ಚಿಕ್ಕಬಳ್ಳಾಪುರ: ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ಸುತ್ತು-ಮುತ್ತಲ್ಲಿನ ಗ್ರಾಮಗಳಿಂದ ತಿಪ್ಪೇನಹಳ್ಳಿಯ ಮೂಲಕ ಚಿಕ್ಕಬಳ್ಳಾಪುರ ನಗರಕ್ಕೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ತೆರಳಲು ತಿಪ್ಪೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾರಿಗೆ ಬಸ್ಸು ನಿಲ್ಲಿಸುವ ವ್ಯವಸ್ಥೆ ಕಲ್ಪಿಸಿ, ಬುಧವಾರ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್ ರವರು ‘ಕೋರಿಕೆ ನಿಲುಗಡೆ’ ಫಲಕವನ್ನು ಅಳವಡಿಸಿ ಹಸಿರು ನಿಶಾನೆ ತೋರಿದರು.
ಈ ಕುರಿತು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸ್ವತಃ ವಿದ್ಯಾರ್ಥಿಗಳು ದೂರನ್ನು ಸಲ್ಲಿಸಿ, ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ಸುತ್ತು-ಮುತ್ತಲ್ಲಿನ ಗ್ರಾಮಗಳಿಂದ ತಿಪ್ಪೇನಹಳ್ಳಿಯ ಮೂಲಕ ಚಿಕ್ಕಬಳ್ಳಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಅವರಿಗೆ ಸಮಯಕ್ಕೆ ಸಾರಿಗೆ ನಿಲುಗಡೆ ನೀಡದ ಕಾರಣ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ತೆರಳಲು ಕಷ್ಟವಾಗಿದೆ. ಎಸ್.ಆರ್.ಟಿ.ಸಿ.ಬಸ್ ನಿಲುಗಡೆಯಾಗದ ಕಾರಣ ಶಾಲಾ-ಕಾಲೇಜುಗಳಿಗೆ ದಿನನಿತ್ಯ ಆಟೋಗಳಲ್ಲಿ 30 ರೂಗಳನ್ನು ಭರಿಸಿ ಹೋಗಲು ಆಗದೆ ವಾರದಲ್ಲಿ 3-4 ದಿನ ಶಾಲೆಗೆ ರಜೆ ಹಾಕುವಂತಾಗಿದ್ದು, ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್ ಅವರು, ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಎಲ್ಲಾ ಸಾರಿಗೆ ಬಸ್ಸುಗಳು ನಿಲುಗಡೆ ನೀಡುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು, ವಕೀಲರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.