃತಿಯನ್ನು ಸಂಗ್ರಹ ಮಾಡಬೇಕು ಎಂಬ ಮಹದಾಸೆಗೆ ಆರ್ಥಿಕವಾಗಿ, ನೈತಿಕವಾಗಿ ಬಲ ತುಂಬಿದವರು ಸಮುದಾಯದ ಹಿರಿಯ ಮುಖಂಡರು, ಕಾಡುಗೊಲ್ಲ ಸಮುದಾಯದ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಶ್ರೀ ರಾಜಣ್ಣನವರು.
ಪ್ರತಿಹಂತದಲ್ಲೂ ಧೈರ್ಯ ತುಂಬಿ ಇಂತಹ ಐತಿಹಾಸಿಕ ಸಾಂಸ್ಕೃತಿಕ ಕೆಲಸಕ್ಕೆ ಬೆಂಬಲವಾಗಿದ್ದದನ್ನ ಮೋಹನ್ ಕುಮಾರ್ ಅವರು ಪ್ರತಿ ಹಂತದಲ್ಲಿ ಸ್ಮರಿಸಿಕೊಳ್ಳುತ್ತಾರೆ.
“ಮೊಬೈಲ್ನಾಗೆ ಪದ ಹೇಳೋ ಅಣ್ಣ ನೀನೇ ಅಲ್ವಾ ಎಂತ ಶನಾಕೆ ಹೇಳ್ತಿಯಪ್ಪ .!
ಹಟ್ಟಿಗೆ ನಾವು ಕಾಲಿಟ್ಟ ತಕ್ಷಣ ನೋಡಿದ ಕೊಡಲೇ ಹಿಂದೊಂದು ದ್ವನಿ ಪಿಸುಗುಟ್ಟುತ್ತದೆ.
‘ಅಲ್ನೋಡು ಮೊಬೈಲ್ನಲ್ಲಿ ಪದ ಹೇಳುತ್ತಲ್ಲ ಅ ಅಣ್ಣಯ್ಯ ಬಂದೈತೆ’
ಹತ್ತಿರಕ್ಕೆ ಬಂದ ಹಿರಿ ಜೀವಿಗಳು ಅಬ್ಬಬ್ಬಾ ದೇವರ ನೋಡಿದಂಗೆ ಆಯ್ತಪ್ಪ ನಿನ್ನ ನೋಡಿ. ಎಷ್ಟು ಚೆನ್ನಾಗಿ ಪದ ಕಲ್ತಿದ್ಯಾ ನಿಮ್ಮಮ್ಮಕೂಡೆ ಹೆಗಲ ಮ್ಯಾಲೆ ಕಯ್ಯಾಕಿಕೊಂಡು ಅದೆಷ್ಟು ಚೆನ್ನಾಗಿ ಹಾಡುತ್ತೀರ
ಎಲ್ಲೀ..ಒಂದೆ ಒಂದು ಪದ ಹೇಳು ಮತ್ತೆ ಅಂತ ಕ್ಷಣಾರ್ದದಲ್ಲಿ ಸುತ್ತುವರೆದು ಬಿಡುತ್ತಾರೆ .
ಅವರ ಅಭಿಮಾನಕ್ಕೆ ಕಟ್ಟುಬಿದ್ದು ಮೋಹನ್ ಕುಮಾರ್ ಅವರು ಅವರು ಬಯಸಿದ ಹಾಡನ್ನ ಹಾಡಿ ಹಿರಿ ,ಕಿರಿ ಜೀವಿಗಳ ಜನಪದ ಮನಸ್ಸು ತಣಿಸುತ್ತಾರೆ.
ತಾನೇ ಹಾಡಿರುವ ಜುಂಜಪ್ಪ, ಕ್ಯಾತಪ್ಪ, ಚಿತ್ರ ದೇವರು, ರಂಗಪ್ಪ ದೇವರುಗಳ ಮೇಲಿನ ಸಿಡಿಯೊಂದನ್ನು ಊರಿನ ಪ್ರಮುಖರಿಗೆ ಕೊಟ್ಟು ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಾರೆ.
