Thursday, April 25, 2024
spot_img
HomeChikballapurಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 97ನೇ ಜನ್ಮ ದಿನೋತ್ಸವ ಪ್ರಯುಕ್ತ ಶ್ರೀ ಸತ್ಯಸಾಯಿ ಸಂಜೀವನಿ ಹೃದ್ರೋಗ...

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 97ನೇ ಜನ್ಮ ದಿನೋತ್ಸವ ಪ್ರಯುಕ್ತ ಶ್ರೀ ಸತ್ಯಸಾಯಿ ಸಂಜೀವನಿ ಹೃದ್ರೋಗ ಚಿಕಿತ್ಸಾ ಸರಣಿ ಆಸ್ಪತ್ರೆಯ ಲೋಕಾರ್ಪಣೆ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಬದಲಾದ ಜೀವನ ಶೈಲಿಯಿಂದಾಗಿ ಅಮೂಲ್ಯ ಜೀವನಗಳು  ಜೀವನದ ಅರ್ಧ ದಾರಿಯಲ್ಲಿ ಕಮರಿ ಹೋಗುತ್ತಿವೆ. ಅಮೂಲ್ಯ ಜೀವನದ ರಕ್ಷಣೆಯ ಖರ್ಚು ಕೂಡ ಅತ್ಯಂತ ದುಬಾರಿ, ಜನಸಾಮಾನ್ಯರದನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹದ್ರಲ್ಲಿ ಯಾವುದೇ ಬಿಲ್ಲಿಂಗ್ ಕೌಂಟರ್ ನ ವ್ಯವಸ್ಥೆ ಇಲ್ಲದೆ ಉಚಿತ ಜೀವದಾನ ಮಾಡುವ ಸತ್ಯಸಾಯಿ ಆರೋಗ್ಯ ಆಂದೋಲನ  ಪ್ರಪಂಚಕ್ಕೆ ಮಾದರಿ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರು  ಪ್ರೇಮದ ಸಾಕಾರ ಮೂರ್ತಿಯಾಗಿ ಮನುಕುಲದ ನಡುವೆ ಅವತರಿಸಿ ಮಹಾಪೂರವನ್ನು ಹರಿಸಿ  ಮನುಕುಲವನ್ನು ಉದ್ದರಿಸುವ ಕಾರ್ಯವನ್ನು ಮಾಡಿದ್ದರು.  ಅವರು ಮರು ಅವತಾರ ಪಡೆದಿದ್ದಾರೆ ಎಂದರೆ ಅದು ಸದ್ಗುರು ಶ್ರೀ ಮಧುಸೂದನ ಸಾಯಿ ಅಲ್ಲದೆ ಬೇರೆ ಯಾರೂ ಆಗಿರಲು ಸಾಧ್ಯವಿಲ್ಲ. ಉಚಿತ ಆರೋಗ್ಯ ಚಿಕಿತ್ಸೆ, ಶಿಕ್ಷಣ ಮಾನವೀಯ ಅಂತಃಕರಣದ ಮಿಡಿತ ಬಾಬಾರವರ ಕಾರ್ಯ ಚಟುವಟಿಕೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು   ಜಯದೇವ ಹೃದ್ರೋಗ   ವೈದ್ಯಕೀಯ ಸಂಸ್ಥೆಯ  ಮುಖ್ಯಸ್ಥರಾದ  ಡಾಕ್ಟರ್ ಸಿ ಎನ್ ಮಂಜುನಾಥ್  ತಿಳಿಸಿದರು.
ಅವರು ತಾಲೂಕಿನ  ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ  ಭಗವಾನ್ ಶ್ಪೀ ಸತ್ಯಸಾಯಿ ಬಾಬಾ ರವರ 97ನೇ ಜಯಂತಿ ಉತ್ಸವದ  ಸಂದರ್ಭದಲ್ಲಿ  ಸತ್ಯಸಾಯಿ ಗ್ರಾಮದ  ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಸಂಜೀವನಿ ಹೃದ್ರೋಗ   ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ  ಭಾಗವಹಿಸಿ  ಮಾತನಾಡಿದರು.
