ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ : ಛತ್ರಪತಿ ಶಿವಾಜಿ ಮಹಾರಾಜರು ಭಾರತಮಾತೆಯ ವೀರಪುತ್ರರಲ್ಲಿ ಒಬ್ಬರಾಗಿದ್ದು ಶೌರ್ಯ, ಸಾಹಸ, ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಜನಾನುರಾಗಿ ಮಹಾರಾಜರಾಗಿದ್ದರು ಎಂದು ಉಪನ್ಯಾಸಕ ಬಿ.ವಿ. ಪ್ರಕಾಶ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಶಿವಾಜಿ ಮಹಾರಾಜರ ಹೆಸರು ಭಾರತೀಯ ಚರಿತ್ರೆಯಲ್ಲಿ ಅಜರಾಮರವಾಗಿದ್ದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಇವರ ಸಾಹಸಗಾಥೇ ಪ್ರೇರಣೆದಾಯಕವಾಗಿದೆ.ಕೋಟೆಕೊತ್ತಲಗಳನ್ನು ದಾಟಿ ಸಾಮಾಜ್ಯವನ್ನು ಕಟ್ಟಿದ ಇವರು ಭಾರತದ ಉದ್ದಗಲಕ್ಕೂ ತನ್ನ ಸಾಮ್ರಾಜ್ಯ ವಿಸ್ತರಿಸಿದ ವೀರ ಸಾಹಸದ ಜೊತೆಗೆ ದಕ್ಷ ಆಡಳಿತಕ್ಕೂ ಹೆಸರುವಾಸಿಯಾಗಿದ್ದರು ಎಂದರು.
ಶಿವಾಜಿಯ ತಾಯಿ ತನ್ನ ಮಗನಿಗೆ ಬಾಲ್ಯದಿಂದಲೇ ಸಾಹಸ, ಶೌರ್ಯದ ಕಥೆಗಳನ್ನು ಹೇಳಿ ಬೆಳೆಸಿದ ಕಾರಣ ಭವಿಷ್ಯದಲ್ಲಿ ಇದೇ ಮಾದರಿಯಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಯಿತು.ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಶಿವಾಜಿ ಮಹಾರಾಜರ ತಾಯಿ ಹೇಳುತ್ತಿದ್ದ ಪ್ರೇರಣೆದಾಯಕ ಕಥೆಗಳನ್ನು ಹೇಳುವ ಜತೆಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದೇ ಆದರೆ ದೇಶಕಟ್ಟುವ ಉತ್ತಮ ನಾಗರೀಕರಾಗುತ್ತಾರೆ ಎಂದರು.
ಸಮುದಾಯದ ಮುಖಂಡ ಎಸ್.ಆರ್.ಎಸ್ ದೇವರಾಜ್ ಮಾತನಾಡಿ ಶಿವಾಜಿ ಮಹಾರಾಜರು ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ ಮೇರು ವ್ಯಕ್ತಿತ್ವವುಳ್ಳ ಮಹಾರಾಜರಾಗಿದ್ದರು.ಇವರ ಆಡಳಿತದ ಅವಧಿಯಲ್ಲಿ ಹಿಂದೂಧರ್ಮದ ಪುನರುತ್ಥಾನ ಸಾಧ್ಯವಾಯಿತು.ಸರ್ವಧರ್ಮಸಹಿಷ್ಣುವಾಗಿದ್ದ ಶಿವಾಜಿ ಮಹಾರಾಜರು ಅತ್ಯುತ್ತಮವಾದ ಸೈನಿಕ ವ್ಯವಸ್ಥೆಯನ್ನು ಹೊಂದಿದ್ದರು.ತಾಯಿಗೆ ತಕ್ಕ ಮಗನಾಗಿದ್ದ ಇವರು ಜನನಿ ಮತ್ತು ಜನ್ಮ ಭೂಮಿಗಾಗಿ ಯಾವ ತ್ಯಾಗಕ್ಕೂ ನಾವು ಸಿದ್ದರಿರಬೇಕು ಎಂದು ಸಾರಿದ ಮಹಾತ್ಮರು. ಇವರ ಜಯಂತಿಯಲ್ಲಿ ಪಾಲ್ಗೊಂಡು ಅವರು ನಡೆದು ಬಂದ ಹಾದಿಯನ್ನು ಮೆಲುಕು ಹಾಕುವುದೇ ನಮ್ಮ ಪಾಲಿನ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಲತಾರಾವ್,ರಾಘವೇಂದ್ರರಾವ್ ಎನ್,ಅಭಿಘ್ನ ಮೊದಲಾದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎನ್ ಮನಿಷ್ ಸಮಾಜದ ಮುಖಂಡರಾದ ಸುರೇಶ್ಬಾಬು, ನರಸಿಂಹಮೂರ್ತಿ,ಜಯಮುನಿರಾಜ್,ಸತೀಶ್,ರಘು,ದೇವರಾಜ, ಮತ್ತಿತರರಿದ್ದರು.