ಯುವ ಮಿತ್ರರಂತು ಸುತ್ತುವರಿದು ತನ್ನ ಸಮುದಾಯದ ಹೀರೋ ಎಂಬ ಭಾವನೆದಿಂದ ಸೆಲ್ಫಿಗೆ ಮುಗಿಬೀಳುತ್ತಾರೆ.
ಹಟ್ಟಿಗಳು ಮೌಡ್ಯ ಮುಕ್ತವಾಗಬೇಕು
ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು
ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಅದೆಷ್ಟೋ ಹಟ್ಟಿಗಳು ಈಗಲೂ ಕೂಡ ಟಾರ್ ರೋಡ್ ನೋಡಿಲ್ಲ, ಸಮರ್ಪಕ ನೀರಿನ ವ್ಯವಸ್ಥೆಇಲ್ಲ ಇನ್ನು ಬಸ್ಸಿನ ಸಂಪರ್ಕ ದೂರದ ಮಾತು, ಶಾಲೆಗಳಿದ್ದರೂ ಅವು ಬೀಳುವ ಹಂತಕ್ಕೆ ತಲುಪಿವೆ.
ಕೆಲವು ಹಟ್ಟಿಯ ಜನ ಈಗಲೂ ನಾಗರಿಕ ಸಮಾಜದಿಂದ ಅನಂತರ ಕಾಯ್ದುಕೊಂಡಿದ್ದಾರೆ. ಇವುಗಳನ್ನೆಲ್ಲ ಗಮನಿಸಿದ ಮೋಹನ್ ಅವ್ರು
ಹಟ್ಟಿಗಳ ಸ್ಥಿತಿಗತಿ, ಅಲ್ಲಿನ ಆಚಾರ, ಸಂಸ್ಕೃತಿ, ಜನಪದ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡು ಅಲ್ಲಿನ ಜನರಿಗೆ ಮೌಢ್ಯ, ಮುಟ್ಟು, ಚಿಟ್ಟು ತೊಡೆದುಹಾಕುವ ಜಾಗೃತಿ ಪ್ರತಿ ಹಟ್ಟಿಯಲ್ಲಿ ಮಾಡುತ್ತಾ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಂತೆ ಪ್ರೇರೇಪಿಸುವ, ಸರ್ಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ, ಸಂಸ್ಕೃತಿಯನ್ನು ಉಳಿಸುವ ಜಾಗೃತಿ ಕೆಲಸಗಳನ್ನು ಮಾಡುತ್ತಿದ್ದಾರೆ.
ತರಕಾರಿ ವ್ಯಾಪಾರಿಗೆ ವರದಾನವಾದ ಮೋಹನ್ಕುಮಾರ್ ಜಾನಪದ ಹಾಡುಗಳು
ಇದು ವಿಚಿತ್ರವಾದರೂ ಸತ್ಯ ಹೀಗೆ ಒಂದು ಹಟ್ಟಿಗೆ ನಾವು ಭೇಟಿ ಕೊಟ್ಟಾಗ ಅಲ್ಲಿನ ಒಬ್ಬರು ನಿನ್ನ ಹಾಡು ಕೇಳದೆ ನಾವು ದಿನ ಮಲಗುವುದೇ ಇಲ್ಲಪ್ಪ .
ನನ್ನ ಮೊಬೈಲ್ ನಲ್ಲಿ ಇರೋ ಅಷ್ಟೂ ಹಾಡುಗಳು ನಿನ್ನವೆ .
ನಮ್ಮೂರಿಗೆ ತರಕಾರಿ ವ್ಯಾಪಾರ ಮಾಡೋಕೆ ಉಗಣೆಕಟ್ಟೆಗೆ ಒಬ್ರು ಅಣ್ಣ ಬರ್ತಾರೆ ಅವರು ದೊಡ್ಡ ಮೈಕ್ ಅಲ್ಲಿ ನಿನ್ನ ಹಾಡನ್ನೇ ಹಾಕ್ತಾರೆ . ನಾವು ಎಷ್ಟೇ ದೂರದಲ್ಲಿದ್ದರೂ ಅಡುಗೆಮನೆಲೀ ಇದ್ರು ನಿಮ್ಮ ಹಾಡು ಕೇಳಿಸಿಕೊಂಡು ಅವರ ಹತ್ರನೆ ತರಕಾರಿ ಖರೀದಿ ಮಾಡ್ತೀವಿ . ಅಂಥ ಹೇಳಿ ಶಾಂತಕ್ಕ ಗಹಗಹಿಸಿ ನಕ್ಕಿದ್ದು ಮರೆಯೋದುಂಟೆ.!
