ಶಿಡ್ಲಘಟ್ಟ: ಶಿಡ್ಲಘಟ್ಟದ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೈಕಲ್ ಶಾಪ್ವೊಂದರ ಮೇಲೆ ಆಹಾರ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ ಮಾರಾಟ ಮಾಡಲು ಇಟ್ಟಿದ್ದ ಸುಮಾರು 100 ಕೆಜಿ ಪಡಿತರ ಅಕ್ಕಿ ಪತ್ತೆಯಾಗಿದ್ದು ಆಹಾರ ಇಲಾಖೆ ವಶಪಡಿಸಿಕೊಂಡಿದೆ.
ಶಿಡ್ಲಘಟ್ಟ ನಗರದ ಪ್ರಥಮ ದರ್ಜೇ ಕಾಲೇಜು ಮುಂಭಾಗದಲ್ಲಿ ನಯಾಜ್ ಅಹಮ್ಮದ್ ಎಂಬುವವರು ನಡೆಸುತ್ತಿರುವ ಸೈಕಲ್ ಶಾಪ್ ವೊಂದರಲ್ಲಿ ಮೂರು ಮೂಟೆ ಪಡಿತರ ಅಕ್ಕಿ ಪತ್ತೆಯಾಗಿದ್ದು ವಶಪಡಿಸಿ ಕೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು ನಯಾಜ್ ಅಹಮ್ಮದ್ ವಿರುದ್ದ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೇದಾರ್ ಧನಲಕ್ಷ್ಮಿ, ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಿ ಹಾಗೂ ಸೌಮ್ಯ. ಸಿಬ್ಬಂದಿ ಹಾಜರಿದ್ದರು.
ಪಡಿತರ ಅಕ್ಕಿ ಕೆಜಿ ಯೊಂದಕ್ಕೆ 15 ರೂ ನಂತೆ ಎಷ್ಟು ಕ್ವಿಂಟಾಲ್ ಬೇಕಾದರೂ ಕೊಡುತ್ತೇನೆ, ಎಂದಿರುವ ದೂರವಾಣಿ ಆಡಿಯೋ ಕೇಳಿ, ಖುದ್ದು ಆಹಾರ ನಿರೀಕ್ಷಕಿ ದೂರವಾಣಿಗೆ ಕರೆ ಮಾಡಿ ಸಂಪರ್ಕಿಸಿದಾಗ 15 ರೂ ನಂತೆ ಅಕ್ಕಿ ನೀಡುವುದಾಗಿ ಹೇಳಿ ನಗರದ ಪ್ರಥಮ ದರ್ಜೆ ಕಾಲೇಜು ಮುಂಭಾಗ ಬಂದು ಕರೆ ಮಾಡುವಂತೆ ಹೇಳಿರುದ್ದಾನೆ.
ಅದರಂತೆ ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಿ ಸೇರಿದಂತೆ ಸಿಬ್ಬಂದಿ ನಗರದ ಪ್ರಥಮ ದರ್ಜೆ ಕಾಲೇಜು ಬಳಿ ಹೋಗಿ ಅಕ್ಕಿಗಾಗಿ ಕರೆ ಮಾಡಿದಾಗ ಅಂಗಡಿಯ ಸುತ್ತಮುತ್ತಲ ಮನೆಗಳಿಂದ ನಯಾಜ್ ಅಹಮ್ಮದ್ ಮೂರು ಮೂಟೆ ಅಕ್ಕಿ ತಂದು ಮಾರಾಟ ಮಾಡಲು ಸೈಕಲ್ ಶಾಪ್ನಲ್ಲಿಟ್ಟಿದ್ದು ಕಂಡು ಬಂದಿದೆ.