ಶಿಡ್ಲಘಟ್ಟ: ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿರುವ ಶ್ರೀ ಗಂಗಮ್ಮದೇವಿ ಮತ್ತು ಮುನೇಶ್ವರ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಗಂಗಮ್ಮ ತಾಯಿಯ ಭಕ್ತಾದಿಗಳು ಹಾಗೂ ಊರಿನ ಗ್ರಾಮಸ್ಥರಿಂದ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಗಂಗಮ್ಮದೇವಿಯು ಉದ್ಭವ ಮೂರ್ತಿಯಾಗಿದ್ದು , ದೇವಿಯು ಸಾವಿರಾರು ವರ್ಷಗಳಿಂದ ಮಳಮಾಚನಹಳ್ಳಿ ಗ್ರಾಮದ ತೋಟವೊಂದರಲ್ಲಿ ಗುಡಿ ಗೋಪುರವಿಲ್ಲದೆ ಬಿಸಿಲು ಮಳೆ ಗಾಳಿ ಚಳಿಯಲ್ಲೆಇದ್ದು, .ಸಕಲ ಭಕ್ತರ ಕಷ್ಟಕಾರ್ಪಣ್ಯಗಳನ್ನು ತೊಲಗಿಸಿ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಈ ಭಾಗದ ಜನರ ಆರಾಧ್ಯ ದೇವಿಯಾಗಿದ್ದಾಳೆ.
ಗ್ರಾಮದ ಕೆಲ ಮುಖಂಡರು ಜೊತೆಗೂಡಿ ಚಿಕ್ಕ ಗುಡಿಯೊಂದನ್ನು ಕಟ್ಟಲು ನಿರ್ಧರಿಸಿದ್ದು ಗ್ರಾಮಸ್ಥರ ಸಹಕಾರ ಹಾಗೂ ಭಕ್ತಾದಿಗಳ ಸಹಕಾರದಿಂದ ಇಂದು ಸುಂದರವಾದ ದೇವಾಲಯ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ಎರಡು ದಿನದಿಂದ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ಶ್ರೀ ಗಂಗಮ್ಮ ಹೋಮ, ಹಾಗೂ ಶ್ರೀ ದೇವಿಯವರ ನೂತನ ವಿಗ್ರಹ ಪ್ರತಿಷ್ಠಾಪನೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಮಳಮಾಚನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರು ಆಂಜಿನಪ್ಪ (ಪುಟ್ಟು),ಪಟೇಲ್ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾದ ಎನ್. ದೇವರಾಜ್ (HAL )ದಂಪತಿಗಳು , ಮತ್ತು ಮಾನವಹಕ್ಕುಗಳ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಭೈರೇಗೌಡ, ಶಿಡ್ಲಘಟ್ಟ ತಾಲೂಕು ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಎಂ ಕೆ ರಾಜಶೇಖರ್ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗಿಸಲಾಯಿತು.
ಕಾರ್ಯಕ್ರಮದಲ್ಲಿ ಗಂಗಮ್ಮ ದೇವಿ ಹಾಗೂ ಮುನೇಶ್ವರ ಸ್ವಾಮಿ ಕಮಿಟಿಯ ಎಲ್ಲಾ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.