ಮೋಹನ್ ಕುಮಾರ್ ಹಾಡು ಐಸಿಯುನಲ್ಲಿದ್ದ ಪೇಷಂಟ್ ನ ಜೀವ ಉಳಿಸಿದ ಕಥೆ
ಸರ್ ನಮ್ಮ ತಂದೆಗೆ ತೀರಾ ಹುಷಾರಿರಲಿಲ್ಲ ಆಸ್ಪತ್ರೆಗೆ ಸೇರಿಸಿದ್ವಿ ಅವರಿಗೆ ಜ್ಞಾನ ಬಂದಾಗ ನೀವು ಹಾಡಿರುವ ನಮ್ಮ ದೇವರ ಪದಗಳನ್ನು ಮೋಬೈಲ್ ನಲ್ಲಿ ಪ್ರತಿದಿನ ಕೇಳ್ತಾ ಇದ್ರು ಹೀಗೆ ಮೂರು ದಿನ ಆದ ನಂತರ ಅವರು ಸಹಜಸ್ಥಿತಿಗೆ ಬಂದರು, ಈಗ ಆರಾಮಾಗಿ ಓಡಾಡಿಕೊಂಡು ಆರೋಗ್ಯವಾಗಿದ್ದಾರೆ .
ಅದೆಲ್ಲ ನಿಮ್ಮ ಧ್ವನಿ ಹಾಗೂ ನಮ್ಮ ಕಾಡುಗೊಲ್ಲರ ಹಾಡುಗಳಲ್ಲಿರುವ ಪವಾಡ ಸರ್ ಅಂತ ವಿನಮ್ರವಾಗಿ ಕೈಮುಗಿದಿದ್ದು ನೋಡಿ ಮೋಹನ್ ಕುಮಾರ್ ಅವರು ಭಾವುಕರಾದರು .
ಬೆಜ್ಜಿಹಳ್ಳಿ ಹಟ್ಟಿಗೆ ಹೋದಾಗ ಸರಿ ಸುಮಾರು 85 ವರ್ಷದ ವೃದ್ಧ ಚೈನಾ ಮೊಬೈಲ್ನಲ್ಲಿ ಇವರ ಹಾಡುಗಳನ್ನು ಕೇಳಿಕೊಂಡು ಜೀವನ ಸಾಗಿಸುತ್ತಿದ್ದು ಹಟ್ಟಿಯಲ್ಲಿನ ಎಲ್ಲ ಯುವಕರನ್ನು ಈ ಹಾಡು ಹೇಳಿದೂರ್ನಾ ಭೇಟಿ ಮಾಡುಸ್ರಪ್ಪ ಅಂದಾಗ ಯಾರು ತಲೆಕೆಡಿಸಿಕೊಳ್ಳದಿದ್ದಾಗ. ಇಳಿ ವಯಸ್ಸಿನ ವೃದ್ಧ ತಾನೇ ಖುದ್ದಾಗಿ ಹೋಗಿ ಭೇಟಿ ಮಾಡಲೇಬೇಕೆಂದೂ..! ಕಾಕತಾಳಿಯವೆಂಬಂತೆ ಹಟ್ಟಿಗೆ ಬೇಟಿಕೊಟ್ಟಾಗ ಮೋಹನ್ ಕುಮಾರ್ ನೋಡಿ ಆ ಹಿರಿ ಜೀವಕ್ಕೇ ಸಂತೋಷಕ್ಕೇ ಪಾರವೇ ಇಲ್ಲದಂತೆ ಸಂಭ್ರಮಿಸಿದ್ದು ಮೋಹನ್ ಅವರು ದಾರಿಯುದ್ದಕ್ಕೂ ಸ್ಮರಿಸುತ್ತಿದ್ದರು.
ಸಮುದಾಯದ ಇತಿಹಾಸ ಪುರುಷರ ಬಗ್ಗೆ ಇಂಚಿಂಚು ಮಾಹಿತಿ
ಸಾಮಾನ್ಯವಾಗಿ ಒಂದು ಸಮುದಾಯಕ್ಕೆ ಇತಿಹಾಸ ಪುರುಷರು ಒಬ್ಬರೋ ಇಬ್ಬರೋ ಮೂಲಪುರುಷರು ಇರಬಹುದು ಆದರೆ ಶ್ರೀಮಂತ ಸಂಸ್ಕೃತಿಯ ಸಮಾಜ ವಾಗಿರುವ ಕಾಡುಗೊಲ್ಲ ಸಮುದಾಯಕ್ಕೆ ಹಲವಾರು ಜನರು ಇತಿಹಾಸ ಪುರುಷರು.
ಅವರೆಲ್ಲರ ಕುಲ ಮೂಲಗಳ ಬಗ್ಗೆ ಮೋಹನ್ ಕುಮಾರ್ ವಿಶೇಷವಾಗಿ ಗಮನಿಸುತ್ತಿದ್ದು ಜುಂಜಪ್ಪ, ಎತ್ತಪ್ಪ, ರಂಗಪ್ಪ, ಚಿತ್ತಪ್ಪ, ವಿರಕರಿಯಯಣ್ಣ, ವೀರ ಮಿಂಚಣ್ಣ, ಈರುತಮ್ಮಣ್ಣ ಇನ್ನೂ ಮುಂತಾದವರ ಮೇಲೆ ಇವರು ಹಾಡಿರುವ ಹಾಡುಗಳೇ ಸಾಕ್ಷಿ.
ಅತ್ಯಂತ ಸೋಜಿಗವೆನಿಸುವ ವಿಷಯವೆಂದರೆ 130 ಹಟ್ಟಿಗಳ ಪೈಕಿ ದೇವಸ್ಥಾನಗಳಿರುವ ಪ್ರತಿಯೊಂದು ದೇವಸ್ಥಾನಗಳಲ್ಲಿ ಮೋಹನ್ ಕುಮಾರ್ ಅವರು ಹಾಡಿರುವ ಹಾಡುಗಳು ಊರಿನ ಗ್ರಾಮಸ್ಥರ ಮೊದಲ ಹಾಗೂ ಕೊನೆಯ ಆಯ್ಕೆ. ಇದನ್ನ ಊರಿನ ಗ್ರಾಮಸ್ಥರು ಅಲ್ಲಿನ ಪೂಜಾರಿ ವೃಂದದವರು ಹೇಳಿದಾಗ ಮೋಹನ್ ಕುಮಾರ್ ಅವರು ಅಷ್ಟೇ ವಿನಮ್ರವಾಗಿ ಕೈ ಮುಗಿಯುತ್ತಾರೆ.
ನಮ್ ಕಾಡುಗೊಲ್ಲರ ಜಾತಿಗೆ ನಿನೊಬ್ನೆ ಹೆಸ್ರು ಉಳಿಸೋನು
ಅದೆಲ್ ಕಲ್ತಿದಪ್ಪ ನೀನು ಇಸೊಂದು ಪದನಾ !
ಪ್ರತಿ ಹಟ್ಟಿಲಿ ಕೂಡ ಇದು ಸಾಮಾನ್ಯವಾದ ಜನಪದರ ಸಂಭಾಷಣೆ ಮೋಹನ್ಕುಮಾರ್ ಅವರನ್ನು ನೋಡಿದ ತಕ್ಷಣ ಹಿರಿಯರು ಊರಿನ ಗ್ರಾಮಸ್ಥರು ಯುವಕರು ಸೆಲ್ಫಿಗೆ ಮುಗಿಬೀಳುತ್ತಾರೆ.
“ಅಂದ್ರೆ ಯಾರೂ ಇರಲಿಲ್ಲ ಬಿಡಪ್ಪ ನಮ್ಮ ಗೊಲ್ರಗೆ ನೀನೊಬ್ಬ ಹುಟ್ಟುಕೊಂಡಿದ್ಯ ನೀನೇ ನಮ್ ಕಲೆ ನಮ್ ಜಾತಿ ಉಳಿಸೋನು.
