ಪಾಲಾರ್ ಪತ್ರಿಕೆ | Palar Pathrike
ಪಾವಗಡ : ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಎಂದಾಕ್ಷಣ ಸೇವಾ ಯಜ್ಞಕ್ಕೆ ಮತ್ತೊಂದು ಹೆಸರು ಎನ್ನಬಹುದು. ಬಹುಶಃ ವರ್ಷಾಂತ್ಯದಲ್ಲಿ ನೆಮ್ಮದಿಯಿಂದ ಭಗವಂತನ ಸ್ಮರಣೆ ಹಾಗೂ ಜಪದೊಂದಿಗೆ ಕಳೆಯೋಣಾ ಎಂಬ ಚಿಂತನೆಯನ್ನು ಮಾಡುತ್ತಿದ್ದ ಸ್ವಾಮಿ ವಿವೇಕಾನಂದ ತಂಡಕ್ಕೆ ಪೂಜ್ಯ ಸ್ವಾಮಿ ಜಪಾನಂದಜೀ ರವರ ಆದೇಶ ಬಂದಿರುತ್ತದೆ. ಇದೀಗ ತಮಿಳುನಾಡಿನ ಮಹಾಬಲಿಪುರಂ, ಮಾಮ್ಮಲಪುರಂ, ಕೋವಲಂ ಹಾಗೂ ಪಾಂಡಿಚೆರಿಯ ಸನಿಹದಲ್ಲಿನ ಸಮುದ್ರ ತೀರದ ಸರಿಸುಮಾರು 50 ಗ್ರಾಮಗಳನ್ನು ಗುರುತಿಸಿದ್ದು ಈಗಾಗಲೇ ಸಂಸ್ಥೆಯ ಹಿರಿಯ ಸಂಯೋಜಕರು ಅಲ್ಲಿಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ಕಲೆ ಹಾಕಿರುತ್ತಾರೆ. ಇತ್ತೀಚಿನ ವರದಿ ಪ್ರಕಾರ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಈ ಚಂಡಮಾರುತ ಜನಸಾಮಾನ್ಯರಿಗೆ ಅದರಲ್ಲಿಯೂ ಮೀನುಗಾರರಿಗೆ ಬಹಳಷ್ಟು ಕಷ್ಟಗಳನ್ನು ತಂದೊಡ್ಡಿದೆ. ಹಾಗಾಗಿ ಎಂದಿನಂತೆ ಇನ್ಫೋಸಿಸ್ ಫೌಂಡೇಷನ್ನ ಪ್ರಾಯೋಜಕತ್ವದಲ್ಲಿ ಸ್ವಾಮಿ ಜಪಾನಂದಜೀ ರವರು ಒಂದು ಯೋಜನೆಯನ್ನು ರೂಪಿಸಿರುತ್ತಾರೆ, ಈ ಯೋಜನೆಯ ಪ್ರಕಾರ ಸುಮಾರು 2500 ಸಂತ್ರಸ್ತ ಕುಟುಂಬಗಳಿಗೆ ದಿನಸಿ, ಟಾರ್ಪಾಲಿನ್, ವಸ್ತ್ರಗಳು, ಕಂಬಳಿ ಇತ್ಯಾದಿಗಳನ್ನು ನೀಡಲು ಅಣಿಯಾಗುತ್ತಿದೆ ಈ ತಂಡ. ಸಂತ್ರಸ್ತರ ಬೇಡಿಕೆಗೆ ಮನವೊಲಿದು ಅವರಿಗೆ ಬೇಕಾದ ಆಹಾರ ಧಾನ್ಯಗಳು ಅಂದರೆ, ಅಕ್ಕಿ, ಬೇಳೆ, ಗೋಧಿ ಹಿಟ್ಟು, ಸಕ್ಕರೆ, ಟೀಪುಡಿ, ಸಾಂಬಾರು ಪದಾರ್ಥಗಳು, ಸೋಪು ಹಾಗೂ ಶುಚಿತ್ವದ ಕಿಟ್ಗಳನ್ನು ವಿತರಿಸಲಾಗುವುದು. ಈ ಯೋಜನೆಯ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕಳೆದ 40 ವರ್ಷಗಳಿಂದ ನಾನಾ ರೀತಿಯ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಾ ಬಂದಿದ್ದು, ಕೋವಿಡ್ ಸಮಯದಲ್ಲಂತೂ ಸುಮಾರು 50000ಕ್ಕೂ ಹೆಚ್ಚು ಜನರಿಗೆ ತತ್ಕ್ಷಣದ ಪರಿಹಾರವನ್ನು ನೀಡಿದ ಮಾನವತಾವಾದಿ ಸ್ವಾಮೀಜಿಯವರು.
ಸ್ವಾಮಿ ಜಪಾನಂದಜೀ ರವರು ಈ ಸಂದರ್ಭವನ್ನು ತಮ್ಮ ಜೀವನಲ್ಲಿ ಶಿವನ ಸೇವೆ ಎಂಬ ಧ್ಯೇಯದ ಅನುಷ್ಠಾನ ರೂಪವನ್ನು ತಮ್ಮ ತಂಡದವರೊಂದಿಗೆ ತಮಿಳುನಾಡಿಗೆ ಇದೀಗ ಅಂದರೆ ಮುಂದಿನ ವಾರದಲ್ಲಿ ಬೃಹತ್ ಲಾರಿ ಮತ್ತು ಇತರ ವಾಹನಗಳೊಂದಿಗೆ ತೆರಳುತ್ತಿದ್ದಾರೆ. ತಮ್ಮೊಂದಿಗೆ ಸ್ವಾಮಿ ವಿವೇಕಾನಂದ ಯುವ ತಂಡವನ್ನು ಹಾಗೂ ಸಮರ್ಪಣ ಇನ್ಫೋಸಿಸ್ ಸಿ.ಎಸ್.ಆರ್., ಬೆಂಗಳೂರು, ಇನ್ಫೋಸಿಸ್, ಚೆನ್ನೈ ನಗರದ ಸ್ವಯಂಸೇವಕರನ್ನು ಮತ್ತು ವಿವೇಕ ಹಂಸ ಬಳಗದ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಈ ಬಾರಿಯ ಭಯಂಕರ ಚಂಡಮಾರುತದ ಹಾವಳಿ ಸಮುದ್ರ ತೀರದ ಗ್ರಾಮಗಳಿಗೆ ಹೆಚ್ಚು ಆಘಾತ ಉಂಟು ಮಾಡಿದ್ದು ಅಲ್ಲಿಯ ನೊಂದ ಜನರಿಗೆ ಸೇವೆ ಸಲ್ಲಿಸಲು ಕಳೆದ ವಾರದಿಂದಲೂ ಅಣಿಯಾಗುತ್ತಿದ್ದು, ಅಲ್ಲಿಯ ನಿರಂತರ ಮಳೆಯ ಕಾರಣದಿಂದ ಪ್ರಯಾಣವನ್ನು ಬೆಳೆಸಲಾಗಲಿಲ್ಲ. ಇದೀಗ ಬಂದ ಮಾಹಿತಿಯ ಪ್ರಕಾರ ಮಳೆಯ ಸಿಂಚನ ಬಿದ್ದಾಗ್ಯೂ ಪ್ರಯಾಣಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಸ್ಥಿತಿಯಲ್ಲಿ ಪ್ರಯಾಣವನ್ನು ಬೆಳೆಸುತ್ತಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಪ್ರವಾಹ ಪರಿಹಾರ ಯೋಜನೆ ಹಾಗೂ ಬುರೇವಿ, ನಿವಾರ್ ಮುಂತಾದ ಬೀಕರ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು “ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವ” ಮಹಾವಾಕ್ಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. 2022ನೇ ಇಸವಿಯಲ್ಲಿಯೂ ಸಹ ಅನೇಕ ರೀತಿಯ ಪ್ರವಾಹ ಸ್ಥಿತಿಗಳಲ್ಲಿ ಅದರಲ್ಲಿಯೂ ತಿರುಪತಿ, ಕಡಪ, ಚಿತ್ತೂರು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದು, ತದನಂತರ ಉತ್ತರ ಕರ್ನಾಟಕದ ರಾಯಚೂರು ಮುಂತಾದ ಪ್ರದೇಶದಲ್ಲಿ ಉಂಟಾದ ಪ್ರವಾಹ ಪರಿಹಾರ ಯೋಜನೆಯನ್ನು ಕೈಗೊಂಡು ಈ ವರ್ಷದ ಕಾರ್ಯಕ್ರಮಗಳು ಮುಗಿಯಿತು ಎನ್ನುವಷ್ಟರಲ್ಲಿಯೇ ಇದೀಗ ಮತ್ತೆ ದಣಿವರಿಯದ ಕರ್ಮಯೋಗಿಯಂತೆ ತಮ್ಮ ತಂಡದೊಂದಿಗೆ ತಮಿಳುನಾಡಿನ ಸಮುದ್ರ ತೀರದ ಪ್ರದೇಶಗಳಿಗೆ ಪರಿಹಾರ ಸರಕುಗಳನ್ನು ಒಯ್ಯುತ್ತಿರುವುದು ನಿಜಕ್ಕೂ ಸ್ವಾಮಿ ವಿವೇಕಾನಂದರ ಜಗತ್ ಕಲ್ಯಾಣಗಳ ವಿಚಾರಧಾರೆಗಳ ಪ್ರತ್ಯಕ್ಷ ರೂಪವೇ ಸ್ವಾಮಿ ಜಪಾನಂದಜೀ ಎನ್ನಬಹುದು. ಈ ಯೋಜನೆಗಳಿಗೆ ಸದಾ ಸಹಾಯ ಹಸ್ತವನ್ನು ಹಾಗೂ ಸರ್ವ ರೀತಿಯ ಸಹಕಾರವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಷನ್ನ ಜನಪರ ಯೋಜನೆಗಳು ಹಾಗೂ ಚಿಂತನೆಗಳು ನಿಜಕ್ಕೂ ಶ್ಲಾಘನೀಯವಾದುದು