ಮಾಗಡಿ : ಮಾಗಡಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಇರುವ ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂದು ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಶುಕ್ರವಾರ ದೇಗುಲಕ್ಕೆ ಭಕ್ತರ ದಂಡೇ ಹರಿದುಬಂದಿತು. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಹೂವಿನಿಂದ ಅಲಂಕೃತಗೊಂಡಿದ್ದ ಲಿಂಗ ಆಕಾರದ ಮೂರ್ತಿಯ ಮೇಲ್ಭಾಗದಲ್ಲಿ ಕಣ್ಣುಗಳ ಆಕಾರದಲ್ಲಿ ಕಲೆ ಕಾಣಿಸಿಕೊಂಡಿದ್ದು, ದೇವರೇ ಕಣ್ಣು ಬಿಟ್ಟಿದ್ದಾನೆಂಬ ವದಂತಿ ಪಸರಿಸತೊಡಗಿತ್ತು. ಇದನ್ನು ಕಾಣಲು ಸುತ್ತಮುತ್ತಲಿನ ನೂರಾರು ಜನರು ದೇವಾಲಯಕ್ಕೆ ಬಂದಿದ್ದು, ಕ್ರಮೇಣ ನೂಕುನುಗ್ಗಲು ಉಂಟಾಯಿತು. ಕ್ರಮೇಣ ಭಕ್ತರ ಸಾಲು ಬೆಳೆಯುತ್ತ ಹೋಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಜನರನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು.
ವೈಜ್ಞಾನಿಕ ತನಿಖೆ :
ಲಿಂಗಕ್ಕೆ ಎಣ್ಣೆ ಹಚ್ಚಿದ್ದು, ಅದು ಕೆಳಗೆ ಕಣ್ಣಿನ ಆಕಾರದಲ್ಲಿ ಇಳಿಬಿದ್ದು ಹೀಗಾಗಿರಬಹುದು. ಇಲ್ಲವೇ ಯಾರಾದರೂ ಉದ್ದೇಶಪೂರ್ವಕವಾಗಿ ಹೀಗೆ ಬರೆದಿರಬಹುದು. ಈ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಬೇಕು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು