ಚಿಕ್ಕಬಳ್ಳಾಪುರ: ವಿದ್ಯೆಯೇ ಬಾಳಿನ ಬೆಳಕು, ವಿದ್ಯೆಯಿಂದ ಎಲ್ಲವನ್ನು ಪಡೆಯಲು ಹಾಗೂ ಉನ್ನತ ಸಾಧನೆ ಮಾಡಲು ಸಾಧ್ಯವಿದೆ, ಪ್ರತಿಯೊಬ್ಬರು ಶಿಕ್ಷಣದ ಮಹತ್ವನ್ನು ಅರಿತುಕೊಳ್ಳಬೇಕಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭೈರಪ್ಪ ಶಿವಲಿಂಗ ನಾಯಿಕ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಅವರು ಬುಧವಾರ ನಗರದ ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ವಕೀಲರ ಸಂಘ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಪಾಲಕರ ನಿರ್ಲಕ್ಷ್ಯದಿಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 6 ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗುಳಿದ್ದಿದ್ದರು. ಅವರನ್ನು ಮರಳಿ ಶಾಲೆಗೆ ಕರೆತರಲಾಗಿದೆ. ಮಹಿಳೆಯರಿಗೆ ಹಲವಾರು ಮೀಸಲಾತಿಗಳನ್ನು ಹಾಗೂ ವಿಶೇಷ ಅವಕಾಶಗಳನ್ನು ಸಂವಿಧಾನದಲ್ಲಿ ನೀಡಲಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಕಿರುಕುಳ, ಬಾಲ್ಯ ವಿವಾಹಕ್ಕೆ ಒತ್ತಡ ಹಾಗೂ ಶಾಲೆಗೆ ಕಳುಹಿಸದಿದ್ದರೇ ಅಂತಹವರು ಸಹಾಯವಾಣಿ 1098 ಕ್ಕೆ ಸಂಪರ್ಕಿಸಿ ಕೂಡಲೇ ಮಾಹಿತಿ ನೀಡಬಹುದು, ಇಲ್ಲವಾದಲ್ಲಿ ಹತ್ತಿರದ ಪೋಲಿಸ್ ಠಾಣೆ ಅಥವಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿಗೆ ತಿಳಿಸಿದರೆ ಸಾಕು ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲು ಸಕ್ಷಮ ಪ್ರಾಧಿಕಾರಗಳು ಮುಂದಾಗುತ್ತವೆ ಜೊತೆಗೆ ಸರ್ಕಾರದಿಂದ ಸಂತ್ರಸ್ತ ರಿಗೆ ಉಚಿತ ಶಿಕ್ಷಣ, ವಸತಿ, ಊಟ, ಸಾಂತ್ವನ, ರಕ್ಷಣೆ,ಹಾಗೂ ಕಾನೂನು ನೆರವು ಸೌಲಭ್ಯ ವನ್ನು ಸ್ವಯಂ ಪ್ರೇರಿತವಾಗಿ ಮಾಡುತ್ತವೆ ಎಂದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡುತ್ತಾ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಎಲ್ಲರ ತಂಡಕಾರ್ಯದಿಂದ ಮರಳಿ ಶಾಲೆಗೆ ಕರೆತರಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ಶಾಲಾ ಶಿಕ್ಷಕರಿಗೆ ಅಥವಾ ಸಂಬಂಧಪಟ್ಟವರಿಗೆಗೆ ತಿಳಿಸಿದಲ್ಲಿ ಪ್ರಮಾಣಿಕ ಪರಿಹಾರವನ್ನು ನೀಡಲಾಗುತ್ತದೆ ಯಾರು ಕೂಡ ಶಿಕ್ಷಣ ಹಾಗೂ ಮೂಲಭೂತ ಅಗತ್ಯ ಸೌಕರ್ಯಗಳಿಂದ ವಂಚಿತರಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಕುಂದು ಕೊರತೆಗಳನ್ನು ನ್ಯಾಯಾಧೀಶರೊಂದಿಗೆ ಹಂಚಿಕೊಂಡರು. ಈ ವೇಳೆ ಗೌರವಾನ್ವಿತ ನ್ಯಾಯಾಧೀಶರು ಶಾಲೆಯಿಂದ ಹೊರಗುಳಿದು ಮರಳಿ ಬಂದ 6 ವಿದ್ಯಾರ್ಥಿಗಳಿಗೆ ಅಭಿನಂದಿಸಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯರಾಮರೆಡ್ಡಿ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೃಷ್ಣಕುಮಾರಿ ಸೇರಿದಂತೆ ಹಾಗೂ ವಕೀಲರು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.