ಚಿಕ್ಕಬಳ್ಳಾಪುರ: ಜಿಲ್ಲೆಯ ಜನತೆ ಹತ್ತಾರು ವರ್ಷಗಳಿಂದ ಕೋಚಿಮುಲ್ನಿಂದಾಗಿ ಹೈನುಗಾರಿಕೆಯಲ್ಲಿ ತೊಡಗಿ ಬದುಕು ಕಟ್ಟಿಕೊಂಡಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಾದ ಎಲ್ಲಾ ಇಲಾಖೆಗಳು ಜಿಲ್ಲೆಗೆ ಬಂದAತೆ ಇದೂ ಬರಬೇಕಿತ್ತು. ಆದಕ್ಕೂ ಮುನ್ನ ನಂದಿ ಕ್ರಾಸ್ನಲ್ಲಿರುವ ಮೆಗಾಡೈರಿಯನ್ನು ಅಭಿವೃದ್ದಿಗೊಳಿಸದೆ ತರಾತುರಿಯಲ್ಲಿ ವಿಭಜನೆ ಮಾಡಿದ್ದು ಸರಿಯಾದ ತೀರ್ಮಾನವಲ್ಲ. ಇದರಿಂದಾಗಿ ಎರಡೂ ಜಿಲ್ಲೆಯ ಹಾಲು ಉತ್ಪಾದಕರು ತೊಂದರೆಗೆ ಸಿಲುಕಲಿದ್ದಾರೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯ ನಂದಿ ಕ್ರಾಸ್ನಲ್ಲಿರುವ ಚಿಮುಲ್ ಆವರಣದಲ್ಲಿ ಬುಧವಾರ ಜಿಲ್ಲೆಯ ಸಹಕಾರಿ ಧುರೀಣ,ಕೋಚಿಮುಲ್ ಪ್ರಥಮ ಅಧ್ಯಕ್ಷ ಕೆ.ಬಿ.ಪಿಳ್ಳಪ್ಪ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ನಾನು ಶಾಸಕನಾಗಿದ್ದ ಅವಧಿಯಲ್ಲಿ ಮೆಗಾಡೈರಿಗೆ ಬೇಕಾದ 15 ಎಕರೆ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೂಲಕ ಮಂಜೂರು ಮಾಡಿಸಲು ಬಹಳಷ್ಟು ಪ್ರಯಾಸ ಪಟ್ಟಿದ್ದೇನೆ. ನನ್ನ ತಂದೆಯವರಾದ ಕೆ.ಬಿ.ಪಿಳ್ಳಪ್ಪ ಅವರು ಒಂದು ಷೆಡ್ನಲ್ಲಿ ಪ್ರಾರಂಭಿಸಿದ ಕೋಚಿಮುಲ್ ಇಂದು 1500 ಕೋಟಿ ಆಸ್ತಿಯನ್ನು ಹೊಂದಿರುವುದು ಸಂತೋಷದ ವಿಚಾರವಾಗಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕವಾಗಿ ಆಗಿರುವ ಚಿಮುಲ್ ಮೂಲ ಸೌಲಭ್ಯಗಳಿಲ್ಲದೆ ಆರಂಭದಲ್ಲಿಯೇ ಸೊರಗುವಂತಾಗಿದೆ. ಒಂದು ಕಾಲಕ್ಕೆ 12 ಲಕ್ಷ ಲೀಟರ್ ಪ್ರತಿದಿನ ಹಾಲು ಸರಬರಾಜು ಆಗುತ್ತಿತ್ತು. ವರ್ತಮಾನದಲ್ಲಿ 8 ಸಾವಿರ ಲೀಟರ್ಗೆ ಬಂದಿರುವುದು ದುರದೃಷ್ಟಕರ ಸಂಗತಿ.ಹಾಲು ಉತ್ಪಾದನೆ ಹೆಚ್ಚಿಸಿ, ಹಾಲಿನ ಬೆಲೆ ಏರಿಸಲು ಆಡಳಿತ ಮಂಡಳಿ ಮತ್ತು ಸರಕಾರ ಗಮನ ಹರಿಸುವುದು ಸೂಕ್ತ. ಇಲ್ಲದಿದ್ದರೆ ರೈತಾಪಿ ವರ್ಗ ಬಂಡೇಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಹಳ್ಳಿ ನಾಗರಾಜ್, ನಿರ್ದೇಶಕ ಭರಣಿವೆಂಕಟೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಪ್ರಧಾನ ವ್ಯವಸ್ಥಾಪಕಿ ಪ್ರಮೀಳ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.