ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ರಂಗಾಯಣ ಶಿವಮೊಗ್ಗದ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಯುವ ರಂಗೋತ್ಸವ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಎಲ್ಲರನ್ನು ಬರಮಾಡಿಕೊಳ್ಳುತ್ತದೆ. ಆದರೆ ಕೆಲವರನ್ನು ಕೈಹಿಡಿಯುತ್ತದೆ ಎಂದರು.
ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬರಲಾಗುತ್ತಿದೆ. ಹೀಗಾಗಿ ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳ ಜನ ನಾಟಕಗಳನ್ನು ತುಮಕೂರಿಗೆ ಬರುತ್ತಾರೆ. ಇದು ತುಮಕೂರು ಕಲೆಯ ತವರೂರು ಎಂಬುದನ್ನು ತೋರಿಸುತ್ತದೆ ಅಭಿಪ್ರಾಯಪಟ್ಟರು.
ಪೋಷಕರು, ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಕಲೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ರಂಗಾಯಣ ಶಿವಮೊಗ್ಗ ಯುವಕರು-ಯುವತಿಯರನ್ನು ರಂಗಕಲೆಯತ್ತ ಆಕರ್ಷಿಸುವ ಕೆಲಸವನ್ನು ಮಾಡುತ್ತ ಅವರಲ್ಲಿನ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್, ರಂಗಚಟುವಟಿಕೆಗೆ ಅವಕಾಶ ಮಾಡಿಕೊಡುತ್ತಿರುವ ರಂಗಾಯಣಕ್ಕೆ ಅಭಿನಂದನೆಗಳು ಸಲ್ಲಬೇಕು. ಇತ್ತೀಚಿನ ದಿನಗಳಲ್ಲಿ ಕೆಲ ಅಡಚಣೆಗಳಿಂದ ರಂಗ ಚಟುವಟಿಗಳು ನಡೆಯುತ್ತಿರಲಿಲ್ಲ. ರಂಗಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಅಚ್ಯುತ ಕುಮಾರ್, ಅರಸ್ ತುಮಕೂರು ಜಿಲ್ಲೆಯವರು ಮತ್ತು ನಮ್ಮ ವಿದ್ಯಾರ್ಥಿಗಳು ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ ಎಂದರು
ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತದೆ. ವಿದ್ಯಾರ್ಥಿಗಳು ತಾವು ಬೆಳೆಯುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಲು ಸಾಧ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವಂತಹ ಗುಣವನ್ನು ನಾಟಕಗಳು ರೂಪಿಸುತ್ತವೆ. ನಾಟಕ ಎಂದರೆ ಗುಬ್ಬಿ ವೀರಣ್ಣನವರನ್ನು ಸ್ಮರಿಸದೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದರು.
ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್.ಕೆ.ಕುಮಾರ್ ಮಾತನಾಡಿ, ರಂಗಾಯಣ ಶಿವಮೊಗ್ಗ ಒಳ್ಳೆಯ ಕೆಲಸ ಮಾಡುತ್ತ ಬರುತ್ತಿದೆ. ಯುವರಂಗೋತ್ಸವ ಹಮ್ಮಿಕೊಂಡು ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ನಾಟಕರಂಗದತ್ತ ಬರುವಂತೆ ಮಾಡುವ ಉತ್ತಮ ಕೆಲಸ ಮಾಡುತ್ತಿದೆ. ಪಾಠದ ಜೊತೆಗೆ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದರು.
ವಿಶ್ವವಿದ್ಯಾಲಯದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಶಾಲಿನಿ ಮೆಟೀರಿಯಲಿಸ್ಟಿಕ್ ಜೀವನದಲ್ಲಿ ನಾಟಕಗಳನ್ನು ನೋಡುವಂತಹ ಪ್ರೋತ್ಸಾಹಿಸುವಂತಹ ಕೆಲಸ ಆಗಬೇಕು. ಮೊಬೈಲ್ ನಲ್ಲಿ ಹೆಚ್ಚು ತಲ್ಲೀನರಾಗಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಗಳನ್ನು ಮತ್ತಷ್ಟು ಒದಗಿಸಲಿ ಎಂದರು. ಕುಣಿಗಲ್ ಕಾಲೇಜು ಪ್ರಾಂಶುಪಾಲ ನಿಂಗಯ್ಯ ಮಾತನಾಡಿ ನಾಟಕಗಳು ಸಮಾಜದಲ್ಲಿರುವ ಸಮಸ್ಯೆಗಳನ್ನು ಬಿಂಬಿಸುತ್ತಾ ಹೋಗುತ್ತವೆ. ಜನರನ್ನು ತಿದ್ದುವ ಕೆಲಸ ಮಾಡುತ್ತವೆ. ಇಂತಹ ನಾಟಕೋತ್ಸವಗಳು ಇನ್ನು ಹೆಚ್ಚು ಹೆಚ್ಚು ನಡೆಯಲಿ ಎಂದರು.
ಯುವ ರಂಗೋತ್ಸವದ ಜಿಲ್ಲಾ ಸಂಚಾಲಕ ಉಗಮ ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು. ನಂತರ ವಿಶ್ವವಿದ್ಯಾಲಯ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ ವೀರ ವನಿತೆ ಓಬವ್ವ ನಾಟಕ ಪ್ರದರ್ಶನ ನಡೆಯಿತು.