ಪಾಲಾರ್ ಪತ್ರಿಕೆ | Palar Pathrike
ಚಿಕ್ಕಬಳ್ಳಾಪುರ: ಅನ್ನ ರೈತನ ದಾನ. ಸಕಲ ಜೀವ ಜಾಲಕ್ಕೆ ಅನ್ನವನ್ನು ಕೊಡುವ ರೈತನೇ ದೇವರು. ಸರ್ವರಿಗೂ ಅನ್ನ ಕೊಡುವ ರೈತನ ಬದುಕು ಉತ್ತಮವಾಗಿಲ್ಲ. ಈ ನಿಟ್ಟಿನಲ್ಲಿ ಅವರ ಸುಧಾರಿಸಬೇಕಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾವಯವ ಕೃಷಿ ಸಾಮರ್ಥ್ಯ ಅಭಿವೃದ್ಧಿ ಶಿಬಿರದಲ್ಲಿ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿ ಬಹುತೇಕ ಮರೆಯಾಗಿ, ವೈಜ್ಞಾನಿಕ ಪದ್ಧತಿಯಲ್ಲಿ ಬಳಸುವ ರಾಸಾಯನಿಕಗಳಿಂದ ಅಮೃತ ಉಣ್ಣುವ ಬದಲಿಗೆ ವಿಷ ಉಣ್ಣುವಂತಾಗಿದೆ. ಆರೋಗ್ಯವಂತ ಬದುಕಿಗಾಗಿ ಸಾವಯವ ಆಹಾರ ಅತ್ಯಂತ ಮುಖ್ಯವಾಗಿದ್ದು, ಅದನ್ನು ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಕಾಲಕಾಲಕ್ಕೆ ಸರಿಯಾಗಿ ಮಳೆ ಬಂದರೆ ಇಳೆಯು ತಣಿದು ದೇಶದ ಕಷ್ಟಗಳು ಕಳೆದು ಸುಖ ಸಮೃದ್ಧಿ ನೆಲೆಯಾಗುತ್ತದೆ. ಜನರು ನಿರ್ಭೀತಿಯಿಂದ ನೆಮ್ಮದಿ ಬದುಕನ್ನು ಕಾಣಲು ಸಾಧ್ಯವಾಗುತ್ತದೆ. ಸುಖ ಶಾಂತಿಯ ಬದುಕಿಗೆ ಮೂಲಾಧಾರವಾಗಿರುವ ಅನ್ನದಾತ. ಜೈ ಜವಾನ್, ಜೈಕಿಸಾನ್ ಎನ್ನುವಂತೆ ದೇಶದ ಸೈನಿಕರನ್ನು ಗೌರವಿಸಿದಂತೆ ಅನ್ನದಾತನನ್ನು ಗೌರವಿಸಬೇಕಾಗಿದೆ ಎಂದು ನುಡಿದರು.
ಭೂಮಿ ತಾಯಿಗೆ ವಿಷ ಹಾಕಿ ನಾವು ವಿಷವನ್ನು ಉನ್ನುವ ಪರಿಸ್ಥಿತಿಯಿಂದ ಪಾರಾಗಬೇಕಾಗಿದೆ. ರೈತರು ಒಂದಾಗಿ ಒಂದೆಡೆ ಕಲೆತು ಸಾವಯವ ಕೃಷಿಯ ಬಗ್ಗೆ ಅರಿತು ಅದನ್ನು ಪ್ರಯೋಗದಲ್ಲಿ ತಂದು ಇಡೀ ದೇಶದ ಜನರು ಆರೋಗ್ಯವಂತರಾಗಿ ಬಾಳಲು ಮುಂದಾಗಬೇಕು ಎಂದು ತಿಳಿಸಿದರು.
ಶ್ರೀ ಸತ್ಯಸಾಯಿ ಮಾನವ ಅಭಿವೃದ್ಧಿಯ ವಿವಿ ಕುಲಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸತ್ಯಸಾಯಿ ಗ್ರಾಮದಿಂದ ಆರಂಭವಾದ ಜೈವಿಕ ಕೃಷಿಯ ಜಾಗೃತಿ ಯಾತ್ರೆಯು ಮುಂದುವರಿದು ಪ್ರಪಂಚಕ್ಕೆ ಮಾದರಿಯಾಗಬೇಕೆಂಬ ಸದ್ಗುರುಗಳ ಆಶಯವು ನನಸಾಗಲೆಂದು ಆಶಿಸಿದರು.
