ಗುಡಿಬಂಡೆ: “ಕೂರ್ಮಗಿರಿ” ಎಂದು ಪ್ರಸಿದ್ದಿ ಹೊಂದಿದ ತಾಲೂಕಿನ ಎಲ್ಲೋಡು ಶ್ರೀಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮರಥೊತ್ಸವ ಸಾವಿರಾರು ಭಕ್ತರ ಸಮೂಹದೊಂದಿಗೆ ಸಡಗರ ಸಂಭ್ರಮದೊಂದಿಗೆ ಪೋಲಿಸ್ ಬಂದೋಬಸ್ತ್ ನಡುವೆಯೇ ಸಾಂಪ್ರದಾಯಿಕವಾಗಿ ಭಾನುವಾರ ನಡೆಯಿತು.
ಮಾಘಮಾಸದ ಅಂಗವಾಗಿ ನಡೆಯುವ ಈ ರಥೋತ್ಸವಕ್ಕೆ ತಹಸೀಲ್ದಾರ್ ಸಿಬ್ಗತ್ ವುಲ್ಲ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ನಡೆಯುವ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥೋತ್ಸದ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ನಡೆಯಿತು.
ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಪಲ್ಲಕ್ಕಿಯಲ್ಲಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಉತ್ಸವಮೂರ್ತಿಯನ್ನು ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಗಳ ಮೂಲಕ ವಿವಿಧ ಹೂವುಗಳಿಂದ ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ರಾಜ್ಯ ಮತ್ತು ನೆರೆಯ ಆಂದ್ರಪ್ರದೇಶ ಹಿಂದೂಪುರ, ಲೇಪಾಕ್ಷಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರ ಸಮೂಹ ಗೋವಿಂದ ಗೋವಿಂದ ಜಯಘೋಷಗಳೊಡನೆ ರಥವನ್ನು ಎಳೆದು ಭಕ್ತಿಭಾವ ಮೆರೆದರು ಹಾಗೂ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡಿದ್ದರು. ಮಜ್ಜಿಗೆ ಪಾನಕ ಪ್ರಸಾದ ವಿತರಣೆ: ದೇವಾಲಯದ ಆವರಣದಲ್ಲಿ ಬಿಸಿಲಿನಲ್ಲಿ ದಣಿದು ಭಕ್ತಾಧಿಗಳಿಗೆ ಮಜ್ಜಿಗೆ ಪಾನಕ ವಿತರಿಸಿದರು. ದೇವರಲ್ಲಿ ಹರಕೆ ಹೊತ್ತ ಭಕ್ತರು ಸಹ ಮಜ್ಜಿಗೆ, ಪಾನಕ, ಹಾಗೂ ಪ್ರಸಾದವನ್ನು ಭಕ್ತಾದಿಗಳಿಗೆ ವಿನಿಯೋಗ ಮಾಡಿದರು.
ಇತರೆ ಸಂಘದವರು ಅನ್ನದಾಸೋಹವನ್ನು ಏರ್ಪಡಿಸಿದ್ದರು. ಈ ಜಾತ್ರೆಯಲ್ಲಿ ರಥೋತ್ಸವಕೆ ಹಣ್ಣು ದವನವನ್ನು ರಥಕ್ಕೆ ಎಸೆದು ಭಕ್ತಿ ಭಾವವನ್ನು ಪ್ರದರ್ಶಿಸಿದರು. ಜಾತ್ರೆ, ರಥೋತ್ಸವದ ಅಂಗವಾಗಿ ಈ ಬಾರಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಬ್ಗತ್ ವುಲ್ಲಾ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಸಿಪಿಐ ಲಿಂಗರಾಜು, ಪಿಸಿಐ ಪ್ರತಾಪ್, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪೊಲೀಸ್ ಇಲಾಖೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ರಾಜಕೀಯ ಗಣ್ಯರು ಭಾಗವಹಿಸಿದ್ದರು.