ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ: ನ್ಯಾಯಾಲಯಗಳಲ್ಲಿ ಪ್ರಕಣಗಳ ಇತ್ಯಾರ್ಥ ಶೀಘ್ರವಾಗಿ ಆಗಬೇಕು ಎಂಬ ಉದ್ಧೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಖಾಲಿ ಇದ್ದ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮಾಡಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಬಿಜೆಪಿ ವಕೀಲರ ಪ್ರಕೋಷ್ಟದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ನಾಲ್ಕೂ ಅಂಗಗಳೂ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸ ಮಾಡಬೇಕು. ದೇಶದಲ್ಲಿ ಯಾವುದೇ ಕಾನೂನು ಜಾರಿ ಮಾಡಬಹುದು, ಆದರೆ ಅನುಷ್ಠಾನ ಮಾಡುವುದು ಕಷ್ಟ ಎಂಬ ಸ್ಥಿತಿ ಇದೆ ಎಂದರು.
ಕಾನೂನು ಪಾಲಿಸುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಇದರಿಂದ ಸಂವಿಧಾನದ ಆಶಯ ಗಟ್ಟಿಯಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ವಕೀಲರಿಗೆ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣ, ಕ್ಯಾಂಟಿನ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ವಕೀಲರ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಬಲವರ್ಧನೆಯಾಗಬೇಕು, ನೊಂದವರು, ಬಡವರು ಮತ್ತು ರೈತರಿಗೆ ಸುಲಭವಾಗಿ ಮತ್ತು ವೇಗವಾಗಿ ನ್ಯಾಯ ಸಿಗುವಂತಾಗಬೇಕು, ರೈತರು ಸುಸ್ಥಿತಿಯಲ್ಲಿರಲು ಸುಲಭ ನ್ಯಾಯ ಸಿಗಬೇಕು ಮತ್ತು ವಕೀಲರಿಗೆ ಬಡವರ, ರೈತರಪರ ಧೋರಣೆ ಇರಬೇಕು ಎಂದು ಸಲಹೆ ನೀಡಿದರು.
ತಾವು ಬಿಜೆಪಿ ಪ್ರಣಾಳಿಕೆ ಸಮಿತಿ ಸದಸ್ಯರಾಗಿರುವ ಕಾರಣ ವಕೀಲರೊಂದಿಗೆ ಸಂವಾದ ಏರ್ಪಡಿಸಲು ಚಿಂತಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ದಿನಾಂಕ ನಿಗದಿ ಮಾಡಿ ಕಾರ್ಯಕ್ರಮ ಆಯೋಜಿಸುವುದು ಮತ್ತು ಕೇಂದ್ರ ಕಾನೂನು ಸಚಿವರನ್ನು ಕರೆಯಿಸಿ ಬೆಂಗಳೂರಿನಲ್ಲಿ ಸಂವಾದ ಆಯೋಜಿಸಲು ಚಿಂತಿಸಲಾಗಿದೆ. ಆ ಮೂಲಕ ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.ಅಲ್ಲದೆ ವಕೀಲರ ಸಂರಕ್ಷಣೆ ಕಾಯ್ದೆ ಬಗ್ಗೆ ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸರ್ಕಾರಿ ವಕೀಲರಾದ ಪ್ರಕಾಶ್, ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.