ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ಮುಕ್ತ ಸರ್ಕಾರಗಳನ್ನು ನೀಡಿರುವುದು ಬಿಜೆಪಿ ಮಾತ್ರವಾಗಿದ್ದು, ಹಿಂದೆ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಸರ್ಕಾರಗಳು ಕೇಂದ್ರದಲ್ಲಿ ಮತ್ತು ಕಳೆದ ಮೂರೂವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮಾಡಿದ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಮಾಡುತ್ತಿರುವ ಎಲ್ಲ ಆರೋಪಗಳೂ ಕೇವಲ ಗಾಳಿಯಲ್ಲಿ ಗುಂಡು ಹಾರಿಸುವುದೇ ಆಗಿದ್ದು, ಈವರೆಗೆ ಒಂದೇ ಒಂದು ದಾಖಲೆ ನೀಡಿಲ್ಲ ಎಂದು ತಿರುಗೇಟು ನೀಡಿದರು.
ಈ ಬಗ್ಗೆ ವಿಧಾನಸಭೆಯಲ್ಲೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ, ನಾವು ಏನೇ ಮಾತನಾಡಿದರೂ ದಾಖಲೆಗಳನ್ನಿಟ್ಟಿಕೊಂಡು ಮಾತನಾಡುತ್ತೇವೆ, ಆದರೆ ಕಾಂಗ್ರೆಸ್ ನವರು ಕೇವಲ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಅಮಿತ್ ಶಾ ಅವರು ಹೇಳಿದಂತೆ ಪರಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ನೀಡುವುದಾಗಿ ಅವರು ಹೇಳಿದರು.
*ಆತ್ಮಾವಲೋಕನ ಮಾಡಿಕೊಳ್ಳಿ*
ಶೃಂಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಕುಮಾರಸ್ವಾಮಿಯವರುಯಾರ ಕಾಲದಲ್ಲಿ ಏನೇನು ಆಗಿದೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ. ಅಮಿತ್ ಶಾ ಅವರು ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ ನೂರಕ್ಕೆ ನೂರರಷ್ಟು ಪಾರದರ್ಶಕ, ಭ್ರಷ್ಟಾಚಾರ ರಹಿತ ಸರ್ಕಾರ ನೀಡುವುದಾಗಿ ಅದನ್ನು ಸಾಕಾರಗೊಳಿಸುವುದಾಗಿ ಅವರು ಹೇಳಿದರು.
ಈ ಹಿಂದೆ ಎರಡು ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಪಂಚರತ್ನಗಳನ್ನು ಅನುಷ್ಠಾನ ಮಾಡಲಿಲ್ಲ. ಅವರ ಆಶಯ ಅವರು ಹೇಳಲಿ, ನಮ್ಮ ಆಶಯ ನಾವು ಹೇಳುತ್ತೇವೆ. ಇವರು ಚುನಾವಣೆ ಪ್ರಾಮಾಣಿಕತೆಯಿಂದ ಮಾಡಿದ್ದಾರೆಯೇ, ಅವರು ಗೆದ್ದ ಸ್ಥಾನಗಳಲ್ಲಿ ಕೇವಲ ಕೈ ಮುಗಿದು ಮತ ಪಡೆದರಾ ಎಂದು ಕಿಡಿ ಕಾರಿದರು.ಪ್ರಸ್ತುತ ಕಾಲಘಟ್ಟದಲ್ಲಿ ಕೆಲ ವ್ಯವಸ್ಥೆಗಳು ಅವ್ಯವಸ್ಥೆಗಳಾಗಿವೆ. ಅದನ್ನು ಒಪ್ಪಲೇಬೇಕು. ಮೌಲ್ಯಗಳ ಬಗ್ಗೆ ಮಾತನಾಡುವುದಲ್ಲ, ವ್ಯವಸ್ಥೆ ಸರಿ ಮಾಡಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದರಿಂದ ರಾಜಕೀಯ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಹೋಗಲಿದೆ ಎಂದರು.
ಬಿಜೆಪಿ ಹಿಂದುತ್ವದ ಆಶಯವಿರುವ ಪಕ್ಷ . ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಮಠ ಮಾನ್ಯಳಿಗೆ ವಿಶೇಷ ಗೌರವವನ್ನು ಜನ ನೀಡಿದ್ದಾರೆ. ಅದೇ ರೀತಿಯಲ್ಲಿ ಸಾಮಾನ್ಯರಂತೆ ಅಮಿತ್ ಶಾ ಅವರೂ ಮಠಗಳಿಗೆ ಹೋಗುವುದು ಮತ್ತು ಅಲ್ಲಿನ ಗುರುಗಳಿಗೆ ಗೌರವ ಸಲ್ಲಿಸುವುದು ಸಾಮಾನ್ಯ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ ಎಂದು ಸಚಿವರು ಹೇಳಿದರು.