“ಆದೆಲ್ ಕಲ್ತಿದ್ದಪ್ಪ ಇಷ್ಟೊಂದು ದೇವರಮೆಗಳ ಪದ ಬೇಜರೆಆಗಲ್ಲ ನೋಡು ನನ್ ಮೊಬೈಲಗೆ ನಿನ್ನ ಪದ ಬಿಟ್ರೆ ಬೇರೆ ಯಾವ್ದು ಇಲ್ಲ”. ದೇವ್ರು
ನಿನ್ನ ಚೆನ್ನಾಗಿಟ್ಟಿರಲಿ, ಎಲ್ಲಿ ಒಂದು ಸೊಲ್ಲ ಅಂಗ ಅನ್ನು ಮತ್ತೆ ಎಂಬ ನಿಷ್ಕಲ್ಮಶ ಆಶೀರ್ವಾದ ಗಳ ಸುರಿಮಳೆ ಬಹುತೇಕ ಹಟ್ಟಿಗಳಲ್ಲಿ. ಇದನ್ನು ಕಂಡು ಅತಿ ವಿನಯದಿಂದಲೇ ಮೋಹನ್ಕುಮಾರ್ ಸಮಚಿತ್ತದಿಂದ ಸ್ವೀಕರಿಸಿ ಸೊಲ್ಲುಗಳ ಹಾಡುವ ಮುಖಾಂತರ ಅವರನ್ನು ತಣಿಸುತ್ತಾರೆ.
ಅತ್ಯಂತ ಶ್ರೀಮಂತ ಸಂಸ್ಕೃತಿ, ಕಲೆ, ಪರಂಪರೆ ಇರುವ ಕಾಡುಗೊಲ್ಲ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಈ ಜನಾಂಗವನ್ನು ಪ್ರತಿನಿಧಿಸುವ ಯಾರು ಕೂಡ ರಚನಾತ್ಮಕ ಕೆಲಸ ಮಾಡದಿರುವುದು ದುರ್ದೈವ. ಇಂತಹ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೇವಲ ಜನಾಂಗದ ಸರ್ವತೋಮುಖ ಅಭಿವೃದ್ಧಿಯ ಒಂದೇ ಉದ್ದೇಶದಿಂದ ಕಲೆ, ಸಂಸ್ಕೃತಿ ,ಶಿಕ್ಷಣ ಉಳಿಸುವ , ಸಾಮಾಜಿಕವಾಗಿ ಶಕ್ತಿ ತುಂಬುವ ಕಾಯಕಲ್ಪಕ್ಕೆ ಹಗಲಿರುಳು ಶ್ರಮಿಸುತ್ತಿರುವ ಮೋಹನ್ ಕುಮಾರ್ ಅವರಿಗೆ, ಹಾಗೂ ಸಮಾಜದ ಏಳಿಗೆಯೇ ಪರಮ ಧ್ಯೇಯೋದ್ದೇಶ ಎಂದು ತಿಳಿದಿರುವ “ರಾಜಣ್ಣ” ಅವರಿಗೆ ಅಖಂಡ ಕಾಡುಗೊಲ್ಲ ಸಮುದಾಯದ ಬೆಂಬಲ ಸಿಕ್ಕರೆ ಕಾಡುಗೊಲ್ಲರನ್ನ ಮುಖ್ಯವಾಹಿನಿಗೆ ತರುವುದರ ಜೊತೆಗೆ ಸಾಂಸ್ಕೃತಿಕ , ಸಾಮಾಜಿಕ , ರಾಜಕೀಯ,ಆರ್ಥಿಕ ಶೈಕ್ಷಣಿಕ, ಭದ್ರತೆ ಒದಗಿಸುವುದರಲ್ಲಿ ಇವರು ಯಶಸ್ಸು ಸಾಧಿಸುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ.
ಕಾಡುಗೊಲ್ಲರಲ್ಲಿ ಬಹುತೇಕರು ಪ್ರಜ್ಞಾವಂತ ರಾಗಿದ್ದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆಶಾಭಾವನೆ ಇದೆ.