Friday, May 3, 2024
spot_img
HomeChikballapur ಜ.7ರಿಂದ ಒಂದು ವಾರ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ

 ಜ.7ರಿಂದ ಒಂದು ವಾರ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ


ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ:  ಜ.7ರಿಂದ ಆರಂಭವಾಗಲಿರುವ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕ್ರೀಡೆ, ಯುವಕರು, ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ.  ಪೂರ್ವಭಾವಿ ಸಭೆಯಲ್ಲಿ ಸಚಿವ ಸುಧಾಕರ್ ಘೋಷಣೆ

ಮೈಸೂರು ದಸರಾ, ಹಂಪಿ ಹಾಗೂ ಕಾರ್ಕಳದ ಉತ್ಸವಕ್ಕೆ ಸಮಾನವಾಗಿ ಚಿಕ್ಕಬಳ್ಳಾಪುರ ಉತ್ಸವ ಸರ್ಕಾರದಿಂದಲೇ ಆಚರಿಸಲು ತೀರ್ಮಾನಿಸಲಾಗಿದ್ದು, ನೂತನ ವರ್ಷದ ಆರಂಭದಲ್ಲಿಯೇ ಚಿಕ್ಕಬಳ್ಳಾಪುರ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.
ನಗರದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಪೂರೈಸುತ್ತಿದೆ. ಅಲ್ಲದೆ 20 ವರ್ಷಗಳ ನಂತರ ಜಿಲ್ಲೆಯ ಎಲ್ಲ ಕೆರೆಗಳೂ ತುಂಬಿ ಕೋಡಿ ಹರಿದಿವೆ, ರೈತರು ಹರ್ಷಚಿತ್ತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿಯೂ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
 ಜನ ಸಾಮಾನ್ಯರ ಉತ್ಸವ 
ಜಿಲ್ಲೆಗೆ ಎಚ್ಎನ್ ವ್ಯಾಲಿ ಯೋಜನೆ ಅನುಷ್ಠಾನಗೊಂಡು ಕೆರೆಗಳು ತುಂಬಿದಾಗಲಿಂದ ಜಲಜಾತ್ರೆ ಮಾಡುವ ಬಗ್ಗೆ ನಾಯಕರು ಬೇಡಿಕೆ ಇಟ್ಟಿದ್ದು, ಈ ಕನಸು ಈಗ ನನಸಾಗುವ ಕಾಲ ಕೂಡಿಬಂದಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 400ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರತಿ ಹಳ್ಳಿಯಲ್ಲಿಯೂ ಪಕ್ಷಾತೀತ, ಜಾತ್ಯತೀತವಾಗಿ ಜನಸಾಮಾನ್ಯರ ಉತ್ಸವ ಆಚರಿಸಲಾಗುವುದು ಎಂದರು.
ಚಿಕ್ಕಬಳ್ಳಾಪುರ ಉತ್ಸವ ಮಾಡಲು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಿದ್ದು, ಕೂಡಲೇ ಒಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರ ಉತ್ಸವ ಅಧಿಕೃತ ಸರ್ಕಾರಿ ಕಾರ್ಯಕ್ರಮವಾಗಿದ್ದು, 7 ದಿನಗಳ ಕಾಲ ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
 ವಿಶೇಷ ಕಾರ್ಯಕ್ರಮಗಳು 
ಜಿಲ್ಲಾಕೇಂದ್ರದಲ್ಲಿ ಮೈಸೂರು ದಸರಾ ನೆನಪಿಸುವ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗುವುದು. ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು. ಮಕ್ಕಳಿಂದ ವೃದ್ಧರವರೆಗೂ ಎಲ್ಲ ವಯೋಮಾನದವರೂ ಉತ್ಸವದಲ್ಲಿ ಭಾಗವಹಿಸುವಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಹೊಸ ವರ್ಷದಲ್ಲಿ ಮೊದಲ ಹಬ್ಬ ಇದಾಗಿದೆ. ಜ.7 ರಂದು ಚಿಕ್ಕಬಳ್ಳಾಪುರ ಉತ್ಸವಕ್ಕೆ ಅಧಿಕೃತ ಉದ್ಘಾಟನೆ ನೆರವೇರಲಿದೆ. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಡಿ.19ರಂದು ಪೂರ್ಣ ಮಾಹಿತಿ ನೀಡಲಾಗುವುದು. ಅಲ್ಲದೆ ಅದೇ ದಿನ ಉತ್ಸವದ ಲೋಗೋ ಬಿಡುಗಡೆ ಮಾಡಲಾಗುವುದು. 7 ದಿನಗಳ ಕಾಲ ನಿರಂತರವಾಗಿ ನಡೆಯುವ ಚಟುವಟಿಕೆಗಳ ಬಗ್ಗೆ ಡಿ.19 ರಂದು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಜ.11ರಂದು ಊರ ಹಬ್ಬಗಳು 
ಚೊಚ್ಚಲ ಉತ್ಸವದ ಯಶಸ್ವಿ ಬಗ್ಗೆ ನಾಯಕರು, ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು, ಜ.7 ರಂದು ಶನಿವಾರ ಉತ್ಸವದ ಉದ್ಘಾಟನೆ ನಡೆಯಲಿದ್ದು, ಸಂತರು, ಖ್ಯಾತ ಕಲಾವಿದರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಹಳ್ಳಿಯ ಮುಖಂಡರು, ಗ್ರಾಮಸ್ಥರ ಜೊತೆ ಈ ಕುರಿತು ಚರ್ಚಿಸಿ ಜ.11ರಂದು ಆಯಾ ಗ್ರಾಮದ ಹಬ್ಬ ಆಚರಿಸಬೇಕು.ಜನರು ನಿರಂತರ ಬರದಿಂದ ಕಂಗೆಟ್ಟು ಕಳೆದ ಹಲವು ವರ್ಷಗಳಿಂದ ಊರಹಬ್ಬಗಳನ್ನು ಆಚರಿಸಿಲ್ಲ.  ಈಗ ಒಂದೇ ದಿನ ಕ್ಷೇತ್ರದ 400ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಊರಹಬ್ಬ ಮಾಡುವ ಮೂಲಕ ನಾವೆಲ್ಲ ಒಂದು ಎಂಬ ಸಂದೇಶ ರವಾನಿಸಬೇಕು. ಪ್ರತಿಹಳ್ಳಿಯಲ್ಲಿಯೂ ಊರಹಬ್ಬ ನಡೆಯಬೇಕು ಇದರಿಂದ ರೈತರು ಸಂತಸವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಂತಾಗಬೇಕು ಎಂದು ಸಚಿವರು ಹೇಳಿದರು.
ಕ್ರೀಡೋತ್ಸವಕ್ಕೆ ಚಾಲನೆ
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕ್ರೀಡೋತ್ಸವಕ್ಕೆ ಹೆಚ್ಚಿನ ಮುತುವರ್ಜಿ ತೋರಿಸಲಾಗಿದ್ದು, ಕ್ರೀಡೋತ್ಸವದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು, ಇದೇ ರೀತಿಯಲ್ಲಿ ಯುವೋತ್ಸವವನ್ನೂ ಆಯೋಜಿಸಲಾಗುವುದು. ಕ್ರೀಡೋತ್ಸವದಲ್ಲಿ ಪ್ರತಿ ಹಳ್ಳಿಯಿಂದ ಒಂದು ತಂಡ ಇರಬೇಕು,ಮಹಿಳೆಯರೂ ಸ್ಪರ್ಧೆಗಳಲ್ಲಿ ಭಾಗಹಿಸಬೇಕು, ಮಹಿಳೆಯರಿಗಾಗಿಯೇ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದರು.
ಜ.12 ರಂದು ಕ್ರೀಡೋತ್ಸವದ ಫೈನಲ್  ನಡೆಯಲಿದ್ದು, ಇದೇ ದಿನ ಸ್ವಾಮಿ ವಿವೇಕಾನಂದರ ಜಯಂತಿಯೂ ಇರುವುದರಿಂದ

ವಿಶ್ವ ಯುವ ದಿನಾಚರಣೆ

ಆಚರಿಸಲಾಗುತ್ತದೆ. ಹಾಗಾಗಿ ಅದೇ ದಿನ ಯುವೋತ್ಸವ ನಡೆಯಲಿದೆ. ಖ್ಯಾತ ಕಲಾವಿದರನ್ನು ಆಹ್ವಾನಿಸಲು ಉದ್ಧೇಶಿಸಲಾಗಿದೆ ಎಂದರು.
 ಮತ್ತೆ ರಂಗೋಲಿ ಸ್ಪರ್ಧೆ
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ರಂಗೋಲಿ ಸ್ಪರ್ಧೆಯನ್ನು ಮತ್ತೆ ಆರಂಭಿಸಲು ತೀರ್ಮಾನಿಸಲಾಗಿದ್ದು, ಜ.14ರಂದು *ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ* ಆಯೋಜಿಸಲಾಗುವುದು. ಅದೇ ದಿನ *ಗಾಳಿಪಟ ಹಾರಿಸುವ ಸ್ಪರ್ಧೆಯನ್ನೂ* ಆಯೋಜಿಸಲಾಗಿದೆ. ಅಲ್ಲದೆ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಒಂದು ವಾರ ಹಬ್ಬದ ವಾತಾವಣ ಚಿಕ್ಕಬಳ್ಳಾಪುರದಲ್ಲಿ ಇರುವಂತೆ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ಅಲ್ಲದೆ ಉತ್ಸವದಲ್ಲಿ ಫುಡ್ ಸ್ಟ್ರೀಟ್ ಮಾಡುತ್ತಿದ್ದು, ಇದರಲ್ಲಿ ದಿನದ 18 ಗಂಟೆಗಳ ಕಾಲ ಜಿಲ್ಲೆಯ ವಿಶೇಷವಾದ ತಿಂಡಿಗಳನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. *ಮಹಿಳೆಯರಿಗೆ ಅಡುಗೆ ಸ್ಪರ್ಧೆಯನ್ನೂ* ಆಯೋಜಿಸಲಾಗುವುದು ಎಂದು ಸಚಿವರು ವಿವರಿಸಿದರು.
ಊರ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಿ 
ಊರಹಬ್ಬಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖಂಡರಿಗೆ ಸಚಿವರು ಸೂಚನೆ ನೀಡಿದರು. ನಗರದಲ್ಲಿ ಪ್ರತಿ ವಾರ್ಡಿನಲ್ಲಿಯೂ ಊರಹಬ್ಬವಾಗಬೇಕು. ಕಳೆದ ಎರಡು ದಶಕಗಳಿಂದ ಕೆರೆಗಳಲ್ಲಿ ನೀರು ನೋಡುವ ಸ್ಥಿತಿ ಇರಲಿಲ್ಲ. ಈಗ ಕೆರೆಗಳು ತುಂಬಿರುವ ಕಾರಣ ಸಾಂಸ್ಕೃತಿಕ, ದೈವ ಪೂಜೆಗಳ ಮೂಲಕ ಕಾರ್ಯಕ್ರಮ ಮಾಡೋಣ ಎಂದು ಸಚಿವರು ಕರೆ ನೀಡಿದರು.
ಯುವಕರಿಗೆ, ಮಹಿಳೆಯರಿಗೆ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿಯೇ ವಿಶೇಷತೆಯಿಂದ ಕೂಡಿದ ಉತ್ಸವ ಇದಾಗಬೇಕು. ಉತ್ಸವ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ, ಉತ್ಸವಕ್ಕಾಗಿ ಸಮಿತಿಗಳ ರಚನೆ ಮಾಡಿ ಜವಾಬ್ದಾರಿಗಳನ್ನು ನೀಡಲಾಗುವುದು. ಅಲ್ಲದೆ ಮುಂದಿನ ವರ್ಷದ ಆರಂಭದಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಸಿದ್ಧವಾಗುತ್ತಿದೆ, ಫೆಬ್ರರಿಯಲ್ಲಿ ಶಿವೋತ್ಸವ ಆಗಲಿದೆ ಎಂದು ಹೇಳಿದರು.
ಜ.17 ರಂದು ಈಶಾ ಫೌಂಡೇಷನ್ ನ ಸದ್ಗುರುಗಳು

108 ಅಡಿಗಳ  ಆದಿಯೋಗಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಫೆ.15 ರಂದು ಉಪರಾಷ್ಟ್ರಪತಿಗಳು ಆಗಮಿಸಲಿದ್ದಾರೆ. ಚಿಕ್ಕಬಳ್ಳಾಪುರದ ನಾಲ್ಕೂ ದಿಕ್ಕುಗಳಲ್ಲಿ ಅಭಿವೃದ್ಧಿಯ ಶಖೆ ಆರಂಭವಾಗುತ್ತಿದೆ. ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಚಿಕ್ಕಬಳ್ಳಾಪುರ ಖ್ಯಾತಿ ಪಡೆಯುವ ಕಾಲ ಸಮೀಪಿಸಿದೆ ಎಂದು ಸಚಿವರು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments