ಚಿಕ್ಕಬಳ್ಳಾಪುರ: 1976ರ ಜೀತಗಾರಿಕೆ ಪದ್ದತಿ ನಿರ್ಮೂಲನೆ ಕಾಯ್ದೆಯ ಕಲಂ13(2) ರನ್ವಯ ಜಿಲ್ಲಾ ಜಾಗೃತಿ ಸಮಿತಿಯ ಪುನರ್ ರಚನೆ ಸಂಬಂಧ ಸದಸ್ಯರುಗಳ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 11ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ “1976ರ ಜೀತಗಾರಿಕೆ ಪದ್ದತಿ ನಿರ್ಮೂಲನೆ ಕಾಯ್ದೆಯ ಕಲಂ13(2) ರನ್ವಯ ರಚಿತವಾಗಿರುವ ಜಿಲ್ಲಾ ಜಾಗೃತಿ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಡಳಿತ ಕಳೆದ ಅಕ್ಟೋಬರ್ ಮಾಹೆಯಲ್ಲಿ ಜೀತಗಾರಿಕೆ ಪದ್ದತಿ ನಿರ್ಮೂಲನೆ ಕಾಯ್ದೆಯನ್ವಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರುಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಎಲ್ಲಾ ಪ್ರವರ್ಗಗಳಲ್ಲಿ ಸದಸ್ಯರ ಆಯ್ಕೆಗಾಗಿ ಅರ್ಜಿಗಳು ಸಮರ್ಪಕವಾಗಿ ಸ್ವೀಕಾರ ಆಗಿಲ್ಲದ ಕಾರಣ ಒಂದು ತಿಂಗಳ ಅವಧಿಗೆ ಅಂದರೆ ಫೆಬ್ರವರಿ 11 ರವರೆಗೆ ದಿನಾಂಕವನ್ನು ವಿಸ್ತರಿಸಲು ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಈ ಸಮಿತಿಯ ಸದಸ್ಯತ್ವದ ಆಯ್ಕೆ ಬಯಸುವವರಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 11ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು.
ಈ ಸಮಿತಿಯ ಸದಸ್ಯತ್ವದ ಪ್ರವರ್ಗ,ಸದಸ್ಯರ ವಿವರ, ಪ್ರಾತಿನಿದ್ಯ, ಸ್ಥಾನಮಾನ, ಸಲ್ಲಿಸಬೇಕಾಗಿರುವ ದಾಖಲೆಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಚೇರಿಯ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಫೆಬ್ರವರಿ 11 ರ ಒಳಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಜೀತಪದ್ದತಿ 1976 ರ ಕಲಂ 13 (2) ರಡಿ ಪ್ರವರ್ಗ (ಡಿ) ಕ್ಕೆ ಸಂಬಂಧಿಸಿದಂತೆ ಸದಸ್ಯರನ್ನು ನೇಮಕ/ಆಯ್ಕೆ ಮಾಡುವ ಪ್ರಾಧಿಕಾರ ಸರ್ಕಾರವಾಗಿರುವುದರಿಂದ ಈ ಪ್ರವರ್ಗದ ಸದಸ್ಯರನ್ನು ನೇಮಕ ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಜರುಗಿಸಬೇಕಾಗಿರುತ್ತದೆ. ಆದ್ದರಿಂದ ಪ್ರವರ್ಗ (ಡಿ)ಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು ಅಗತ್ಯ ಕ್ರಮಕ್ಕಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು ಉಳಿದ ಪ್ರವರ್ಗಗಳಲ್ಲಿನ ಸದಸ್ಯರನ್ನು ಜಿಲ್ಲಾ ಮಟ್ಟದಲ್ಲಿಯೇ ಸಂದರ್ಶನ/ಸಭೆಯ ಮೂಲಕ ಆಯ್ಕೆ ಮಾಡಲಾಗುವುದು. ಈ ಸಮಿತಿಯ ಆಯ್ಕೆ ಬಯಸಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಹೆಚ್. ಅಮರೇಶ್, ಜಿಲ್ಲಾ ಜಾಗೃತಿ ಸಮಿತಿ ಸಭೆಯ ಸದಸ್ಯರಾದ ರತ್ನಮ್ಮ, ಹನುಮಂತು, ನಾರಾಯಣಸ್ವಾಮಿ, ವಿ.ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.