ಶಿಡ್ಲಘಟ್ಟ: ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ರೈತ ಸಂಘದವರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತುಮ್ಮನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ರಸ್ತೆ ಹಾಗೂ ರಾಜಕಾಲುವೆ ಅಭಿವೃದ್ಧಿಗೆ ತಹಸೀಲ್ದಾರ್ ಹಾಗೂ ಸರ್ವೆ ಇಲಾಖೆಯಿಂದ ಸರ್ವೆ ಮಾಡಿಸಿ ಬೌಂಡರಿ ಗುರ್ತಿಸಿ ಕಲ್ಲುಗಳನ್ನು ಹಾಕಿಸಿ ಬ್ರೋಜಿಂಗ್ ಮಾಡಿಸಲಾಗಿದೆ. ಆದರೆ, ರೈತ ಸಂಘದ ವಿರುದ್ಧ ತುಮ್ಮನಹಳ್ಳಿ ರಾಮಾಂಜಿನಪ್ಪನ ಮಗ ಮಂಜುನಾಥ್ ಕಿರುಕುಳ ಆರೋಪ ಮಾಡಿರುವುದು ಸರಿಯಲ್ಲ ಎಂದರು.
ರಾಮಪ್ಪ, ಅನಿಲ್ ಕುಮಾರ್ ಎಂಬುವರು ತಮ್ಮ ಜಮೀನಿಗೆ ರಸ್ತೆ ವ್ಯವಸ್ಥೆ ಮಾಡಿಸಬೇಕೆಂದು 9 ತಿಂಗಳ ಹಿಂದೆ ಅರ್ಜಿ ನೀಡಿದ್ದರು. ಈ ಸಂಬಂಧ ತಹಸೀಲ್ದಾರ್ರಿಗೆ ಮನವಿ ಪತ್ರ ನೀಡಿದ್ದೆವು.
ತಹಸೀಲ್ದಾರ್ ಸರ್ವೆಯರ್ ಗಳು ಸ್ಥಳಕ್ಕೆ ಹೋಗಿ ರಾಜಕಾಲುವೆ ಒತ್ತುವರಿ ತೆರವು ಗೊಳಿಸಿದ್ದಾರೆ. ಇದರಿಂದ ತುಮ್ಮನಹಳ್ಳಿ ಹಾಗೂ ಸೊರಕಾಯಲಹಳ್ಳಿ ಜನತೆಗೆ ಸಂಚಾರಕ್ಕೆ ಅನುಕೂಲವಾಗಿದೆ. ಇದನ್ನು ಸಹಿಸದೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಲಕ್ಷಿದೇವಮ್ಮ, ಕೆಂಪಣ್ಣ, ಬೀರಪ್ಪ, ಮಂಜುನಾಥ್, ರಾಮಪ್ಪ, ಅನಿಲ್ ಕುಮಾರ್ ಇದ್ದರು.