ಪಾಲಾರ್ ಪತ್ರಿಕೆ | Palar Patrike
ಮಂಡ್ಯ:- ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸುತ್ತಿರುವ ಬಾಸ್ಕೆಟ್ ಬಾಲ್ ಆಟದ ಮೈದಾನ ನಿರ್ಮಾಣ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಾಂತಾ ಎಲ್ ಹುಲ್ಮನಿ ರವರ ಕಾಮಗಾರಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶಾಲಾ ಅಭಿವೃದ್ದಿ ಕಾಮಗಾರಿಗಳಾದ ಆಟದ ಮೈದಾನ, ಮಳೆ ನೀರು ಕೊಯ್ಲು, ಅಡುಗೆ ಕೋಣೆ, ಭೋಜನಾಲಯ, ಶೌಚಾಲಯ, ಇಂಗು ಗುಂಡಿ, ಪೌಷ್ಟಿಕ ತೋಟ ಸೇರಿದಂತೆ ಮುಂತಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಎಂದರು.
ದುಡಿಯುವ ಕೈಗಳಿಗೆ ಕೆಲಸ ನೀಡುವ ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ೧೦೦ ದಿನ ಉದ್ಯೋಗ ನೀಡಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ನೀಡುವ ಮೂಲಕ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಹಾಗೂ ಗ್ರಾಮೀಣ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ರೈತರು ಉದ್ಯೋಗ ಅರಸಿ ಬರುವ ಎಲ್ಲರಿಗೂ ನರೇಗಾ ಅಡಿಯಲ್ಲಿ ಸ್ಥಳೀಯವಾಗಿಯೇ ಕೆಲಸ ನೀಡಿ ಎಂದರು.
ನರೇಗಾ ಕೆಲಸಕ್ಕೆ ಗ್ರಾಮೀಣ ಭಾಗದಲ್ಲಿ ಯಾರೇ ಕೆಲಸ ಕೇಳಿದ ೧೫ ದಿನದೊಳಗೆ ಕೆಲಸ ನೀಡಲು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಇದೇ ವೇಳೆ ಹೊಸಹಳ್ಳಿ ಗ್ರಾಮ ವ್ಯಾಪ್ತಿಯ ವಡರಕಟ್ಟೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳ ವೀಕ್ಷಿಸಿ ಕಾಮಗಾರಿಯಲ್ಲಿತೊಡಗಿದ ಕೂಲಿಕಾರರನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ದೀಪು ರವರು, ಪಿಡಿಒ ಕುಮಾರ್, ಮಹದೇವ ಸ್ವಾಮಿ, ತಾಂತ್ರಿಕ ಸಂಯೋಜಕರಾದ ಸುಹಾಸ್, ತಾಲ್ಲೂಕು ಐಇಸಿ ಸಂಯೋಜಕರಾದ ಸುನಿಲ್ ಕುಮಾರ್.ಹೆಚ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.