Saturday, May 4, 2024
spot_img
HomeChikballapurಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ: ಸಚಿವ ಸುಧಾಕರ್

ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ : ಸಚಿವರ ಜನತಾ ದರ್ಶನಕ್ಕೆ ಹರಿದು ಬಂದ ಜನಸಾಗರ,
ಸರ್ಕಾರದ ಎಲ್ಲ ಸೇವೆಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಜನತಾದರ್ಶನ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ತಾವು ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಜನತಾದರ್ಶನ ಕಾರ್ಯಕ್ರಮ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ತಡೆ ಹಿಡಿಯಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಜನತಾದರ್ಶನದಲ್ಲಿ ಜಿಲ್ಲಾಕಾರಿಗಳು, ತಹಸೀಲ್ದಾರ್, ಜಿಪಂ ಸಿಇಒ ಸೇರಿದಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಯ ಹಿರಿಯ ಅಕಾರಿಗಳಿಗೆ ರವಾನಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸ್ಥಳದಲ್ಲಿಯೇ ಪರಿಹಾರ

ಸಾರ್ವಜನಿಕರಿಂದ ಬರುವ ಸಮಸ್ಯೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುತ್ತದೆ. ಉಳಿದವುಗಳನ್ನು ಸಕಾಲ ಯೋಜನೆ ಮಾದರಿಯಲ್ಲಿ ಕೇವಲ ಒಂದು ತಿಂಗಳಲ್ಲಿ ಪರಿಹರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಕಾನೂನು ತೊಡುಕು ಇರುವ ಸಮಸ್ಯೆಗಳ ಕುರಿತು ಅರ್ಜಿದಾರರಿಗೆ ಸಕಾರಣವನ್ನು ಒಂದು ತಿಂಗಳಿನಲ್ಲಿ ನೀಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜನಸ್ನೇಹಿ ಆಡಳಿತ ನೀಡುವ ಉದ್ಧೇಶದಿಂದ ಜನತಾದರ್ಶನ ನಡೆಸುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕಂದಾಯ ಇಲಾಖೆಯಲ್ಲೇ ಹೆಚ್ಚು ದೂರು

ಜನತಾದರ್ಶದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿ ಬಂದಿದಿದ್ದು ವಿಶೇಷವಾಗಿತ್ತು. ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಶೇ.80ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದೆ. ಉಳಿದ ಅರ್ಜಿಗಳು ಬೆಸ್ಕಾಂ, ಕೆಎಸ್ ಆರ್ ಟಿಸಿ, ಬೋರ್ ವೆಲ್ ಸೇರಿದಂತೆ ಇತರೆ ಅಹವಾಲುಗಳಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.

ಎಲ್ಲ ಅರ್ಜಿಗಳ ವಿಲೇವಾರಿ ತರ್ಕಬದ್ಧವಾಗಿ ಮಾಡಲು ನಿರ್ದೇಶನ ನೀಡಲಾಗಿದ್ದು, ಜನರಿಗೆ ಸುಲಭ ಸೇವೆ ಸಿಗುವ ಜೊತೆಗೆ ಆಡಳಿತ ಪಾರದರ್ಶಕವಾಗಿರಬೇಕು, ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು ಎಂಬ ಉದ್ಧೇಶದಿಂದ ಜನತಾದರ್ಶನ ಆಯೋಜಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಭ್ರಷ್ಟಾಚಾರ ರಹಿತವಾಗಿ ಸೇವೆಗಳನ್ನು ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳಿಗೆ ಸಮಯ ನಿಗದಿ

ಕಂದಾಯ ಇಲಾಖೆಯಲ್ಲಿ ತಾಂತ್ರಿಕ ತೊಡುಕಿನ ಜೊತೆಗೆ ಕಾನೂನಿನ ತೊಡುಗಳಿರುವುದರಿಂದ ಕೆಲಸಗಳು ತಡವಾಗುತ್ತಿದ್ದು, ಇದರಿಂದಾಗಿಯೇ ಈ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿ ಬಂದಿವೆ. ಇಲಾಖೆಯಲ್ಲಿ ಮೇಲಾಧಿಕಾರಿಗಳು ಒಳ್ಳೆಯವರಿದ್ದರೂ, ಕೆಳಹಂತದ ಅಧಿಕಾರಿಗಳು ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದು ಜಿಡ್ಡು ಹಿಡಿದಂತಾಗಿ ಜನರನ್ನು ಸತಾಯಿಸುತ್ತಿರುವುದು ಸಾಮಾನ್ಯವಾಗಿದೆ. ಈ ಕಾರಣಗಳಿಂದಲೇ ಕಂದಾಯ ಇಲಾಖೆಗೆ ಅಳೆದು ಚಪ್ಪಲಿ ಸವೆಯುತ್ತದೆ ಎಂಬ ಮಾತು ಚಾಲ್ತಿಗೆ ಬಂದಿದೆ. ಜನರ ಸಮಸ್ಯೆ ಬಗೆಹರಿಸಲು ಜನತಾದರ್ಶನ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

ಆರ್. ಅಶೋಕ್ ಅವರು ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಗ್ರಾಮ ವಾಸ್ತವ್ಯ ಮಾಡುವುದು ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಇಲಾಖೆಗೆ ಹೊಸ ಕಾಯಕಲ್ಪ ಮಾಡುತ್ತಿರುವ ಅವರು, ರೈತ ಸ್ನೇಹಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲ ಕಾರ್ಯಕ್ರಮವಾದ ಕಾರಣ ಹೆಚ್ಚು ಅರ್ಜಿ

ಕೋವಿಡ್ ಕಾರಣದಿಂದಾಗಿ ಸತತ ಎರಡು ವರ್ಷಗಳ ನಂತರ ಆಯೋಜಿಸುತ್ತಿರುವ ಮೊದಲ ಜನತಾದರ್ಶನ ಆದ ಕಾರಣ ಇಂದು ಹೆಚ್ಚು ಅರ್ಜಿಗಳು ಬಂದಿವೆ. ಮುಂದಿನ ಕಾರ್ಯಕ್ರಮಗಳಲ್ಲಿಯೂ ಇದೇ ರೀತಿಯಲ್ಲಿ ಅರ್ಜಿಗಳು ಬಂದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಅರ್ಥ, ಕಡಿಮೆಯಾದರೆ ಆಡಳಿತ ವೇಗ ಪಡೆದಿದೆ ಎಂದು ಅರ್ಥ ಎಂದು ಅಧಿಕಾರಿಗಳಿಗೆ ಸಚಿವರು ಪರೋಕ್ಷ ಎಚ್ಚರಿಕೆ ನೀಡಿದರು.

ಶೀಘ್ರವೇ ಖಾತೆ ಅದಾಲತ್

ನಗರ ವ್ಯಾಪ್ತಿಯಲ್ಲಿ ಹಳೆಯ ಪ್ರದೇಶಗಳಿಗೆ ಖಾತೆ ಸಮಸ್ಯೆ ಇಲ್ಲ, ಆದರೆ ಕೆಲವರು ಹೊಸ ಬಡಾವಣೆಗಳ ನಿವೇಶನಗಳನ್ನು ಅನಧಿಕೃತವಾಗಿ ಮಾರಾಟ ಮಾಡಿರುವ ಕಾರಣ ಖಾತೆ ಸಮಸ್ಯೆ ಎದುರಾಗಿದೆ. ಹಾಗಾಗಿ ಅಕ್ರಮ ಸಕ್ರಮ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಶೀಘ್ರವೇ ತೀರ್ಪು ಬರುವ ನಿರೀಕ್ಷೆ ಇದೆ. ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಖಾತೆ ಮಾಡಲು ಅವಕಾಶ ಇದ್ದರೂ ಮಾಡದಿದ್ದರೆ ಅಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಅಲ್ಲದೆ, ಶೀಘ್ರದಲ್ಲಿಯೇ ಖಾತೆ ಅದಾಲತ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಒಟ್ಟು 342 ಅರ್ಜಿ ಸಲ್ಲಿಕೆ

ಶನಿವಾರ ನಗರದಲ್ಲಿ ನಡೆದ ಸಚಿವರ ಜನತಾ ದರ್ಶನದಲ್ಲಿ ಒಟ್ಟು 342 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 150 ಅರ್ಜಿಗಳು ಸಲ್ಲಿಕೆಯಾಗಿವೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಕುರಿತು ಶಾಸಕರ ಕಚೇರಿಯಿಂದಲೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರತಿ ತಿಂಗಳು ಚಿಕ್ಕಬಳ್ಳಾಪುರ ನಗರದಲ್ಲಿ ಎರಡು ಮತ್ತು ಮಂಚೇನಹಳ್ಳಿ ತಾಲೂಕಿನಲ್ಲಿ ಒಂದು ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಜನತಾದರ್ಶನದ ಮೂಲಕ ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವುದು ಉದ್ಧೇಶವಾಗಿದೆ ಎಂದರು.

ಎರಡು ತಿಂಗಳಲ್ಲಿ 15 ಸಾವಿರ ಉಚಿತ ನಿವೇಶನ

ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದಾಗಿ ಕ್ಷೇತ್ರದ ವಸತಿಹೀನರಿಗೆ ನಿವೇಶನ ಕಲ್ಪಿಸುವ ಕಾಲ ಕೂಡಿಬಂದಿದೆ. ಈಗಾಗಲೇ ಕ್ಷೇತ್ರದಾದ್ಯಂತ ವಸತಿಹೀನರ ಪಟ್ಟಿ ಸಿದ್ಧ ಮಾಡಲಾಗಿದೆ. ಅಲ್ಲದೆ ಅದಕ್ಕೆ ಅಗತ್ಯ ಭೂಮಿ ಗುರ್ತಿಸಲಾಗಿದೆ, ನಗರ ವ್ಯಾಪ್ತಿಯ 10 ಸಾವಿರ ಫಲಾನುಭವಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ 5 ಸಾವಿರ ಮಂದಿಗೆ ಸೇರಿ ಒಟ್ಟು 15 ಸಾವಿರ ನಿವೇಶನಗಳನ್ನು ಮುಂದಿನ ಎರಡು ತಿಂಗಳಲ್ಲಿ ಹಂಚಲಾಗುವುದು ಎಂದು ಘೋಷಣೆ ಮಾಡಿದರು.

ಒಂದು ತಿಂಗಳಲ್ಲಿ 3 ಸಾವಿರ ಮನೆ ಹಂಚಿಕೆ

ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿ, ಹೆಚ್ಚುವರಿಯಾಗಿ 3 ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಈ ಮನೆಗಳನ್ನು ವಸತಿ ರಹಿತರಿಗೆ ಹಂಚಲಾಗುವುದು. ನಿವೇಶನ, ಮನೆ, ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಚಿಕ್ಕಬಳ್ಳಾಪುರವನ್ನು ಮಾದರಿಯಾಗಿ ಮಾಡಲು ಪಣ ತೊಟ್ಟಿದ್ದು, ಈಗಾಗಲೇ ಇದನ್ನು ಹಂತಹಂತವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಜನರಿಗೆ ಸ್ವಾವಲಂಬನೆಯ ಬದುಕು ಕಲ್ಪಿಸಲು ಕ್ರಮ

ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಈಗಾಗಲೇ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ, ಇದಕ್ಕೆ ವರುಣನ ಕೃಪೆಯೂ ಸಿಕ್ಕಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಇದರಿಂದ ರೈತರು ಸಂತೋಷವಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಗತಿಪರರಾಗಿರುವ ರೈತರಿದ್ದಾರೆ ಇವರಿಗೆ ಅಗತ್ಯವಿರುವ ಅನುಕೂಲಗಳನ್ನು ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ

ಜಿಲ್ಲೆ ಹೈನುಗಾರಿಕೆ, ದ್ರಾಕ್ಷಿ ಬೆಳೆಗಳ ಜೊತೆಗೆ ಹೂವಿನ ಬೆಳೆಗೂ ರಾಜ್ಯದಲ್ಲಿ ಖ್ಯಾತಿ ಪಡೆದಿದೆ. ಹಾಗಾಗಿ ಹೂವಿನ ರೈತರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವರು ಘೋಷಿಸಿದರು. ಹೈಟೆಕ್  ಹೂವಿನ ಮಾರುಕಟ್ಟೆಗಾಗಿ ಈಗಾಗಲೇ 10 ಎಕರೆ ಭೂಮಿ ಮೀಸಲಿರಿಸಲಾಗಿದೆ. ಶೀಘ್ರದಲ್ಲಿಯೇ ಮಾರುಕಟ್ಟೆ ನಿರ್ಮಾಣ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ತಹಸೀಲ್ದಾರ್ ಗಣಪತಿಶಾಸ್ತ್ರಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments