–ಪಾಲಾರ್ ಪತ್ರಿಕೆ –
ಮಂಡ್ಯ: ಚಲನಚಿತ್ರ ನಿರ್ಮಾಣ, ನಿರ್ದೇಶನ ಹಾಗೂ ತಾಂತ್ರಿಕತೆ ಬಗ್ಗೆ ಸಂಪೂರ್ಣ ತಿಳುವಳಿಕೆ ನೀಡಲಿದ್ದು, ನಿಮ್ಮ ಭವಿಷ್ಯದ ದಾರಿ ಆಯ್ಕೆಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಅಂತರಾಷ್ಟ್ರೀಯ ಚಲನಚಿತ್ರ ವಿಮರ್ಶಕರಾದ ಹೆಚ್. ಎನ್ ನರಹರಿರಾವ್ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಭಾಗಿತ್ವದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರವನ್ನು ಉದ್ಘಾಟಸಿ ಅವರು ಮಾತನಾಡಿದರು.
ಇಂದು ಸಿನಿಮಾ ರಂಗದಲ್ಲಿ ನಂಬೋಕೆ ಸಾಧ್ಯವಾಗದಂತಹ ತಂತ್ರಜ್ಞಾನಗಳು ರೂಪುಗೊಂಡಿದ್ದು, ನಟರೇ ಇಲ್ಲದೇ ಸಿನಿಮಾ ನಿರ್ಮಿಸಬಹುದಾದಂತಹ ಹಾಗೂ ಮೊಬೈಲ್ನಲ್ಲಿಯೇ ಚಲನಚಿತ್ರ ನಿರ್ಮಾಣ ಮಾಡಬಹುದಾದಂತಹ ತಂತ್ರಜ್ಞಾನಗಳು ಇದೆ ಎಂದರು.
ಈ ತರಬೇತಿ ಕಾರ್ಯಾಗಾರದಲ್ಲಿ ಸಿನಿಮಾ ಬಗ್ಗೆ ತಿಳಿದುಕೊಳ್ಳುವಲ್ಲಿ ಬೆರಳು ತೋರಿಸುತ್ತದೆ, ನೀವು ಇದನ್ನೇ ನುಂಗಿಬಿಡಬೇಕು ಎಂದರು.
ನಿರ್ದೇಶನ, ನಿರ್ಮಾಣ, ತಾಂತ್ರಿಕತೆ ಯಾವುದಾರೊಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ, ಅದರಲ್ಲೂ ತಾಂತ್ರಿಕತೆಯಲ್ಲಿ ಉಜ್ವಲ ಭವಿಷ್ಯವಿದೆ ಎಂದರು.
ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ರಾಜ್ಯಸಭಾ ಟಿ.ವಿಯಲ್ಲಿ ಪ್ರಸಾರವಾಗುವ ಹತ್ತು ಎಪಿಸೋಡ್ಗಳ ಕಾರ್ಯಕ್ರಮವನ್ನು ವೀಕ್ಷಿಸಿ ಎಂದರು.
ಸಿನಿಮಾ ನಿರ್ಮಾಣ, ನಿರ್ದೇಶನ ಹಾಗೂ ತಾಂತ್ರಿಕತೆಗಿಂತ ಹೆಚ್ಚಿನದಾಗಿ ಸಿನಿಮಾದ ಹುಟ್ಟು ಬೆಳವಣಿಗೆ ಹಾಗೂ ಇತಿಹಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದ್ದು, ತರಬೇತಿಯಲ್ಲಿ ಈ ವಿಚಾರದ ಬಗ್ಗೆ ತಿಳಿಸಲಾಗುವುದು ಎಂದರು.
ಕಾರ್ಯಾಗಾರವು ನಿಮ್ಮನ್ನ ಪರಿಣಿತರನ್ನಾಗಿ ಮಾಡುವುದಿಲ್ಲ ಬದಲಾಗಿ ಡೈರೆಕ್ಷನ್ ಮಾಡುತ್ತದೆ, ಇದನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಬಹಳ ಶ್ರದ್ಧೆ ಹಾಗೂ ಆಸಕ್ತಿಯಿಂದ ನಿಮ್ಮ ಭವಿಷ್ಯದ ದಾರಿಯನ್ನು ಹುಡುಕಿಕೊಳ್ಳಿ ಎಂದರು.
ತರಬೇತಿ ಕಾರ್ಯಾಗಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದ ಮೊದಲಿಗೆ ಇತ್ತೀಚಿಗೆ ಅಗಲಿದ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿನಿಮಾಟೋಗ್ರಾಫರ್, ಮಂಜುನಾಥ್ ಆರ್. ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತರಾಜು, ವಾರ್ತಾಧಿಕಾರಿ ಟಿ.ಕೆ ಹರೀಶ್, ಉಮೇಶ್ ನಾಯಕ್,ಯೋಗಾ ಶಿಕ್ಷಕ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.