 ಶ್ರೀ ಸತ್ಯಸಾಯಿ ಸಂಜೀವನಿ  ಹೃದ್ರೋಗ   ಸರಣಿ ಆಸ್ಪತ್ರೆಗಳಲ್ಲಿ ಕರ್ನಾಟಕ ರಾಜ್ಯದ  ಚಿಕ್ಕಬಳ್ಳಾಪುರ ಜಿಲ್ಲೆಯ  ಚಿಕ್ಕಬಳ್ಳಾಪುರ ತಾಲೂಕಿನ  ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ  ಸ್ಥಾಪನೆಗೊಂಡ  ಹೃದ್ರೋಗ ಆಸ್ಪತ್ರೆಯು ಸಂಜೀವನಿ ಸರಣಿ ಆಸ್ಪತ್ರೆಗಳಲ್ಲಿ ಐದನೆಯದಾಗಿದ್ದು  ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ  ಜಿಲ್ಲೆಗಳ ಜನರ ಪಾಲಿಗೆ ಸದ್ಗುರು ಶ್ರೀಮಧುಸೂದನ ಸಾಯಿ ಅವರಿಂದ  ವರರೂಪದಲ್ಲಿ ಲಭಿಸಿದಂತಾಗಿದೆ.  ಗ್ರಾಮೀಣ ಪ್ರದೇಶದ ಜನರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು  ಸಂಪೂರ್ಣ ಉಚಿತವಾದ ಆರೋಗ್ಯ ಸೇವೆಯನ್ನು ಸಲ್ಲಿಸುವುದಕ್ಕೆ ಈ ವೈದ್ಯಾಲಯವು  ಸರ್ವಸನ್ನದ್ಧವಾಗಿದೆ. ಇದುವೇ ಸಂದರ್ಭದಲ್ಲಿ  ಶ್ರೀ ಸತ್ಯಸಾಯಿ ಸಂಜೀವನಿ ಆಸ್ಪತ್ರೆ ಮತ್ತು ಬೆಂಗಳೂರಿನ ಜಯದೇವ ಹೃದಯ ವಿಜ್ಞಾನ ವೈದ್ಯಕೀಯ ಸಂಸ್ಥೆ ತಮ್ಮ ತಮ್ಮೊಳಗೆ  ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿದವು. ಆ ಮೂಲಕ ತಂತ್ರಜ್ಞಾನ ಸಲಹೆ ಮತ್ತು ಸಹಕಾರಗಳ  ವಿನಿಮಯಕ್ಕೆ ಪ್ರಸ್ತಾವನೆಗಳನ್ನು ವಿನಿಮಯ ಮಾಡಿಕೊಂಡವು. ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾಕ್ಟರ್ ಸಿ ಶ್ರೀನಿವಾಸ್ ಸಂಜೀವನಿ ಸರಣಿ ಆಸ್ಪತ್ರೆಗಳ  ಕಾರ್ಯವೈಖರಿ,  ಮುಂದಿನ ಯೋಜನೆಗಳು ಹಾಗೂ ಹಿಂದಿನ ಅನುಭವಗಳ  ಕುರಿತು ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ  ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾತನಾಡಿ   ನನ್ನ ಗುರುಗಳಾದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರು  ಮಾನವ ರೂಪದಲ್ಲಿ ಅವತರಿಸಿ ಬಂದ ಭಗವಂತ. ಮಾನವರನ್ನು ಮಾಧವತ್ವದ ಮಟ್ಟಕ್ಕೆ  ಏರಿಸುವುದೇ ಅವರ ಗುರಿಯಾಗಿತ್ತು. ಅದನ್ನು ಸಾಧಿಸುವ ಸಲುವಾಗಿ  ಪ್ರೇಮದ ಪ್ರವಾಹವನ್ನು ಹರಿಸಿದರು. ಮನುಕುಲದ  ಒಳಿತಿಗಾಗಿ  ಶ್ರಮಿಸಿದರು. ಇಂದು ಇಡೀ ಪ್ರಪಂಚವನ್ನು ಕಾಡುತ್ತಿರುವ  ಸಮಸ್ಯೆಗಳಲ್ಲಿ ಅತ್ಯಂತ ಭೀಕರವಾದದ್ದು  ಆರೋಗ್ಯ ಸಮಸ್ಯೆ. ಅದರ ನಿವಾರಣೆಯಾದರೆ  ಎಲ್ಲವೂ ನಿವಾರಣೆಯಾದಂತೆ. ಪ್ರಪಂಚದ ಯಾವುದೇ ರಾಷ್ಟ್ರವು  ಪೌಷ್ಟಿಕಾಂಶ, ಶಿಕ್ಷಣ ಮತ್ತು ಆರೋಗ್ಯ ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕಾಗಬೇಕೆಂದು  ಹೇಳಿಲ್ಲ. ಆದರೆ ಈ ಮೂರು ವಿಷಯಗಳು ಮಾನವರಿಗೆ ಅತ್ಯಂತ ಅವಶ್ಯಕವಾದ ಜೀವನಾಡಿಗಳು. ಇವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಬೇಕೆಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ. ಅದರಂತೆ ನನ್ನ ಸಂಸ್ಥೆಗಳ ಮೂಲಕ ಇದನ್ನು ಯಥಾರೂಪದಲ್ಲಿ ಪಾಲಿಸುತ್ತಿದ್ದೇನೆ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಪ್ರತಿಯೊಬ್ಬರ ಮೂಲಭೂತ ಹಕ್ಕಾದಾಗ ಸುಖಿ ಸಮಾಜವು ನಿರ್ಮಾಣವಾಗುತ್ತದೆ, ಎಂದು ತಿಳಿಸಿದರು.
ಶ್ರೀ ಸತ್ಯಸಾಯಿ ಸಂಜೀವನಿ ಸರಣಿ ಆಸ್ಪತ್ರೆ ಮೊದಲಿಗೆ ಛತ್ತೀಸ್ಗಡದ ನವ ರಾಯಪುರದಲ್ಲಿ ಇಂದಿಗೆ ಹತ್ತು ವರ್ಷಗಳ ಹಿಂದೆ  ಸ್ಥಾಪನೆಗೊಂಡು  ಇದೀಗ ಮಾನವ ಸೇವೆಯಲ್ಲಿ ಒಂದು ದಶಕವನ್ನು ಪೂರೈಸಿದೆ. ಮುಂಬರುವ 15 ವರ್ಷಗಳಲ್ಲಿ  25 ಉಚಿತ ಹೃದ್ರೋಗ ಚಿಕಿತ್ಸಾ   ಕೇಂದ್ರಗಳನ್ನು  ಪ್ರಪಂಚದಾದ್ಯಂತ ಹೊಂದುವ  ಗುರಿಯನ್ನು ಹೊಂದಿದ್ದು ಆ ನಿಟ್ಟಿನಲ್ಲಿ ಸಾಗಿದೆ ಎಂಬ ವಿಚಾರವನ್ನು  ಈ ಸಂದರ್ಭದಲ್ಲಿ  ಪ್ರಕಟಿಸಲಾಯಿತು.
ಶಿಶು ಹೃದಯಗಳ ಆರೈಕೆಯಲ್ಲಿ  ವಿಶಿಷ್ಟ ಮೈಲುಗಲ್ಲನ್ನು ದಾಟಿ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಶ್ರೀ ಸತ್ಯಸಾಯಿ ಸಂಜೀವನಿ ಸರಣಿ ಆಸ್ಪತ್ರೆ   ಸೇರ್ಪಡೆಗೊಂಡ ವಿಚಾರವನ್ನು  ಡಾ ಸಿ ಶ್ರೀನಿವಾಸ ಅವರು ಪ್ರಕಟಿಸಿ  ಅದರ ಪ್ರಮಾಣ ಪತ್ರವನ್ನು  ಸದ್ಗುರು ಶ್ರೀ ಮಧುಸೂಧನ ಸಾಯಿ ಅವರಿಗೆ ಅರ್ಪಿಸಿದರು.
ಬಾಬಾರವರ ಜನ್ಮ ದಿನೋತ್ಸವದ ಪರವಾಗಿ  ಪ್ರಪಂಚದ ಸುಮಾರು 18 ಭಾಷೆಗಳಲ್ಲಿ  ನೂರಕ್ಕೂ ಅಧಿಕ  ಕೃತಿಗಳು ಲೋಕಾರ್ಪಣೆಗೊಂಡವು. ಶ್ರೀ ಸತ್ಯಸಾಯಿ ಸಂಜೀವನಿ ಹೃದ್ರೋಗ   ಚಿಕಿತ್ಸಾ    ಕೇಂದ್ರ ಮುದ್ದೇನಹಳ್ಳಿ  ಇದರ ಲೋಕಾರ್ಪಣೆ ಸಮಾರಂಭದ ಸಭಾ ವೇದಿಕೆಯಲ್ಲಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ  ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಶ್ರೀ ಬಿ ಎನ್ ನರಸಿಂಹಮೂರ್ತಿ, ಉಪಕುಲಪತಿಗಳಾದ ಡಾ. ಶ್ರೀಕಂಠ ಮೂರ್ತಿ, ಶ್ರೀ ಸತ್ಯಸಾಯಿ ವೈದ್ಯಕೀಯ ಕೇಂದ್ರ ಮುದ್ದೇನಹಳ್ಳಿ ಇದರ ನಿರ್ದೇಶಕರಾದ ಡಾಕ್ಟರ್ ಎಆರ್ ರಘುಪತಿ, ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಾಸುದೇವ ಮೂರ್ತಿ, ಜಯದೇವ ವೈದ್ಯಕೀಯ ಸಂಸ್ಥೆಯ ಡಾಕ್ಟರ್  ಶ್ರೀನಿವಾಸ್, ಡಾಕ್ಟರ್ ಬಿ ಸಿ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.     
ಸದ್ಗುರು ಶ್ರೀ ಮಧುಸೂದನ್ ಸಾಯಿ ಮತ್ತು ಅವರ ಭಕ್ತರು ತಮ್ಮ ಗುರು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಅವರ 97ನೇ ಜನ್ಮದಿನದಂದು ಮನುಕುಲದ ಉಪಯೋಗಕ್ಕೆ   ನೀಡಿದ ಉಡುಗೊರೆ:
1. ಶ್ರೀ ಸತ್ಯಸಾಯಿ ಸಂಜೀವನಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ರೈವಾಲಾ, ಉತ್ತರಾಖಂಡ
2. ಶ್ರೀ ಸತ್ಯಸಾಯಿ ಸಂಜೀವನಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪಲ್ವಲ್, ಹರಿಯಾಣ
3. ಶ್ರೀ ಸತ್ಯಸಾಯಿ ಸಂಜೀವನಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಮ್ಶೆಡ್‌ಪುರ, ಜಾರ್ಖಂಡ್
4. ಶ್ರೀ ಸತ್ಯಸಾಯಿ ಸಂಜೀವನಿ ಪೀಡಿಯಾಟ್ರಿಕ್ ಕಾರ್ಡಿಯಾಕ್ ಕೇರ್ ಸೆಂಟರ್, ಕೊಂಡಪಾಕ, ಸಿದ್ದಿಪೇಟ ಜಿಲ್ಲೆ, ತೆಲಂಗಾಣ
5. ಹೃದಯರಕ್ತನಾಳದ ಅಂಗಾಂಶ ಮತ್ತು ಹೋಮೋಗ್ರಾಫ್ಟ್ ವಾಲ್ವ್ ಬ್ಯಾಂಕ್, ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಆರೈಕೆ ಕೇಂದ್ರ, ಅಟಲ್ ನಗರ, ರಾಯ್ಪುರ, ಛತ್ತೀಸ್‌ಗಢ
6. ಶ್ರೀ ಸತ್ಯ ಸಾಯಿ ಸಂಜೀವನಿ ಹೃದ್ರೋಗ   ಚಿಕಿತ್ಸಾ ಆಸ್ಪತ್ರೆ, ಮುದ್ದೇನಹಳ್ಳಿ, ಕರ್ನಾಟಕ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments