ಪಾಲಾರ್ ಪತ್ರಿಕೆ | Palar Patrike
ಗುಡಿಬಂಡೆ: ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅವಿರಥವಾಗಿ ಶ್ರಮಿಸಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್. ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕೆಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ತಿಳಿಸಿದರು.
ಮಂಗಳವಾರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ೬೬ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳು ದೊರೆತಿದೆ ಎಂದರೇ ಅದು ಮಹಾನ್ಪುರುಷ ಅಂಬೇಡ್ಕರ್ರವರಿಂದ ಎಂಬುದನ್ನು ಮರೆಯಬಾರದು. ಅಂಬೇಡ್ಕರ್ರವರು ರಚಿಸಿಕೊಟ್ಟ ಸಂವಿಧಾನದಿಂದ ಸಮಾಜದಲ್ಲಿನ ಅನೇಕ ಅನಿಷ್ಟ ಪದ್ದತಿಗಳು ನಶಿಸಿವೆ. ಅವರ ಆದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ. ಸ್ವತಃ ತಾವು ಅನುಭವಿಸಿದಂತ ನೋವನ್ನು ತನ್ನ ಮುಂದಿನ ಪೀಳಿಗೆ ಅನುಭವಿಸಬಾರದೆಂದು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಂತಹ ವ್ಯಕ್ತಿ ಡಾ. ಬಿ.ಆರ್.ಅಂಬೇಡ್ಕರ್ ಎಂದರು.
ನಂತರ ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಮಹಾನ್ ಮಾನವತಾವಾದಿ, ಅವರ ಜೀವನದುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಅವರು ಅನುಭವಿಸಿದ ನೋವನ್ನು ಬೇರೆ ಯಾವುದೇ ದಲಿತರಿಗೂ, ಕೆಳವರ್ಗದವರಿಗೂ ಬರಬಾರದೆಂದು ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟರು. ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜೀವನದ ಉದ್ದಕ್ಕೂ ಶೋಷಣೆಗೆ ಒಳಗಾಗಿದ್ದ ಅಂಬೇಡ್ಕರ್ ರವರು ದಿನಕ್ಕೆ ೨೦ ಗಂಟೆಗಳ ಕಾಲ ಓದುತ್ತಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ವೇತನ ಪಡೆದವರು ಡಾ.ಅಂಬೇಡ್ಕರ್ ರವರು ಎಂದರೇ ತಪ್ಪಾಗಲಾರದು. ಅವರ ಶ್ರಮದಿಂದಲೇ ಇಂದು ಅನೇಕರು ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಅವರನ್ನು ಈ ಭೂಮಿಯಿರುವವರೆಗೂ ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರೇಸ್ ಸುಬ್ಬರಾಯಪ್ಪ, ನೌಕರ ಸಂಘದ ಗೌರವಾಧ್ಯಕ್ಷ ಸಾ.ನ.ನಾಗೇಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಬಿ.ಸಿ.ಎಂ.ಇಲಾಖೆಯ ರಾಮಯ್ಯ, ಶಿಕ್ಷ ಇಲಾಖೆಯ ಶಿಕ್ಷ ಸಂಯೋಜಕ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಮೇಲ್ಚೀಚಾರಕ ದಾಸಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಭಾಗವಹಸಿದ್ದರು.