ಪಾಲಾರ್ ಪತ್ರಿಕೆ | Palar Patrike
ರಾಮನಗರ : ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಘಾತಗಳಾವುದು ಭಾರತ ದೇಶದಲ್ಲಿ. ಹೀಗಾಗಿ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ಮಹತ್ವ ತಿಳಿದುಕೊಳ್ಳಬೇಕು ಎಂದು ವಿಕೋಪ ಮತ್ತು ಪ್ರಥಮ ಚಿಕಿತ್ಸೆಯ ರಾಷ್ಟಿçÃಯ ತರಬೇತುದಾರ ಎಂ.ಎ. ಷಕೀಬ್ ತಿಳಿಸಿದರು.
ನಗರದ ಗುರುಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಮನಗರ ಜಿಲ್ಲಾ ಶಾಖೆ ವತಿಯಿಂದ ಪರಿಷೋಷಣಂ ಯೋಜನೆಯಡಿಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಎರಡು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಥಮ ಚಿಕಿತ್ಸೆ ಬಗ್ಗೆ ಎಲ್ಲರೂ ಕನಿಷ್ಠ ಮಾಹಿತಿಯನ್ನಾದರೂ ಹೊಂದುವುದು ಅಗತ್ಯ ಇದರಿಂದ ತುರ್ತು ಸಂದರ್ಭಗಳನ್ನು ಎದುರಿಸಬಹುದು. ಅವಘಡಗಳಿಗೆ ಎಡೆಮಾಡಿಕೊಡದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಕೂಡ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಇಂದು ಪ್ರಥಮ ಚಿಕಿತ್ಸೆಯ ಜ್ಞಾನದ ಅಭಾವದಿಂದ ಎಷ್ಟೋ ಜನರು ಅಸುನೀಗುತ್ತಿರುವುದನ್ನು ನೋಡಿದರೆ ತುಂಬಾ ವಿಷಾದವಾಗುತ್ತದೆ. ಪ್ರಥಮ ಚಿಕಿತ್ಸಾ ಕೌಶಲಗಳು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಅಘಾತ, ಹೃದಯಾಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ. ಇವುಗಳನ್ನು ಕಲಿಯುವ ಮೂಲಕ ವೈದ್ಯರಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕನೂ ಜೀವ ಉಳಿಸಲು ಶಕ್ತರಾಗಬೇಕು. ಯಾವಾಗ, ಯಾರಿಗೆ, ಯಾವ ರೀತಿಯ ತುರ್ತು ಸಂದರ್ಭಗಳು ಎದುರಾಗುತ್ತವೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಹೀಗಾಗಿ, ಎಲ್ಲ ಸಮಯವನ್ನೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂದರು.
ಕಾರ್ಯಾಗಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಜಮೀರ್ ಪಾಷಾ ಉದ್ಘಾಟಿಸಿದರು. ಜೂನಿಯರ್ ರೆಡ್ ಕ್ರಾಸ್ ರಾಜ್ಯ ಶಾಖೆಯ ಸಮನ್ವಯ ಅಧಿಕಾರಿ ಡಿ.ಜಿ. ಆನಂದ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಮನಗರ ಜಿಲ್ಲಾ ಶಾಖೆಯ ಅಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಉಪಾಧ್ಯಕ್ಷ ವಿ. ಬಾಲಕೃಷ್ಣ, ಕಾರ್ಯದರ್ಶಿ ಎಸ್. ರುದ್ರೇಶ್ವರ, ಖಜಾಂಚಿ ಎಂ. ಪರಮಶಿವಯ್ಯ, ಪರಿಷೋಷಣಂ ಅಧಿಕಾರಿ ಕೆ.ಎಚ್. ಚಂದ್ರಶೇಖರಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್. ಶಂಕರಯ್ಯ, ಕೆಂಪೇಗೌಡ, ಸಿಖ್ ಬತ್ ಉಲ್ಲಾ ಖಾನ್, ವಿ. ನರೇಂದ್ರ ಇದ್ದರು. ಶಿಕ್ಷಕಿ ಅನಿತಾ ಪ್ರಾರ್ಥಿಸಿದರು.