ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕು, ಸೋಮೇನಹಳ್ಳಿ ಹೋಬಳಿಯ ಚಿಕ್ಕನೆಂಚರ್ಲು ಗ್ರಾಮದ ಶ್ರೀ ಆಂಜನೆಯಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಪರಿಷತ್ತಿನ ಸಂಸ್ಥಾಪಕರಾದ ಹೆಚ್.ಎಲ್.ನಾಗೇಗೌಡರವರ ಹುಟ್ಟು ಹಬ್ಬ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಜಾಪ ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ರವರು ಮಾತನಾಡುತ್ತಾ, ಈಗ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಕಾರಣವಾಗಿ ನಮ್ಮ ಜೀವನದ ರೀತಿ ನೀತಿಯೇ ಬದಲಾಗಿದೆ. ಆದರೆ 3-4 ತಲೆಮಾರುಗಳ ಹಿಂದೆ ದೇಶೀಯ ಸೊಗಡೇ ನಮ್ಮಜೀವನದ ನಾಡಿಯಾಗಿದ್ದು, ಆ ಸಂದರ್ಭದಲ್ಲಿ ಬೆಳಗಿನ ಜಾವ ಹೆಣ್ಣು ಮಕ್ಕಳು ಎದ್ದುರಾಗಿ ಬೀಸುವಾಗ ಹಾಡುತ್ತಿದ್ದ ಬೀಸುವ ಪದ, ಗದ್ದೆಗಳಲ್ಲಿ ಪೈರು ನಾಟಿ ಮಾಡುವಾಗ, ಹೊಲ ಕೊಯ್ಯುವಾಗ ಶ್ರಮವನ್ನು ಮರೆಸಲೆಂದೇ ಅದಕ್ಕೆ ಸಂಬAಧಿಸಿದ ಗೀತೆಗಳ ಗಾಯನಗಳನ್ನು ಹಾಡುತ್ತಿದ್ದ ಸಂದರ್ಭ ಈಗ ಕಣ್ಮರೆಯಾಗಿ ಹೋಗಿದೆ. ಸುಗ್ಗಿ ಕಾಲದಲ್ಲಿ ಹಳ್ಳಿಗಳಲ್ಲಿ ಕಾಣಿಸುತ್ತಿದ್ದ ಕೇಳಿಕೆ, ಬಯಲಾಟ, ತೊಗಲುಬೊಂಬೆ ಆಟ, ಕರಡಿ ಮಜಲು, ಪಂಡರಿ ಭಜನೆ, ಕೋಲಾಟ ಮುಂತಾದದೇಶೀಯ ಸಾಂಸ್ಕೃತಿಕ ಸಿರಿ ಸಂಪೂರ್ಣವಾಗಿ ನಾಶವಾಗಿದೆ. ಅಂತೆಯೇ ಗ್ರಾಮೀಣ ಕ್ರೀಡೆಗಳು ಸಹಾ ಪ್ರೋತ್ಸಾಹವಿಲ್ಲದೇ ಕಣ್ಮರೆಯಾಗುತ್ತಿವೆ. ಈ ಎಲ್ಲಾ ದೇಶಿಯ ಸೊಗಡನ್ನು ನಾವು ಮತ್ತೆ ಪುನರುದ್ದರಿಸಬೇಕಾಗಿದ್ದು, ಈ ಕಜಾಪ ಪ್ರಾಮಾಣಿಕ ಪ್ರಯತ್ನ ಮಾಡುವುದು ಬಹಳವೇ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮನುಷ್ಯನ ಹುಟ್ಟಿನ ಜೊತೆಯಲ್ಲಿಯೆ ಜಾನಪದ ಕಲೆ ಹುಟ್ಟಿತ್ತು. ಆ ಜಾನಪದ ಕಲೆಯನ್ನು ಗ್ರಾಮೀಣ ಮಟ್ಟದಲ್ಲಿ ಗುರ್ತಿಸುವ ಒಂದು ಉದ್ದೇಶದಿಂದ ರಾಜ್ಯದಲ್ಲಿ ಒಂದು ಜಾನಪದ ಪರಿಷತ್ತನ್ನು ಹುಟ್ಟು ಹಾಕಿದ ಕೀರ್ತಿ ಹೆಚ್.ಎಲ್.ನಾಗೇಗೌಡ ಅವರಿಗೆ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಡಿ.ಜೆ.ನಾಗರಾಜರೆಡ್ಡಿ, ಕಜಾಪ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಪೆರೇಸಂದ್ರ ವೀರಭದ್ರಪ್ಪ, ಹರಿಕಥಾ ವಿದ್ವಾಂಸ ಶ್ರೀನಿವಾಸ್, ತಿರುಮಲಪ್ಪ, ಮಲ್ಲಪ್ಪ, ಸಂಪತ್, ಆದಿನಾರಾಯಣರೆಡ್ಡಿ 3 ಜಿಲ್ಲೆಗಳ ಸುಮಾರು 1500 ಜನಜಾನಪದ ವಿದ್ವಾಂಸರು ಭಾಗವಹಿಸಿದ್ದರು.