ತುಮಕೂರು : ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಂದನಕೆರೆ ಗ್ರಾಮದ ನೆಲ-ಜಲ ರೈತ ಉತ್ಪಾದಕರ ಕಂಪನಿಯ ಸಹಯೋಗದಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಗ್ರಾಮದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯಡಿ ಶುಕ್ರವಾರ ರಾಗಿ ಬೆಳೆಯ ಕೆ.ಎಮ್.ಆರ್-630 ತಳಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ದರ್ಶನ್ ಮಾತನಾಡಿ ರಾಗಿ ಬೆಳೆಯ ಕೆ.ಎಮ್.ಆರ್-630 ತಳಿಯು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾಗಿದ್ದು, ಈ ತಳಿಯು ಅಲ್ಪಾವಧಿಯಲ್ಲಿ ಅಧಿಕ ಇಳುವರಿಯಂದಿಗೆ ಬೆಂಕಿ ರೋಗ ಮತ್ತು ಬುಡ ಕೊಳೆ ರೋಗ ನಿರೋಧಕತೆಯನ್ನು ಹೊಂದಿದೆ. ಈ ತಳಿಯ ರಾಗಿ ತೆನೆಯು ಹಾಲು ಬಿಳಿ ಬಣ್ಣದಿಂದ ಕೂಡಿದ್ದು, ಮಾಗಿದಾಗ ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಇಲುಕುಗಳು ಮುದುಡಿದ್ದು, ತೆನೆಯು ಮುಷ್ಟಿಯಾಕಾರದಲ್ಲಿರುತ್ತದೆ. ಕೊನೆಯ ಮುಂಗಾರಿಗೆ (ಜುಲೈ-ಆಗಸ್ಟ್) ಹಾಗೂ ಬೇಸಿಗೆಗೆ (ಜನವರಿ – ಫೆಬ್ರವರಿ) ಈ ತಳಿ ಬೆಳೆಯಲು ಸೂಕ್ತವಾಗಿದೆ. ನೀರಾವರಿ ಪ್ರದೇಶದಲ್ಲಿ ಪ್ರತಿ ಎಕರೆಗೆ 18-20 ಕ್ವಿಂಟಾಲ್ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ 14-15 ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಈ ತಳಿ ಹೊಂದಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತç ವಿಭಾಗದ ಡಾ|| ಪದ್ಮನಾಭನ್ ಅವರು ರಾಗಿಯಲ್ಲಿ ಪಾಲಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಹಾಗೂ ನ್ಯಾನೋ ಯುರಿಯಾ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದರು.
ಗೃಹ ವಿಜ್ಞಾನಿ ಡಾ. ನಿತ್ಯಶ್ರೀ ಮಾತನಾಡಿ ರೈತರು ರಾಗಿ ಬೆಳೆ ಉತ್ಪಾದನೆಯ ಜೊತೆಗೆ ಮೌಲ್ಯವರ್ಧನೆ ಮಾಡಿ ಉದ್ಯಮಿಗಳಾಗಬೇಕೆಂದು ಕರೆ ನೀಡಿದರು.
ಯೋಜನೆಯ ಫಲಾನುಭವಿಗಳು ಹಾಗೂ ರೈತರು ಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.