ಉತ್ಕೃಷ್ಟ ಕೇಂದ್ರ ನಿರ್ದೇಶಕ ಡಾ.ಅಶೋಕ್ಆಲೂರ್, ನಿವೃತ್ತ ಅಧಿಕಾರಿ ಡಾ.ಹಿತ್ತಲಮನಿ, ತಿಪಟೂರಿನ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಗೋವಿಂದೇಗೌಡ, ರಾಜ್ಯ ಸಾವಯವ ಕೃಷಿಯ ಅಧಿಕಾರಯುಕ್ತ ಸಮಿತಿ ಮಾಜಿ ಅಧ್ಯಕ್ಷ ಆನಂದ್ ಆ ಶ್ರೀ, ಹಿರಿಯ ವಿಜ್ಞಾನಿ ಡಾ.ಮಂಜುನಾಥ ರಾಮಣ್ಣ, ಪ್ರಗತಿಪರ ರೈತ ಸಜ್ಜನ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆ ಉಪ ನಿರ್ದೇಶಕÀ ರವೀಂದ್ರನಾಥ್ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಸಂಸ್ಥೆಗಳ ಮುಖ್ಯ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಇದ್ದರು.
ಬಾಕ್ಸ್
ರೈತರ ನೆರವಿಗಾಗಿ ತಂತ್ರಾAಶದ ಅಭಿವೃದ್ಧಿ
ಶ್ರೀ ಸತ್ಯ ಸಾಯಿ ಸಂಸ್ಥೆ ರೈತರ ಬದುಕನ್ನು ಹಸನಾಗಿಸಬಲ್ಲ ಹಲವಾರು ಯೋಜನೆಗಳಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಕಷ್ಟದಲ್ಲಿರುವ ರೈತನ ಅಹವಾಲನ್ನು ಆಲಿಸಿ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವ ತಂತ್ರಾAಶವನ್ನು ಶೀಘ್ರವೇ ರೂಪಿಸಿ ರೈತರಿಗೆ ಸ್ಪಂದಿಸಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಭರವಸೆ ನೀಡಿದರು. ಪರ್ವಸರ್ವ ಸೌಲತ್ತುಗಳು ರೈತನಿಗೆ ನೇರವಾಗಿ ಸಿಗುವ ನಿಟ್ಟಿನಲ್ಲೂ ಸಂಸ್ಥೆಯು ಶ್ರಮಸಲಿದೆ. ಸಾವಯವ ಕೃಷಿ ಪದ್ಧತಿ, ಅದರ ಬೆಳವಣಿಗೆ ಮತ್ತು ಅನುಷ್ಟಾನಗಳ ಕುರಿತು ತಿಳಿಸುವ ಶಿಕ್ಷಣ ವಿಭಾಗವನ್ನು ಶೀಘ್ರದಲ್ಲಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ರೈತರ ಬೆಳೆಗಳಿಗೆ ಯೋಗ್ಯ ಬೆಲೆಯನ್ನು ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದ ಮಾರುಕಟ್ಟೆ ವ್ಯವಸ್ಥೆ, ಕೃಷಿಸಲಕರಣೆಗಳು, ಆಹಾರ ಸಂಸ್ಕರಣ ಘಟಕಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುತ್ತದೆ. ಪ್ರಾಚೀನ ಪದ್ದತಿಯಾದ ಸಾವಯವ ಕೃಷಿ ವಿಧಾನವನ್ನು ಮರಳಿ ಸ್ಥಾಪಿಸಿ ಆರೋಗ್ಯವಂತ ಬದುಕಿಗೆ ಶ್ರೀ ಸತ್ಯಸಾಯಿ ಸಂಸ್ಥೆಯು ಸರ್ವ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ನುಡಿದರು.