ಪಾಲಾರ್ ಪತ್ರಿಕೆ |Palar Pathrike
ಚನ್ನಪಟ್ಟಣ:‘ಶರವೇಗದಲ್ಲಿ ಬೆಳೆಯುತ್ತಿರುವ ವೈಜ್ಞಾನಿಕ ಕ್ಷೇತ್ರಕ್ಕೆ ಪೂರಕವಾದ ಆವಿಷ್ಕಾರ ಮಾಡುವ ಮೂಲಕ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಕರೆ ನೀಡಿದರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಬಾಲು ಆಸ್ಪತ್ರೆ, ಬಾಲು ಪಬ್ಲಿಕ್ ಶಾಲೆ ಹಾಗೂ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ, ಎಲ್.ಎಸ್.ಐ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಹೊರ ತೆಗೆಯುವುದು ಅವಶ್ಯಕ. ಅದರಲ್ಲೂ ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಬಹಳ ಆಸಕ್ತಿ ಇರುವುದರಿಂದ ಮಕ್ಕಳ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುವ ಈ ರೀತಿಯ ವಿಜ್ಞಾನ ವಸ್ತು ಪ್ರದರ್ಶನಗಳ ಅಗತ್ಯವಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಬಾಲು ಆಸ್ಪತ್ರೆಯ ವೈದ್ಯೆ ಡಾ.ಕೆ.ಪಿ. ಶೈಲಜಾ ಮಾತನಾಡಿ, ದೇಶದ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಮಹಾನ್ ವಿಜ್ಞಾನಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜೊತೆಗೆ, ಯುವ ವಿಜ್ಞಾನಿಗಳು ಹಲವಾರು ಸಾಧನೆ ಮಾಡುತ್ತಿದ್ದಾರೆ ಎಂದು
ಹೇಳಿದರು.
ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸಣ್ಣಪುಟ್ಟ ಆವಿಷ್ಕಾರಗಳನ್ನು ಮಾಡುವ ಮೂಲಕ ದೊಡ್ಡ ದೊಡ್ಡ ಆವಿಷ್ಕಾರಗಳ ಕನಸು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ವಸಂತಕುಮಾರ್, ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ. ವೆಂಕಟಸುಬ್ಬಯ್ಯ ಚೆಟ್ಟಿ, ಜಂಟಿ ಕಾರ್ಯದರ್ಶಿ ವಿ. ಬಾಲಸುಬ್ರಮಣ್ಯಂ, ಟ್ರಸ್ಟಿ ಕವಿತಾ, ಪ್ರಾಂಶುಪಾಲೆ ಕವಿತಾ, ಉಪ ಪ್ರಾಂಶುಪಾಲೆ ಮೆಹರ್ ಸುಲ್ತಾನ್, ವಿಜ್ಞಾನ ಶಿಕ್ಷಕರಾದ ವಿನೋದ್, ಮನು, ಶಶಿಕುಮಾರ್ ಇದ್ದರು.