ಪಾಲಾರ್ ಪತ್ರಿಕೆ| Palar Patrike
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಇವರ ಸಹಯೋಗದಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಮಕ್ಕಳಲ್ಲಿ ಅದಮ್ಯವಾಗಿರುವ ಸೃಜನಾತ್ಮಕ ಕೌಶಲ ಮತ್ತು ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಸಮಾಜದಲ್ಲಿ ಉತ್ತಮ ಮಕ್ಕಳನ್ನಾಗಿ ಪೋಷಿಸಲು ಪ್ರತಿಭಾ ಕಾರಂಜಿ ಪಠ್ಯಪೂರಕ ಸಾಧನವಾಗಿ ಮೂಡಿಬರುತ್ತಿದೆ. ಇದಕ್ಕೆ ಶಿಕ್ಷಕರು ಮಕ್ಕಳಿಗೆ ಪೂರಕ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಿಸಿ ಕೊಡಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಯಟ್ ಪ್ರಾಂಶುಪಾಲರಾದ ಕೆ. ಮಂಜುನಾಥ್ ಅವರು ಮಾತನಾಡಿ, ಮಕ್ಕಳ ಕಲಿಕೆ ಕೌಶಲ್ಯಾಧಾರಿತವಾಗಿ ರೂಪುಗೊಳ್ಳಲು ಪ್ರತಿಭಾ ಕಾರಂಜಿ ಒಂದು ಉತ್ತಮ ಸಾಧನವಾಗಿ ಅನಾವರಣಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ಜಿಲ್ಲೆಯ ಆರ್.ಎಂ.ಎಸ್.ಎ. ಉಪಯೋಜನಾ ಸಮನ್ವಯಾಧಿüಕಾರಿ ರಂಗಧಾಮಪ್ಪ ಮಾತನಾಡಿ, ಪ್ರತಿಭಾ ಕಾರಂಜಿಯ ತಾತ್ವಿಕ ನಿಲುವನ್ನು ಅಭಿವ್ಯಕ್ತಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ. ಉಪ ಸಮನ್ವಯಾಧಿಕಾರಿ ಅನಂತಕುಮಾರ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಪ್ರಾಥಮಿಕ ಶಾಲಾ ಅಧ್ಯಕ್ಷ ಪರಶಿವಮೂರ್ತಿ, ತಾಲ್ಲೂಕು/ ಜಿಲ್ಲಾ ಶಿಕ್ಷಕ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.
ತುಮಕೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಹನುಮನಾಯಕ್, ಡಯಟ್ನ ಅಧಿಕಾರಿ ವರ್ಗದವರು, ಉಪನಿರ್ದೇಶಕ ಕಛೇರಿಯ ವಿಷಯ ಪರಿವೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು, ಮುಖ್ಯಶಿಕ್ಷಕರು, ತೀರ್ಪುಗಾರರು, ಜಿಲ್ಲೆ ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಬಂಧುಗಳು, ಪೋಷಕರು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ಕಲಾ ಪೋಷಕರು ಉಪಸ್ಥಿತರಿದ್ದರು.
ಸರ್ಕಾರಿ ಪ್ರೌಢಶಾಲೆ ಹನುಮಂತಪುರದ ಮಕ್ಕಳ ನಾಡಗೀತೆಯ ಪ್ರಸ್ತುತಿಯೊಂದಿಗೆ ಪ್ರಾರಂಭವಾಯಿತು. ಶಿಕ್ಷಣಾಧಿಕಾರಿ ಮಾಧವರೆಡ್ಡಿ ಸ್ವಾಗತಿಸಿದರು. ಕಾರ್ಯಕ್ರಮದ ನೋಡೆಲ್ ಅಧಿಕಾರಿಗಳು ಹಾಗೂ ಎಸ್.ಎಸ್.ಕೆ. ಸಹಾಯಕ ಸಮನ್ವಯಾಧಿಕಾರಿ ಟಿ.ಜಿ. ಲಾವಣ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.